ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಇಂಜಿನಿಯರ್ ಶವ ಪತ್ತೆ: ಇನ್ನೆಷ್ಟು ಬಲಿ ಬೇಕು ಬಿಬಿಎಂಪಿಗೆ?
ಬೆಂಗಳೂರು, ಜೂ. 19: ಬೆಂಗಳೂರಿನಲ್ಲಿ ಮೊದಲ ಮಳೆ ಅವಾಂತರ ಸೃಷ್ಟಿಸಿತ್ತು. ರಾಜಧಾನಿಯಲ್ಲಿ ಯಾವುದೇ ಅವಘಡ ಸಂಭವಿಸಿದರೆ ಇನ್ಮುಂದೆ ಬಿಬಿಎಂಪಿ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದರು. ಸಿಎಂ ಹೇಳಿದ ಒಂದು ತಿಂಗಳಲ್ಲೇ ಶಿವಮೊಗ್ಗ ಮೂಲದ ಸಿವಿಲ್ ಇಂಜಿನಿಯರ್ ಮಳೆ ನೀರಿಗೆ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾನೆ.
ಎಸ್ಡಿಆರ್ಎಫ್ ಸಿಬ್ಬಂದಿಯ ಸತತ 48 ತಾಸು ಶೋಧ ಕಾರ್ಯಾಚರಣೆ ಬಳಿಕ ಮೃತ ದೇಹ ಭಾನುವಾರ ಬೆಳಗ್ಗೆ ಪತ್ತೆಯಾಗಿದ್ದು, ಪೋಷಕರಿಗೆ ಒಪ್ಪಿಸಲಾಗಿದೆ. ಶಿವಮೊಗ್ಗ ಮೂಲದ ಸಿವಿಲ್ ಇಂಜಿನಿಯರ್ ಮಿಥುನ್ ಎರಡು ದಿನದ ಹಿಂದೆ ಸುರಿದ ಭಾರೀ ಮಳೆಗೆ ಕೊಚ್ಚಿ ಹೋಗಿದ್ದರು. ಮೃತದೇಹದ ಪತ್ತೆಗಾಗಿ ಅಗ್ನಿ ಶಾಮಕ ದಳ ಮತ್ತು ರಾಜ್ಯ ವಿಪತ್ತು ನಿರ್ವಹಣಾ ದಳದ ಸಿಬ್ಬಂದಿ ಶೋಧ ಕಾರ್ಯ ನಡೆಸಿದರೂ ಪತ್ತೆಯಾಗಿರಲಿಲ್ಲ.
ಉತ್ತರ ಬಂಗಾಳ, ಸಿಕ್ಕಿಂನಲ್ಲಿ ಭಾರೀ ಮಳೆ, ಭೂಕುಸಿತ ಸಾಧ್ಯತೆ: IMD ಎಚ್ಚರಿಕೆ
ಸತತ ಎರಡು ದಿನ ಕಾರ್ಯಾಚರಣೆ ನಡೆಸಿದ ಬಳಿಕ ಘಟನೆ ನಡೆದ ಜಾಗದಿಂದ ಸುಮಾರು ಒಂದೂವರೆ ಕಿ.ಮೀ. ದೂರದಲ್ಲಿ ಮೃತ ದೇಹ ಭಾನುವಾರ ಬೆಳಗ್ಗೆ ದೊರೆತಿದೆ. ಕೆ.ಆರ್. ಪುರಂ ಕೇಂಬ್ರಿಡ್ಜ್ ಕಾಲೇಜು ಬಳಿ ರಾಜಕಾಲುವೆಯಲ್ಲಿ ಶವ ಪತ್ತೆಯಾಗಿದೆ. ಮೃತ ದೇಹವನ್ನು ಈಸ್ಟ್ ಪಾಯಿಂಟ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಪೋಷಕರಿಗೆ ಒಪ್ಪಿಸಲಾಗಿದೆ.
ಬೆಂಗಳೂರಿನಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಮಿಥುನ್ ಶುಕ್ರವಾರ ರಾತ್ರಿ 11.50 ರ ಸುಮಾರಿಗೆ ರಾಜ ಕಾಲುವೆ ವೇಳೆ ಕೊಚ್ಚಿ ಹೋಗಿದ್ದ. ಮಳೆ ನಡುವೆಯೂ ಶೋಧ ಕಾರ್ಯ ನಡೆಸಿದ್ದ ಎಸ್ಡಿಅರ್ಎಫ್ ಸಿಬ್ಬಂದಿಗೆ ಪತ್ತೆಯಾಗಿರಲಿಲ್ಲ. ಶನಿವಾರ ರಾತ್ರಿ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು. ಭಾನುವಾರ ಬೆಳಗಿನ ಜಾವ ಕಾರ್ಯಾಚರಣೆ ಆರಂಭಿಸಿದಾಗ ಮೃತ ದೇಹ ಸಿಕ್ಕಿದೆ.
ಐದು ಲಕ್ಷ ರೂ. ಪರಿಹಾರ:
ಮೃತ ಮಿಥುನ್ ಕುಟುಂಬಕ್ಕೆ ಐದು ಲಕ್ಷ ರೂ. ಪರಿಹಾರ ನೀಡುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದರು.
ಇನ್ನೆಷ್ಟು ಸಾವು ಬೇಕು?
ರಾಜಧಾನಿ ಬೆಂಗಳೂರಿನಲ್ಲಿ ಮಳೆಗೆ ಪದೇ ಪದೇ ಅವಘಡಗಳು ಸಂಭವಿಸುತ್ತಿವೆ. ಬೆಂಗಳೂರಿನಲ್ಲಿ ದಾಖಲೆ ಮಳೆ ಬಿದ್ದು ಮನೆಗಳಲ್ಲಿ ನೀರು ತುಂಬಿದ್ದ ವೇಳೆ ಬೆಂಗಳೂರು ರೌಂಡ್ಸ ಮಾಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರಾಜಕಾಲುವೆಗಳ ಹೂಳೆತ್ತಲು ಸಾವಿರಾರು ಕೋಟಿ ರೂ. ಬಿಡುಗಡೆ ಮಾಡಿದ್ದರು. ತುರ್ತಾಗಿ ರಾಜಕಾಲುವೆಗಳ ಹೂಳು ತೆಗೆದು ಸುರಕ್ಷಿತ ಬೇಲಿ ಹಾಕಲು ಸೂಚಿಸಿದ್ದರು. ಈ ಸಂಬಂಧ ಅಗತ್ಯ ಅನುದಾನವನ್ನು ಬಿಡುಗಡೆಗೆ ಅನುಮೋದನೆ ನೀಡಿದ್ದರು. ಆದರೆ, ಇದರ ನಡುವೆ ಮುಗ್ಧ ಇಂಜಿನಿಯರ್ ರಾಜಕಾಲುವೆ ಮಳೆ ನೀರಿಗೆ ಸಿಕ್ಕಿ ಸಾವನ್ನಪ್ಪಿದ್ದಾನೆ.
ಭ್ರಷ್ಟಚಾರದ ಕೂಪವಾಗಿರುವ ಬಿಬಿಎಂಪಿ ಅಧಿಕಾರಿಗಳು ಇಷ್ಟಾಗಿಯೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಪದೇ ಪದೇ ಮುಗ್ಧರು ಬೆಂಗಳೂರಿನಲ್ಲಿ ಮಳೆ ಆವಾಂತರಕ್ಕೆ ಜೀವ ಕಳೆದುಕೊಳ್ಳುತ್ತಿದ್ದಾರೆ.