ಬೆಂಗಳೂರು ಕಮೀಷನರ್ ಹುದ್ದೆ: ಮುಂಚೂಣಿಯಲ್ಲಿ ಎಂ.ಎ. ಸಲೀಂ ಮತ್ತು ಬಿ. ದಯಾನಂದ್
ಬೆಂಗಳೂರು, ಜೂ. 17: ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಐಪಿಎಸ್ ಅಧಿಕಾರಿ ಕಮಲಪಂತ್ ಒಂದು ವರ್ಷ ಸೇವೆ ಪೂರೈಸಿದ್ದಾರೆ. ಕಮಲಪಂತ್ ನಿರ್ಗಮನ ಮುನ್ಸೂಚನೆ ಬೆನ್ನಲ್ಲೇ ನೂತನ ಪೊಲೀಸ್ ಆಯುಕ್ತರ ಹುದ್ದೆಗಾಗಿ ಬಾರೀ ಪೈಪೋಟಿ ಶುರುವಾಗಿದೆ.
ಮುಖ್ಯಮಂತ್ರಿ ಬದಲಾವಣೆ ಗದ್ದಲದ ನಡುವೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಬದಲಾವಣೆ ಪ್ರಸ್ತಾಪಕ್ಕೆ ಹಿನ್ನೆಡೆಯಾಗಿತ್ತು. ಮುಖ್ಯಮಂತ್ರಿ ಬದಲಾಗಿರುವ ಬೆನ್ನಲ್ಲೇ ಇದೀಗ ನೂತನ ಪೊಲೀಸ್ ಆಯುಕ್ತರ ಹುದ್ದೆಗಾಗಿ ಪೈಪೋಟಿ ಶುರುವಾಗಿದೆ. ಬಳ್ಳಾರಿ ಮೂಲದ ಖಡಕ್ ಐಪಿಎಸ್ ಅಧಿಕಾರಿ ಬಿ. ದಯಾನಂದ್ ನೂತನ ಪೊಲೀಸ್ ಆಯುಕ್ತರಾಗುತ್ತಾರೆ ಎಂಬ ಮಾತು ಪೊಲೀಸ್ ವಲಯದಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿದೆ.
ಕಮಲಪಂತ್ ಅವಧಿ ಮುಗೀತು
ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕಮಲಪಂತ್ ಅವರು ಒಂದು ವರ್ಷ ಸೇವೆ ಪೂರ್ಣಗೊಳಿಸಿದ್ದಾರೆ. ಸಂಪ್ರದಾಯದ ಪ್ರಕಾರ ಎಡಿಜಿಪಿ ದರ್ಜೆಯ ಅರ್ಹ ಐಪಿಎಸ್ ಅಧಿಕಾರಿಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಿಸಲಾಗುತ್ತದೆ. ಒಂದು ವರ್ಷದ ನಂತರ ಬದಲಾವಣೆ ಮಾಡುವುದು ಈವರೆಗೂ ನಡೆದುಕೊಂಡು ಬಂದಿರುವ ಸಂಪ್ರದಾಯ. ಕಳೆದ ಆಗಸ್ಟ್ ನಲ್ಲಿಯೇ ಡಿಜಿಪಿ ಹುದ್ದೆಗೆ ಬಡ್ತಿ ಪಡೆದಿರುವ ಕಮಲಪಂತ್ ಜೂನ್ ನಲ್ಲಿಯೇ ಆಯುಕ್ತರ ಹುದ್ದೆಯಿಂದ ನಿರ್ಗಮಿಸಲಿದ್ದಾರೆ ಎಂದೇ ಹೇಳಲಾಗಿತ್ತು.
