ಕೊರೊನಾ ಸಂಕಷ್ಟದಲ್ಲಿ ಕಿತ್ತಾಡಿಕೊಂಡ ಆಪರೇಶನ್ ಕಮಲಕ್ಕೆ ಒಳಗಾಗಿದ್ದ ಸಚಿವರು!
ಬೆಂಗಳೂರು, ಏ. 16: ಕೊರೊನಾ ವೈರಸ್ ಇಡೀ ಜಗತ್ತಿನಲ್ಲಿಯೆ ಆತಂಕ ಸೃಷ್ಟಿಸಿದೆ. ಜನರ ಜೀವಕ್ಕೆ ಕುತ್ತು ತಂದಿರುವ ಈ ಸಂದರ್ಭದಲ್ಲಿ ಲಾಕ್ಡೌನ್ ಘೋಷಣೆ ಮಾಡಿರುವ ಸರ್ಕಾರ ಜನರಿಗೆ ಮನೆಯಲ್ಲಿರುವಂತೆ ಸೂಚಿಸಿದೆ. ಇಡೀ ಜಗತ್ತು ಕೊರೊನಾ ವೈರಸ್ ಎದುರು ಒಗ್ಗಟ್ಟಾಗಿ ಹೋರಾಟ ನಡೆಸುತ್ತಿದೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ, ಕೊರೊನಾ ವೈರಸ್ ಹಿನ್ನೆಲೆಯಲ್ಲಿ ನಡೆದ ಸಭೆಯಲ್ಲಿ ಪ್ರತಿಷ್ಠೆಗಾಗಿ ಸಚಿವರಿಬ್ಬರು ಕಿತ್ತಾಡಿಕೊಂಡಿದ್ದಾರೆ.
ಕೊರೊನಾ ಸಂಕಷ್ಟದ ಹಿನ್ನೆಲೆಯಲ್ಲಿ ವಿಕಾಸಸೌಧದಲ್ಲಿ ನಡೆಯುತ್ತಿದ್ದ ಸಭೆಯಲ್ಲಿ ಇಬ್ಬರು ಸಚಿವರು ಕಿತ್ತಾಟ ಹೆಚ್ಚಾಗುತ್ತಿದ್ದಂತೆಯೆ ಸಭಾಂಗಣದ ಬಾಗಿಲನ್ನು ಸಿಬ್ಬಂದಿ ಮುಚ್ಚಿದ್ದಾರೆ. ಆದರೆ ಇಬ್ಬರು ಸಚಿವರು ಜೋರಾಗಿ ವಾಗ್ವಾದ ಮಾಡಿಕೊಂಡಿದ್ದು ಹೊರಗಿದ್ದವರಿಗೆ ಕೇಳಿಸಿದೆ. ಇಬ್ಬರ ನಡುವಿನ ಕಿತ್ತಾಟವನ್ನು ಸಭೆಯಲ್ಲಿದ್ದ ಉಳಿದ ಸಚಿವರು ಮೌನ ಪ್ರೇಕ್ಷಕರಂತೆ ನೋಡಿದ್ದಾರೆ. ಅಂದ ಹಾಗೆ ಇಬ್ಬರೂ ಸಚಿವರು ಆಪರೇಶನ್ ಕಮಲಕ್ಕೆ ಒಳಗಾಗಿ ಬಿಜೆಪಿ ಸೇರಿದ್ದವರು, ಅತ್ಯಂತ ಆಪ್ತರಾಗಿದ್ದವರು ಎಂಬುದು ಕುತೂಹಲದ ವಿಚಾರ.
