ಸ್ಪೀಕರ್ ರಮೇಶ್ ಕುಮಾರ್ ಸಮಾಧಾನ ಪಡಿಸುವಂತೆ ಸಿಎಸ್ಗೆ ಎಚ್ಡಿಕೆ ಸೂಚನೆ
ಬೆಂಗಳೂರು, ಜೂನ್ 7: ರಾಜ್ಯ ಸಚಿವ ಸಂಪುಟ ವಿಸ್ತರಣೆ ವೇಳೆ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಆಗಿರುವ ಅವಮಾನ ಸರಿಪಡಿಸುವಂತೆ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯ ಕಾರ್ಯದರ್ಶಿ ಕೆ.ರತ್ನಪ್ರಭಾ ಅವರಿಗೆ ನಿರ್ದೇಶನ ನೀಡಿದ್ದಾರೆ.
ಈ ಕುರಿತು ಗುರುವಾರ ಬೆಳಗ್ಗೆ ಸಭೆ ನಡೆಸಿದ ಅವರು, ರಮೇಶ್ ಕುಮಾರ್ ಜತೆ ಖುದ್ದು ಚರ್ಚಿಸಿ, ಬೇಸರ ಹೋಗಾಲಾಡಿಸಲು ಕ್ರಮ ಕೈಗೊಳ್ಳುವಂತೆ ರತ್ನಪ್ರಭಾ ಅವರಿಗೆ ಸಲಹೆ ನೀಡಿದ್ದಾರೆ.
ಸ್ಪೀಕರ್ ರಮೇಶ್ ಕುಮಾರ್ಗೆ ರಾಜಭವನ ಪ್ರವೇಶ ನೀಡದ ಅಧಿಕಾರಿಗಳು
ಬುಧವಾರ ರಾಜಭವನದಲ್ಲಿ ನಡೆದ ಸಚಿವ ಸಂಪುಟ ವಿಸ್ತರಣೆ ಸಮಯದಲ್ಲಿ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ರಾಜಭವನದೊಳಗೆ ಪ್ರವೇಶ ಮಾಡಲು ಬಿಡದೆ ಪೊಲೀಸ್ ಅಧಿಕಾರಿಗಳು ಅವಮಾನ ಮಾಡಿದ್ದರು. ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಅವರು ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರಿಗೆ ಪತ್ರ ಬರೆದಿದ್ದರು.
ಅದರಲ್ಲಿ ನಾನು ರಾಜ ಭವನಕ್ಕೆ ಆಹ್ವಾನ ನೀಡಿದ ನಿಮಿತ್ತ ಬಂದಿದ್ದೆ ಆದರೆ ರಾಜಭವನದ ಒಳಗೆ ಅವಕಾಶ ನೀಡದೆ ಪೊಲೀಸರು ಮತ್ತು ಅಲ್ಲಿನ ಅಧಿಕಾರಿಗಳು ದುರಹಂಕಾರವನ್ನು ಮೆರೆದಿದ್ದಾರೆ.ಇಂತಹ ದುರಹಂಕಾರ ವ್ಯವಸ್ಥೆಗೆ ಸರ್ಕಾರ ಕಡಿವಾಣ ಹಾಕದೆ ಹೋದರೆ ಸಾಂವಿಧಾನಿಕ ಹುದ್ದೆಯಲ್ಲಿರುವ ತಮಗೆ ಹಾಗೂ ಸರ್ಕಾರಕ್ಕೆ ಅವಮಾನವಾದಂತೆ ಎಂದು ಬರೆದಿದ್ದಾರೆ.
ಸರ್ಕಾರದ ಈ ಅಕ್ಷಮ್ಯ ಅಪರಾಧವನ್ನು ಮನ್ನಿಸುವುದಿಲ್ಲ ಎಂದು ಪತ್ರದಲ್ಲಿ ಖಾರವಾಗಿ ಎಚ್ಚರಿಕೆ ನೀಡಿದ್ದರು. ಈ ಕುರಿತು ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಇಂದು ಬೆಳಗ್ಗೆ ಸಭೆ ಕರೆದು ಸ್ಪೀಕರ್ ರಮೇಶ್ ಕುಮಾರ್ ಮನವೊಲಿಸುವಂತೆ ಮುಖ್ಯ ಕಾರ್ಯದರ್ಶಿಗೆ ಸಲಹೆ ನೀಡಿದ್ದಾರೆ.