ಮುಖ್ಯಮಂತ್ರಿ ಬದಲಾವಣೆ ವಿಷಯ ಗಂಭೀರ ಸ್ವರೂಪ ಪಡೆದುಕೊಂಡಿದ್ದರಿಂದ ಐಎಎಸ್ ಹಾಗೂ ಐಪಿಎಸ್ ಆಯಕಟ್ಟಿನ ಜಾಗದಲ್ಲಿರುವ ಅಧಿಕಾರಿಗಳನ್ನು ಬದಲಾವಣೆ ಮಾಡುವ ಗೋಜಿಗೆ ಇನ್ನೂ ಹೋಗಿಲ್ಲ. ನೂತನ ಸಿಎಂ ಬಸವರಾಜ ಬೊಮ್ಮಾಯಿ ಅವರು ಆಡಳಿತಕ್ಕೆ ಚುರುಕು ನೀಡುವ ನಿಟ್ಟಿನಲ್ಲಿ ಕೆಲವು ಆಯಕಟ್ಟಿನ ಹುದ್ದೆಗಳಿಗೆ ತಮ್ಮ ನಂಬಿಕಸ್ತ ಅಧಿಕಾರಿಗಳನ್ನು ನಿಯೋಜಿಸಲು ಮುಂದಾಗಿದ್ದಾರೆ. ಅದರ ಸಾಲಿನಲ್ಲಿ ಮೊದಲು ಬದಲಾವಣೆಯ ಪಟ್ಟಿಯಲ್ಲಿರುವುದು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆ. ಕಮಲಪಂತ್ ಅವರ ಸೇವಾವಧಿ ಒಂದು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಸುಮಾರು 30 ಕ್ಕೂ ಹೆಚ್ಚು ಅರ್ಹರು ಬೆಂಗಳೂರು ನಗರ ಪೊಲೀಸ್ ಆಯುಕ್ತ ಹುದ್ದೆ ಅಲಂಕರಿಸಲು ಅರ್ಹತೆ ಪಡೆದಿದ್ದಾರೆ. ಆದರೆ ನಾಲ್ಕು ಹಿರಿಯ ಐಪಿಎಸ್ ಅಧಿಕಾರಿಗಳ ಹೆಸರು ಮುನ್ನೆಲೆಗೆ ಬಂದಿದೆ.
ರೇಸ್ನಲ್ಲಿ ಇರುವ ಐಪಿಎಸ್ಗಳು
ಇನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆಗಾಗಿ ಅನೇಕ ಐಪಿಎಸ್ ಅಧಿಕಾರಿಗಳು ಪ್ರಯತ್ನ ಮಾಡುತ್ತಿದ್ದಾರೆ. ಅದರಲ್ಲಿ ಅಗ್ರಗಣ್ಯವಾಗಿ ಕೇಳ್ಪಡುತ್ತಿರುವುದು ಗುಪ್ತಚರ ಇಲಾಖೆಯ ಎಡಿಜಿಪಿ ಬಿ. ದಯಾನಂದ್ ಅವರ ಹೆಸರು. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಅತಿ ಮಹತ್ವದ ಜವಾಬ್ಧಾರಿ ಹೊಂದರುವ ಗುಪ್ತಚರ ಇಲಾಖೆಯ ಎಡಿಜಿಪಿ ಹುದ್ದೆ ನೀಡಲಾಗಿದೆ. ಆಡಳಿತ ರೂಢ ಸಿಎಂ ನಂಬಿಕಸ್ತರನ್ನೇ ಈ ಹುದ್ದೆಗೆ ನಿಯೋಜಿಸುತ್ತಾರೆ. ಅಷ್ಟೇ ದಕ್ಷತೆಯಿಂದಲೂ ಗುಪ್ತಚರ ಇಲಾಖೆಯನ್ನು ನಿಬಾಯಿಸಿದ ಹಿನ್ನೆಲೆಯಲ್ಲಿ ಬಿ. ದಯಾನಂದ್ ಅವರಿಗೆ ನಗರ ಪೊಲೀಸ್ ಆಯುಕ್ತ ಹುದ್ದೆ ನೀಡಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.