ಇಲಾಖೆಗಳ ಮಧ್ಯೆ ಸಂವಹನ ಕೊರತೆ ತಡೆಯಲು ಸಭೆ
ರಾಜ್ಯದಲ್ಲಿ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನ ವಸ್ತುಗಳ ಸರಬರಾಜು ಕುರಿತಂತೆ ಆಗುತ್ತಿರುವ ತೊಂದರೆ ನಿವಾರಿಸಲು ಸಭೆ ಕರೆಯಲಾಗಿತ್ತು. ಜೊತೆಗೆ ಬೇರೆ ಬೇರೆ ಇಲಾಖೆಗಳ ಮಧ್ಯ ಯಾವುದೇ ಮಾಹಿತಿ ವಿನಿಮಯದ ಕೊರತೆ, ಸಂವಹನದ ಕೊರತೆ ಆಗದಂತೆ ತಡೆಯಲು ಸಭೆಯಲ್ಲಿ ಚರ್ಚೆ ಆಗುತ್ತಿತ್ತು.
ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತವೆ ಎಂದು ಮೊದಲೆ ಗೊತ್ತಿತ್ತು: ಡಾ. ಸುಧಾಕರ್
ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್, ಆಹಾರ ಸಚಿವ ಕೆ. ಗೋಪಾಲಯ್ಯ, ತೋಟಗಾರಿಕಾ ಸಚಿವ ಕೆ.ಸಿ. ನಾರಾಯಣಗೌಡ, ಸಹಕಾರ ಮತ್ತು ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ. ಸೋಮಶೇಖರ್ ಭಾಗವಹಿಸಿದ್ದರು. ಜೊತೆಗೆ ಆಯಾ ಇಲಾಖೆಗಳ ಹಿರಿಯ ಅಧಿಕಾರಿಗಳು ಸಭೆಯಲ್ಲಿದ್ದರು. ಈ ವೇಳೆ ಜನರಿಗೆ ಅಗತ್ಯವಿರುವ ವಸ್ತುಗಳು ಹೇಗೆ ಸರಬರಾಜು ಆಗುತ್ತಿವೆ? ಪಡಿತರ, ಹಣ್ಣು ತರಕಾರಿಗಳು ಮತ್ತು ರೈತರ ಕೃಷಿ ಉತ್ಪನ್ನಗಳ ಮಾರಾಟ ಸರಿಯಾಗಿ ಆಗುತ್ತಿದೆಯಾ ಎಂಬುದರ ಕುರಿತು ಸಭೆಯಲ್ಲಿ ಚರ್ಚೆ ಆಗುತ್ತಿತ್ತು. ಇದೇ ಸಂದರ್ಭದಲ್ಲಿ ಇಲಾಖೆಗಳಲ್ಲಿ ಹಸ್ತಕ್ಷೇಪದ ಚರ್ಚೆ ನಡೆದಿದೆ.
ಏರು ಧ್ವನಿಯಲ್ಲಿ ಕಿತ್ತಾಡಿಕೊಂಡ ಇಬ್ಬರು ಸಚಿವರು
ತಮ್ಮ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕೃಷಿ ಮಾರುಕಟ್ಟೆ ಸಚಿವ ಎಸ್.ಟಿ. ಸೋಮಶೇಖರ್ ಹಾಗೂ ತೋಟಗಾರಿಕಾ ಸಚಿವ ಕೆ.ಸಿ. ನಾರಾಯಣಗೌಡ ಒಬ್ಬರ ಮೇಲೊಬ್ಬರು ವಾಗ್ದಾಳಿ ನಡೆಸಿದ್ದಾರೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಕೃಷಿ, ತೋಟಗಾರಿಕೆ ಉತ್ಪನ್ನಗಳ ಸುಗಮ ಸಾಗಾಟ ಸಂಬಂಧ ನಡೆಯುತ್ತಿರುವ ಸಭೆಯಲ್ಲಿ ಹೋಗೋ, ಬಾರೋ ಎಂದು ಏಕವಚದಲ್ಲಿ ಸಚಿವರು ಜಗಳವಾಡಿದ್ದಾರೆ.
