ಮಾಲಿನ್ಯ ನಿಯಂತ್ರಣ ಮಂಡಳಿಯ ಡಿಜಿಟಲ್ ಅಭಿಯಾನಕ್ಕೆ ಸಿಎಂ ಮೆಚ್ಚುಗೆ
ಬೆಂಗಳೂರು, ಜೂನ್ 5: ವಿಶ್ವ ಪರಿಸರ ದಿನಾಚರಣೆ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಹಮ್ಮಿಕೊಂಡಿರುವ ಡಿಜಿಟಲ್ ಅಭಿಯಾನ 25 ಲಕ್ಷಕ್ಕೂ ಹೆಚ್ಚು ಜನರನ್ನು ತಲುಪಿರುವ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.
Recommended Video
ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ''ಈ ಬಾರಿ ಪರಿಸರ ದಿನಾಚರಣೆಯ ವಿಷಯ 'ಜೀವ ವೈವಿಧ್ಯ'. ಜೀವ ವೈವಿಧ್ಯ ಇದ್ದಾಗ ಮಾತ್ರ ಪರಿಸರ ಸಮತೋಲನ ಕಾಪಾಡಲು ಸಾಧ್ಯ'' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಶ್ವ ಪರಿಸರ ದಿನ 2020: 'ಜೀವವೈವಿಧ್ಯ' ಈ ಬಾರಿಯ ಘೋಷವಾಕ್ಯ
''ಇತ್ತೀಚೆಗೆ ಕೋವಿಡ್-19 ರ ನಿಯಂತ್ರಣಕ್ಕಾಗಿ ಲಾಕ್ ಡೌನ್ ಘೋಷಣೆಯಿಂದಾಗಿ ಪರಿಸರ ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಿರುವುದು ಸಮಾಧಾನಕರ ವಿಷಯ'' ಎಂದು ಸಿಎಂ ತಿಳಿಸಿದರು.
ಸಮಾರಂಭದಲ್ಲಿ ಪರಿಸರ ಗೀತೆ, ಯೂಟ್ಯೂಬ್ ಚಾನಲ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಬಳಕೆದಾರ ಸ್ನೇಹಿ ವೆಬ್ ಸೈಟಿಗೆ ಚಾಲನೆ ನೀಡಲಾಯಿತು.
ಪರಿಸರ ಸಂರಕ್ಷಣೆಗೆ ಹೋರಾಡುವ ಪುಟ್ಟ ಯೋಧರ ವಿಶೇಷ ವರದಿ
ಅರಣ್ಯ ಸಚಿವ ಆನಂದ್ ಸಿಂಗ್, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ವಿಜಯ್ ಕುಮಾರ್ ಗೋಗಿ, ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ಮೊದಲಾದವರು ಉಪಸ್ಥಿತರಿದ್ದರು.
'ಜೀವ ವೈವಿಧ್ಯ' ಘೋಷವಾಕ್ಯ - ಅರ್ಥಪೂರ್ಣ
''ಜೀವ ವೈವಿಧ್ಯ' ಈ ವರ್ಷದ ಘೋಷವಾಕ್ಯವಾಗಿರುವುದು ಅತ್ಯಂತ ಔಚಿತ್ಯಪೂರ್ಣ. ಜೀವ ವೈವಿಧ್ಯತೆ ಇದ್ದರಷ್ಟೆ ಪ್ರಕೃತಿಯ ಸಮತೋಲನ ಸಾಧ್ಯ. ಪ್ರಾಣಿ, ಪಕ್ಷಿಗಳು, ಗಿಡಮರಗಳು, ಸಸ್ಯ ಸಂಪತ್ತು, ಪರ್ವತಗಳು, ಜಲಚರಗಳೆಲ್ಲವೂ ನಮ್ಮ ಬದುಕಿನ ಭಾಗಗಳೇ. ಗಾಳಿ, ನೀರು, ಭೂಮಿ, ಆಕಾಶ, ಸ್ವಚ್ಛವಾಗಿದ್ದರೆ ಮಾತ್ರ ನಮ್ಮ ಜೀವನ ಆರೋಗ್ಯವಾಗಿರುತ್ತದೆ'' ಎಂದರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮುಂದಿನ ಪೀಳಿಗೆಗೆ ಬಹುದೊಡ್ಡ ಬಳಿವಳಿಯೇ ಪರಿಸರ