ಕನ್ನಡಿಗರನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಬೇಕು ಎನ್ನುವ ಒತ್ತಾಸೆಯೂ ಈಡೇರುತ್ತದೆ. ಈಗಾಗಲೇ ಮೈಸೂರು ನಗರ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರು ನಗರ ಪೊಲೀಸ್ ಕಮೀಷನರೇಟ್ನಲ್ಲಿ ಪ್ರಮುಖ ಹುದ್ದೆಗಳನ್ನು ಸಮರ್ಥವಾಗಿ ನಿಬಾಯಿಸಿದ್ದಾರೆ. ತುರ್ತು ಸಂದರ್ಭದಲ್ಲಿ ತ್ವರಿತವಾಗಿ ಖಡಕ್ ನಿರ್ಧಾರ ಕೈಗೊಳ್ಳುವಲ್ಲಿ ದಯಾನಂದ್ ನಿಸ್ಸೀಮರು. ಮಿಗಿಲಾಗಿ ಅವರು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಗುಪ್ತಚರ ಇಲಾಖೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡಿದ್ದರಿಂದ ಪೊಲೀಸ್ ಆಯುಕ್ತರ ಹುದ್ದೆಗೆ ಅವರನ್ನೇ ನಿಯೋಜಿಸಲು ಬಿಜೆಪಿ ನಾಯಕರು ಚಿಂತನೆ ನಡೆಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಎಂ.ಎ ಸಲೀಂ ಆದ್ರೂ ಅಚ್ಚರಿ ಪಡಬೇಕಿಲ್ಲ
ಇನ್ನು ಎರಡನೇಯದಾಗಿ ಕೇಳಿ ಬರುತ್ತಿರುವ ಹೆಸರು ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಆಡಳಿತ ವಿಭಾಗದ ಎಡಿಜಿಪಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಎಂ.ಎ. ಸಲೀಂ ಅವರದ್ದು. ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕರ ಕಚೇರಿಯಲ್ಲಿ ಆಡಳಿತ ವಿಭಾಗದ ಎಡಿಜಿಪಿಯಾಗಿರುವ ಎಂ.ಎ. ಸಲೀಂ ಕೂಡ ದಕ್ಷ ಅಧಿಕಾರಿ. ಮಿಗಿಲಾಗಿ ಕನ್ನಡಿಗರು. ಬಸವರಾಜ ಬೊಮ್ಮಾಯಿ ಗೃಹ ಸಚಿವರಾಗಿದ್ದ ವೇಳೆ, ಸಣ್ಣ ಸಮಸ್ಯೆಯೂ ಎದುರಾಗದಂತೆ ಆಡಳಿತ ವಿಭಾಗವನ್ನು ಸಮರ್ಥವಾಗಿ ನಿಭಾಯಿಸಿದ್ದರು. ಎಂ.ಎ. ಸಲೀಂ ಅವರ ಕಾರ್ಯ ಶೈಲಿ ನೋಡಿ ಗೃಹ ಸಚಿವರೇ ಫಿದಾ ಆಗಿದ್ದರಂತೆ. ಸಲೀಂ ಅವರ ಮೇಲೆ ಯಾವುದೇ ಆರೋಪವಿಲ್ಲ. ಇನ್ನೊಬ್ಬರನ್ನು ನಂಬದೇ ಎಲ್ಲಾ ಕೆಲಸವನ್ನು ಅವರೇ ಮಾಡುತ್ತಾರೆ. ಹೀಗಾಗಿ ನೂತನ ಸಿಎಂ ಸಲಿಂ ಅವರನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನಾಗಿ ಮಾಡಲು ಒಲವು ತೋರಿದ್ದಾರೆ ಎನ್ನಲಾಗಿದೆ.
ಸಲೀಂ ಅವರನ್ನು ಬೆಂಗಳೂರು ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡುವ ಮೂಲಕ ಬಿಜೆಪಿ ಸರ್ಕಾರ ಕೋಮುವಾದಿ ಸರ್ಕಾರ ವಲ್ಲ, ಅರ್ಹರನ್ನು ಆಯ್ಕೆ ಮಾಡುತ್ತೇವೆ ಎಂಬ ಸಂದೇಶವನ್ನು ರವಾನಿಸಲು ಬಹುದೊಡ್ಡ ಅವಕಾಶ ಸಿಕ್ಕಂತಾಗುತ್ತದೆ ಎಂಬುದು ಹಾಲಿ ಸಿಎಂ ಅವರ ಲೆಕ್ಕಾಚಾರ. ಅಂತೂ ಕಳೆದ ಎರಡು ದಿನದಿಂದ ಎಂ.ಎ. ಸಲೀಂ ಅವರ ಹೆಸರು ಕೂಡ ಕೇಳಿ ಬರುತ್ತಿದೆ. ಪಕ್ಷದ ಕೆಲವು ನಾಯಕರು ಮತ್ತು ಆರ್ಎಸ್ಎಸ್ ಮುಖಂಡರು ಅಡ್ಡಿ ಪಡಿಸಬಹುದು ಎಂಬ ಕಾರಣಕ್ಕೆ ನೂತನ ಸಿಎಂ ಗೊಂದಲಕ್ಕೆ ಒಳಗಾಗಿದ್ದಾರೆ ಎಂದೇ ಹೇಳಲಾಗುತ್ತಿದೆ.