ಇಬ್ಬರನ್ನು ಸಮಧಾನಪಡಿಸುವಲ್ಲಿ ಹೈರಾಣರಾದ ಡಿಸಿಎಂ
ನನ್ನ ಇಲಾಖೆಯಲ್ಲಿ ನೀನು ಹಸ್ತಕ್ಷೇಪ ಮಾಡಬೇಡವೆಂದು ತೋಟಗಾರಿಕಾ ಸಚಿವ ನಾರಾಯಣಗೌಡ ಎಚ್ಚರಿಕೆ ಕೊಟ್ಟಿದ್ದಾರೆ. ಆಗ ಮಾತನಾಡಿದ ಎಸ್.ಟಿ. ಸೋಮಶೇಖರ್, ನಾನು ಸಹಕಾರ ಸಚಿವ. ನನಗೆ ಕೃಷಿ ಉತ್ಪನ್ನಗಳ ವಿಚಾರದಲ್ಲಿ ಹಸ್ತಕ್ಷೇಪ ಮಾಡಲು ಅವಕಾಶವಿದೆ ಎಂದು ದಬಾಯಿಸಿದ್ದಾರೆ. ಈ ವೇಳೆ ಇಬ್ಬರು ಸಚಿವರ ನಡುವಿನ ಕಿತ್ತಾಟವನ್ನು ಇತರೆ ಸಚಿವರು ಮೌನವಾಗಿ ನೋಡಿದ್ದಾರೆ.
ಆ ಬಳಿಕ ಇಬ್ಬರನ್ನು ಸಮಾಧಾನಪಡಿಸುವಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಹೈರಾಣರಾಗಿದ್ದು, ಸಚಿವರ ನಡುವೆ ಕಿತ್ತಾಟ ಜೋರಾಗುತ್ತಿದ್ದಂತೆ ಸಭಾಂಗಣದ ಬಾಗಿಲನ್ನು ಸಿಬ್ಬಂದಿ ಮುಚ್ಚಿದ್ದಾರೆ.
ಒಪ್ಪಿಕೊಂಡ ಸೋಮಶೇಖರ್, ಏನೂ ಆಗಿಲ್ಲ ಎಂದ ಡಿಸಿಎಂ
ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಘಟನೆ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಅಶ್ವಥ್ ನಾರಾಯಣ್ ಅವರು, ಇಂದಿನ ಸಭೆಯಲ್ಲಿ ಅಂತದ್ದು ಏನು ಆಗಿಲ್ಲ. ಸಣ್ಣ ಪುಟ್ಟ ಸಮಸ್ಯೆಗಳು ಎಲ್ಲರಲ್ಲೂ ಇರತ್ತೆ ಬಿಡಿ ಎಂದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಸಹಕಾರ ಸಚಿವ ಸೋಮಶೇಖರ್ ಅವರು, ಇದೆಲ್ಲಾ ಸಣ್ಣ ಪುಟ್ಟ ಆಂತರಿಕ ವಿಚಾರವಷ್ಟೇ. ಇಲಾಖೆಯಲ್ಲಿ ಆಂತರಿಕ ವಿಷಯಗಳಲ್ಲಿ ಅಸಮಾಧಾನ ಇದೆ. ಹೀಗಾಗಿ ಸಭೆಯಲ್ಲಿ ಇಬ್ಬರ ನಡುವಿನ ಮಾತಿನ ವಾಗ್ವಾದ ಆಗಿತ್ತು. ಅದೆನೂ ದೊಡ್ಡ ವಿಷಯವಲ್ಲ ಬಿಡಿ ಎಂದು ಸಚಿವ ನಾರಾಯಣಗೌಡ ಅವರೊಂದಿಗಿನ ಅಸಮಾಧಾನವನ್ನು ಸೋಮಶೇಖರ್ ಒಪ್ಪಿಕೊಂಡರು.
