ಅರೆ, ರಾಜಕಾರಣ ಅಲ್ಲ ಸ್ವಾಮಿ, ಇದು 'ಹೃದಯ'ಗಳ ವಿಷಯ!
Recommended Video
ಬೆಂಗಳೂರು, ಡಿಸೆಂಬರ್.12: ರಾಜಕಾರಣವೇ ಬೇರೆ, ಪ್ರೀತಿ, ವಿಶ್ವಾಸ, ಸ್ನೇಹ-ಸಂಬಂಧವೇ ಬೇರೆ. ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರ ಭೇಟಿ ಹಾಗೂ ಆತ್ಮೀಯ ಮಾತುಕತೆ ಈ ಮಾತನ್ನು ಸಾಕ್ಷೀಕರಿಸಿತು. ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕರ ನಡುವಿನ ಸಂಭಾಷಣೆ ರಾಜಕಾರಣದಲ್ಲಿ ಯಾರು ಶಾಶ್ವತವಾಗಿ ಶತ್ರುಗಳೂ ಅಲ್ಲ, ಮಿತ್ರರೂ ಅಲ್ಲ ಎಂಬುದನ್ನು ಸಾಬೀತುಪಡಿಸಿತು.
ಹೌದು, ಬೆಂಗಳೂರು ಮಲ್ಲೇಶ್ವರಂನ ವೇಗಾಸ್ ಆಸ್ಪತ್ರೆಯಲ್ಲಿ ಅಂಜಿಯೋಪ್ಲಾಸ್ಟಿ ಚಿಕಿತ್ಸೆ ಪಡೆದಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿ ಮಾಡಲು ಬಿಜೆಪಿ ನಾಯಕರ ದಂಡು ಹರಿದು ಬಂತು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ
ಗುರುವಾರ ನಡೆದ ಸಂಪುಟ ಸಭೆಯ ಬಳಿಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಉಪ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವರಾದ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಸಿದ್ದರಾಮಯ್ಯನವರ ಆರೋಗ್ಯ ವಿಚಾರಿಸಿದರು.
ಬಿಎಸ್ ವೈಗೆ ಚೇರ್ ಹಾಕ್ರಪ್ಪಾ ಎಂದ ಸಿದ್ದು
ಆರೋಗ್ಯ ವಿಚಾರಿಸಲು ತೆರಳಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆತ್ಮೀಯವಾಗಿ ಬರಮಾಡಿಕೊಂಡರು. ಬಿಎಸ್ ವೈ ಆಗಮಿಸುತ್ತಿದ್ದಂತೆ 'ಏ ಯಾರಪ್ಪಾ ಅಲ್ಲಿ, ಮುಖ್ಯಮಂತ್ರಿ ಸಾಹೇಬ್ರಿಗೆ ಚೇರ್ ಹಾಕ್ರಿ' ಎಂದು ನಗುಮುಖದಿಂದಲೇ ಸ್ವಾಗತಿಸಿದರು.
ನೀವು ಆರೋಗ್ಯವಾಗಿದ್ದೀರಾ ಬಿಡಿ ಎಂದ ಸಿಎಂ
ಸಿದ್ದರಾಮಯ್ಯರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಈಗ ಆಸ್ಪತ್ರೆಗೆ ಬಂದಿದ್ದೀರ ವಿಶ್ರಾಂತಿ ತೆಗೆದುಕೊಳ್ಳಿ ಎಂದು ಸಲಹೆ ನೀಡಿದರು. ವೈದ್ಯರು ಏನ್ ಹೇಳಿದ್ರಪ್ಪಾ ಎಂದು ಸಿದ್ದರಾಮಯ್ಯನವರೇ ಬಿಎಸ್ ವೈ ಬಳಿ ಕೇಳಿದರು. ಡಾಕ್ಟರ್ ಜೊತೆ ಮಾತನಾಡಿದ್ದೀನಿ ಆರೋಗ್ಯವಾಗಿದ್ದಾರೆ ಅಂದಿದ್ದಾರೆ. ಮನೆಗೆ ಹೋದ್ರೆ ವಿಶ್ರಾಂತಿ ತೆಗೆದುಕೊಳ್ಳಲು ಆಗುವುದಿಲ್ಲ. ಇಲ್ಲಿಯೇ ರೆಸ್ಟ್ ಮಾಡಿ ಎಂದು ಯಡಿಯೂರಪ್ಪ, ಸಿದ್ದರಾಮಯ್ಯನವರಿಗೆ ಹೇಳಿದರು.
ನಿಮ್ಗೂ ಹಾರ್ಟ್ ಇದೆ ಅಂತಾಯ್ತು ಬಿಡಿ ಎಂದ ಈಶ್ವರಪ್ಪ
ಬಿಎಸ್ ವೈ ಜೊತೆಗೆ ಈಶ್ವರಪ್ಪ ಕೂಡಾ ಇಂದು ಸಿದ್ದರಾಮಯ್ಯರ ಭೇಟಿ ತೆರಳಿದ್ದರು. ಸಿದ್ದರಾಮಯ್ಯ ಬಳಿ ಹೋಗುತ್ತಿದ್ದಂತೆ ಹೂಗುಚ್ಛ ನೀಡಿದ ಈಶ್ವರಪ್ಪ, ನಿಮ್ಗೂ ಹಾರ್ಟ್ ಇರುವುದು ಗ್ಯಾರಂಟಿ ಆಯ್ತು ಬಿಡಿ ಎಂದು ಛೇಡಿಸಿದರು. ಈ ವೇಳೆ ಯಾಕಪ್ಪಾ ಇಲ್ಲ ಅಂದುಕೊಂಡಿದ್ದೆಯಾ ಎಂದು ನಗುತ್ತಲೇ ಸಿದ್ದರಾಮಯ್ಯ ಮಾತನಾಡಿದರು. ಇದಕ್ಕೆ ಉತ್ತರಿಸಿದ ಈಶ್ವರಪ್ಪ, ನಾನು ಬಾಯಿಬಿಟ್ಟು ಯಾವಾತ್ತಾದರೂ ಹಾಗೆ ಹೇಳಿದ್ದೀನಾ ಎಂದು ನಕ್ಕು ಸುಮ್ಮನಾದರು.
ಆಸ್ಪತ್ರೆಯಲ್ಲಿ ಮತ್ತೆರಡು ದಿನ ಸಿದ್ದರಾಮಯ್ಯ ವಿಶ್ರಾಂತಿ
ಬಿಜೆಪಿ ನಾಯಕರ ಭೇಟಿ ಬಳಿಕ ಮಾತನಾಡಿರುವ ಸಿದ್ದರಾಮಯ್ಯ, ನಾನು ಆರೋಗ್ಯವಾಗಿದ್ದು ಯಾರೂ ಆತಂಕಪಡುವ ಅಗತ್ಯವಿಲ್ಲ. ನಾನು ಈಗಲೇ ಮನೆಗೆ ತೆರಳಬಹುದು ಆದರೆ, ಆರೋಗ್ಯ ವಿಚಾರಿಸಲು ಬರುವವರ ಸಂಖ್ಯೆ ಹೆಚ್ಚಾಗುತ್ತದೆ. ಹೀಗಾಗಿ ಆಸ್ಪತ್ರೆಯಲ್ಲಿ ಇನ್ನರೆಡು ದಿನಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದಾರೆ. ನನ್ನ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಯಾರೂ ಬರುವುದು ಬೇಡ, ಇನ್ನೆರೆಡು ದಿನಗಳ ನಂತರ ಮನೆಗೆ ಬನ್ನಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.