ಅಮೃತ್ ಪೌಲ್ ಮತ್ತು ಉಮೇಶ್ ಕುಮಾರ್
ಎಡಿಜಿಪಿ ದರ್ಜೆಯ ಅಮೃತ್ ಪೌಲ್ ಹಾಗೂ ಉಮೇಶ್ ಕುಮಾರ್ ಕೂಡ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆಗಾಗಿ ನಮ್ಮದೂ ಒಂದು ಇರಲಿ ಎಂದು ಟವಲ್ ಹಾಕಿದ್ದಾರೆ. ಕನ್ನಡಿಗರೇ ಆದ ಉಮೇಶ್ ಕುಮಾರ್ ಸದ್ಯ ಸಿಐಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಕೆಟ್ಟ ಘಟನೆಗೆ ಈವರೆಗೂ ಸುದ್ದಿಯಾದವರಲ್ಲ. ಹೀಗಾಗಿ ಅವರನ್ನು ನೇಮಕ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಕಳೆದ ವರ್ಷವೇ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆಗೆ ಪ್ರಯತ್ನ ಮಾಡಿದ್ದ ಅಮೃತ್ ಪೌಲ್ ಈ ಬಾರಿ ಕೂಡ ಪ್ರಯತ್ನ ಮಾಡುತ್ತಿದ್ದಾರೆ.
ಇದರ ಮದ್ಯೆ ಬೆಂಗಳೂರಿನ ಖಡಕ್ ಅಧಿಕಾರಿ ಎಂದು ಹೆಸರು ಮಾಡಿದ್ದ ಅಲೋಕ್ ಕುಮಾರ್ ಕೇವಲ 45 ದಿನ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಕಾರ್ಯ ನಿರ್ವಹಿಸಿದರು. ಐಪಿಎಸ್ ಅಧಿಕಾರಿಯ ಪೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಸಿಬಿಐ ತನಿಖೆ ಎದುರಿಸಿದರು. ಇದೀಗ ಮತ್ತೊಮ್ಮೆ ಬೆಂಗಳೂರು ನಗರ ಪೊಲೀಸ್ ಆಯುಕ್ತರ ಹುದ್ದೆಗೆ ಯತ್ನಿಸಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ಅಂತೂ ಈ ತಿಂಗಳಾಂತ್ಯಕ್ಕೆ ಬೆಂಗಳೂರು ನಗರ ಪೊಲೀಸ್ ಅಯುಕ್ತರ ಹುದ್ದೆ ಹೊಸಬರು ಅಲಂಕರಿಸಲಿದ್ದಾರೆ ಎಂಬ ಸಂಗತಿ ಪೊಲೀಸ್ ಇಲಾಖೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಸೇರಿದಂತೆ ಹಲವು ಮಹತ್ವದ ಪ್ರಕರಣಗಳ ತನಿಖೆ ಮುಗಿದ ಕೂಡಲೇ ಬೆಂಗಳೂರು ನಗರ ಪೊಲೀಸ್ ಆಯುಕ್ತರನ್ನು ಬದಲಾವಣೆ ಮಾಡಲು ರಾಜ್ಯ ಸರ್ಕಾರ ಚಿಂತನೆ ಮಾಡಿತ್ತು. ಜಾರಕಿಹೊಳಿ ಪ್ರಕರಣ ಸೇರಿದಂತೆ ಹಲವು ಮಹತ್ವದ ಪ್ರಕರಣಗಳ ತನಿಖೆಯನ್ನು ಆಗಸ್ಟ್ ವೇಳೆಗೆ ಪೂರ್ಣಗೊಳಿಸಲು ಡೆಡ್ ಲೈನ್ ನೀಡಲಾಗಿತ್ತು. ಅದರಂತೆ ಪ್ರಕರಣಗಳ ತನಿಖೆಯೂ ಮುಗಿದಿದ್ದು, ಬೆಂಗಳೂರು ನಗರದ ಪೊಲೀಸ್ ಆಯುಕ್ತರ ಹುದ್ದೆ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಕೆರಳಿಸಿದೆ.
Recommended Video