ಡಿಸಿಎಂ ಅಶ್ವಥ್ ನಾರಾಯಣ ಜಂಟಿ ಸುದ್ದಿಗೋಷ್ಠಿ
ಕೃಷಿ ಉತ್ಪನ್ನಗಳ ಸಾಗಾಟ ಸಂಬಂಧದ ಸಭೆಯ ಬಳಿಕ ಡಿಸಿಎಂ ಡಾ. ಅಶ್ವಥ್ ನಾರಾಯಣ ಅವರು ಮಾತನಾಡಿದ್ದಾರೆ. ಎಪಿಎಂಸಿಯ ಎಲ್ಲಾ ಮಾರ್ಕೆಟ್ ಗಳ ಸಮಸ್ಯೆ ನಿವಾರಣೆಗೆ ಸಹಕಾರ ಇಲಾಖೆ ಕ್ರಮಕೈಗೊಳ್ಳಲಾಗಿದೆ. ಬೆಂಗಳೂರಿನ ಸುತ್ತಲು ಇನ್ನು 12 ಮಾರ್ಕೆನ್ನು ಆರಂಭಿಸಲಾಗುವುದು. ಮಾರುಕಟ್ಟೆಗೆ ಸೂಕ್ತ ಜಾಗಕ್ಕಾಗಿ ಕಂದಾಯ ಇಲಾಖೆಗೆ ಪ್ರಸ್ತಾವನೆ ಕಳಿಸುತ್ತೇವೆ. ಕೃಷಿ ಸಂಸ್ಕರಣಾ ಘಟಕಗಳ ಸಿಬ್ಬಂದಿಗೆ ಪಾಸ್ ವಿತರಣೆ ಮಾಡಲಾಗುವುದು. ದಿನಸಿ ಅಂಗಡಿಗಳಲ್ಲಿ ವಸ್ತುಗಳನ್ನು ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ಸಂಬಂಧಿಸಿದಂತೆ ಅಧಿಕಾರಿಗಳು ರೇಡ್ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಲಾಗುವುದು ಎಂದರು.
ಪಡಿತರ ಚೀಟಿಗೆ ಅರ್ಜಿ ಸಲ್ಲಿಸಿದವರಿಗೂ ಪಡಿತರ ವಿತರಣೆ ಮಾಡಲಾಗುವುದು. ಸುಮಾರು 2.5 ಲಕ್ಷ ಅರ್ಜಿದಾರರಿಗೂ ಪಡಿತರ ವಿತರಣೆ ಮಾಡಲಾಗುತ್ತಿದೆ. ತೋಟಗಾರಿಕೆ ಬೆಳೆಗಳ ಸಾಗಾಟ ಮತ್ತು ಮಾರಾಟಕ್ಕೆ ಸೂಕ್ತ ಕ್ರಮ ವಹಿಸಲಾಗಿದ್ದು, ದ್ರಾಕ್ಷಿ ಬೆಳೆಗಾರರಿಗೆ ಅನುಕೂಲವಾಗುವಂತೆ ವೈನ್ ತಯಾರಿಕಾ ಘಟಕಗಳು, ಡಿಸ್ಟಿಲರಿಗಳ ಆರಂಭಕ್ಕೆ ಕ್ರಮಕೈಗೊಳ್ಳಲಾಗಿದೆ. ಕೃಷಿ ಉತ್ಪನ್ನಗಳು, ತೋಟಗಾರಿಕೆ ಬೆಳೆಗಳು, ರೇಷ್ಮೆ ಗೂಡು ಧಾರಣೆಯಲ್ಲಿ ಇಳಿಕೆಯಾಗದಂತೆ ಮುನ್ನೆಚ್ಚರಿಕೆ, ಗ್ರಾಹಕರಿಗೂ ಕೈಗೆಟುಕುವ ದರದಲ್ಲಿ ಹಣ್ಣು, ತರಕಾರಿ ಪೂರೈಕೆಗೆ ಕ್ರಮತೆಗೆದು ಕೊಳ್ಳಲಾಗುವುದು. ಬೆಂಗಳೂರು ನಗರದ ಗ್ರಾಹಕರಿಗೆ ಅನುಕೂಲವಾಗುವಂತೆ 320 ಮೊಬೈಲ್ ವಾಹನಗಳ ಮೂಲಕ ಹಣ್ಣು ತರಕಾರಿ ಪೂರೈಕೆ ಮಾಡಲಾಗುವುದು ಎಂದು ಡಿಸಿಎಂ ಡಾ. ಅಶ್ವಥ್ ನಾರಾಯಣ ತಿಳಿಸಿದ್ದಾರೆ.