ಕೆರೆಗಳಿಗೆ ತ್ಯಾಜ್ಯ: ಕೆಎಸ್ಪಿಸಿಬಿಯಿಂದ ಕೈಗಾರಿಕೆಗಳಿಗೆ ದೊಡ್ಡ ಆಘಾತ
ಬೆಂಗಳೂರು, ಜನವರಿ 20: ಕೆರೆಗಳಿಗೆ ಕೈಗಾರಿಕಾ ತ್ಯಾಜ್ಯ ಬಿಡುತ್ತಿದ್ದ ಬೆಂಗಳೂರಿನ ಕೈಗಾರಿಕೆಗಳಿಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣಾ ಮಂಡಳಿ (ಕೆಎಸ್ಪಿಸಿಬಿ) ಆಘಾತ ಕೊಟ್ಟಿದೆ.
ನಿಯಮಗಳನ್ನು ಉಲ್ಲಂಘಿಸಿ ಬೈರಮಂಗಲ ಕೆರೆಗೆ ಅಪಾಯಕಾರಿ ಕೈಗಾರಿಕಾ ತ್ಯಾಜ್ಯ ಬಿಡುತ್ತಿದ್ದ ಬೈರಮಂಗಲ ಸುತ್ತಮುತ್ತಲಿನ 76 ಕೈಗಾರಿಕೆಗಳನ್ನು ಮುಚ್ಚಲು ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್ ನೀಡಿದೆ.
ಬೆಳ್ಳಂದೂರು ಪ್ರಕರಣ: ಕರ್ನಾಟಕ, ತಮಿಳುನಾಡಿಗೆ ನೋಟಿಸ್
ನಮ್ಮ ಬೆಂಗಳೂರು ಪ್ರತಿಷ್ಠಾನ, ಕೈಗಾರಿಕಾ ತ್ಯಾಜ್ಯಗಳಿಂದ ಹಾಳಾಗುತ್ತಿರುವ ಬೆಂಗಳೂರಿನ ಕೆರೆಗಳನ್ನು ರಕ್ಷಿಸಲು ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ನೇತೃತ್ವದಲ್ಲಿ 'ಯುನೈಟೆಡ್ ಬೆಂಗಳೂರು' ಅಭಿಯಾನವನ್ನು 2017 ರಲ್ಲಿ ಆರಂಭಿಸಿತ್ತು. ಈ ಕುರಿತು ಪ್ರತಿಷ್ಠಾನ 23 ಅರ್ಜಿಗಳನ್ನು ಲೋಕಾಯುಕ್ತದಲ್ಲಿ ಸಲ್ಲಿಸಿತ್ತು. ಈ ಬಗ್ಗೆ ಹಲವು ಸಾರಿ ಮಾಲಿನ್ಯ ನಿಯಂತ್ರಣ ಮಂಡಳಿಗೆ ಕ್ರಮ ಕೈಗೊಳ್ಳಲು ಲೋಕಾಯುಕ್ತ ಆದೇಶಿಸಿತ್ತು. ಆದರೆ, ಯಾವುದೇ ಬೆಳವಣಿಗೆಗಳು ಆಗಿರಲಿಲ್ಲ.
ಸೋಮವಾರ ಬೈರಮಂಗಲ ಕೆರೆಗೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯನ್ನು ಲೋಕಾಯುಕ್ತ ಕೊರ್ಟ್ ವಿಚಾರಣೆ ನಡೆಸಿ, 'ಮಂಡಳಿ ಏನು ಕ್ರಮ ಕೈಗೊಂಡಿದೆ? ಎಂದು ಕೇಳಿತು. ಇದಕ್ಕೆ ಉತ್ತರಿಸಿದ ಮಂಡಳಿ, ''ಬೈರಮಂಗಲ ಕೆರೆಗೆ ರಸಾಯಿನಿಕ ತ್ಯಾಜ್ಯ ಹರಿಸುತ್ತಿದ್ದ ಕೆರೆ ಸುತ್ತಮುತ್ತಲಿನ 76 ಕೈಗಾರಿಕೆಗಳಿಗೆ ಮುಚ್ಚುವ ನೋಟಿಸ್ ನೀಡಲಾಗಿದೆ'' ಎಂದು ಉತ್ತರ ಕೊಟ್ಟಿದೆ.
ಇದಕ್ಕೆ ಸಂತಸ ವ್ಯಕ್ತಪಡಿಸಿರುವ ನಮ್ಮ ಬೆಂಗಳೂರು ಪ್ರತಿಷ್ಟಾನ, ''ಕೆರೆ ಒತ್ತುವರಿ ಸಂಬಂಧವೂ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ಬೆಂಗಳೂರು ಉತ್ತರ ತಹಶಿಲ್ದಾರ್ ಅವರಿಂದ ಪ್ರತಿಕ್ರಿಯೆಯನ್ನು ಲೋಕಾಯುಕ್ತ ಕೋರ್ಟ್ ಕೇಳಿದೆ'' ಎಂದು ತಿಳಿಸಿದೆ.