''ಮನುಷ್ಯ ತನ್ನ ಜೀವಿತಾವಧಿಯಲ್ಲಿ ಗಿಡಮರಗಳನ್ನು ನೆಟ್ಟು ಬೆಳೆಸಿದರೆ ಒಂದು ದೇವಾಲಯವನ್ನೇ ಕಟ್ಟಿದಷ್ಟು ಪುಣ್ಯ ಲಭಿಸುತ್ತದೆ. ಮುಂದಿನ ಪೀಳಿಗೆಗೆ ನಾವು ನೀಡಬಹುದಾದ ಬಹುದೊಡ್ಡ ಬಳುವಳಿಯೇ ಉತ್ತಮ ಪರಿಸರ. ಪ್ರಕೃತಿಯನ್ನು ಸಂರಕ್ಷಿಸುವ ಗುರುತರ ಜವಾಬ್ದಾರಿ ನಮ್ಮ ಮೇಲಿದೆ. ನಮ್ಮ ಆಧುನಿಕ ಜೀವನ ಶೈಲಿಯಿಂದ ಪರಿಸರದ ಅಪರೂಪದ ಪ್ರಾಣಿ-ಪಕ್ಷಿಗಳನ್ನು ನಾವಿಂದು ಕಳೆದುಕೊಂಡಿದ್ದೇವೆ. ಇದರಿಂದ ಪ್ರಕೃತಿಯ ಅಸಮತೋಲನ ಹೆಚ್ಚಾಗುತ್ತಿದೆ'' - ಬಿ.ಎಸ್.ಯಡಿಯೂರಪ್ಪ
ಮಹಾತ್ಮಾ ಗಾಂಧಿ ಮಾತು ಸದಾ ಕಾಲಕ್ಕೂ ಪ್ರಸ್ತುತ
'‘ಪ್ರಕೃತಿಯು ಮನುಷ್ಯನ ಅಗತ್ಯತೆಗಳನ್ನು ಪೂರೈಸಬಲ್ಲದೇ ಹೊರತು ಮನುಷ್ಯನ ದುರಾಸೆಗಳನ್ನಲ್ಲ' ಎಂದು ಮಹಾತ್ಮ ಗಾಂಧೀಜಿಯವರು ಹೇಳಿದ ಮಾತು ಸದಾ ಕಾಲಕ್ಕೂ ಪ್ರಸ್ತುತವಾದುದು. ನಿಸರ್ಗ ಹಾಗೂ ಪರಿಸರ ನಮ್ಮ ಬದುಕಿನ ಭಾಗ'' - ಬಿ.ಎಸ್.ಯಡಿಯೂರಪ್ಪ
ಲಾಕ್ ಡೌನ್ ನಲ್ಲಿ ಪ್ರಕೃತಿ ಪುನಶ್ಚೇತನಗೊಳ್ಳಲು ಸದಾವಕಾಶ
''ಪ್ಲಾಸ್ಟಿಕ್ ಬಳಕೆಯನ್ನು ಆದಷ್ಟೂ ಕಡಿಮೆ ಮಾಡಿ ಪರಿಸರ ಸಂರಕ್ಷಣೆ ಮಾಡುವುದಲ್ಲದೆ ಜೀವ ವೈವಿಧ್ಯವನ್ನು ರಕ್ಷಿಸಬೇಕು. ನಾವು ಪರಿಸರದೊಂದಿಗೆ ಸಾಮರಸ್ಯ ಸಾಧಿಸಿದರೆ ಮಾತ್ರ ಸಮತೋಲನದ ಬದುಕು ಸಾಧ್ಯ. ಮಿತಿಮೀರಿದ ಸಂಪನ್ಮೂಲಗಳ ಬಳಕೆ ಯಾವತ್ತೂ ಅಪಾಯಕ್ಕೆ ರಹದಾರಿ ಎಂಬ ಅರಿವು ನಮಗಿರಬೇಕು. ಕೋವಿಡ್-19 ತಡೆಗಟ್ಟಲು ಲಾಕ್ ಡೌನ್ ಮಾಡಿದ ಸಂದರ್ಭದಲ್ಲಿ ಪರಿಸರ ಮಾಲಿನ್ಯ ಗಮನಾರ್ಹವಾಗಿ ಕಡಿಮೆಯಾಗಿದೆ. ಮನುಷ್ಯನಿಗೆ ತೊಂದರೆಯಾದೂ ಪ್ರಕೃತಿ ಪುನಶ್ಛೇತನಗೊಳ್ಳಲು ಇದೊಂದು ಸದಾವಕಾಶವಾಯಿತು. ಹಸಿರು ನಮ್ಮ ಉಸಿರಾದಾಗ ಮಾತ್ರ ವಿಶ್ವ ಪರಿಸರ ದಿನಾಚರಣೆ ಅರ್ಥಪೂರ್ಣವಾಗಿರುತ್ತದೆ'' ಅಂತ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.