ಬೆಂಗಳೂರು ರೌಡಿ ಪಡೆ ನಾಯಕರ ಮನೆಗಳ ಮೇಲೆ ಸಿಸಿಬಿ ಪೊಲೀಸರ ದಾಳಿ
ಬೆಂಗಳೂರು, ಜು. 23: ರಾಜಧಾನಿಯಲ್ಲಿ ರೌಡಿಗಳ ಸದ್ದು ಅಡಗಿಸಲು ಸಿಸಿಬಿ ಪೊಲೀಸರು ಪ್ರಮುಖ ರೌಡಿಗಳ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಬೆಂಗಳೂರಿನ ಅಗ್ರಮಾನ್ಯ ರೌಡಿ ಲೀಡರ್ಗಳಾದ ಸೈಲೆಂಟ್ ಸುನೀಲ, ಒಂಟೆ ರೋಹಿತ್, ವಿಲ್ಸನ್ ಗಾರ್ಡನ್ ನಾಗ, ಜೆ ಬಿ. ನಾರಾಯಣ, ಮುಲಾಮ ಸೇರಿದಂತೆ ರೌಡಿಗಳು ಹಾಗೂ ರೌಡಿ ಸಹಚರರ 45 ಮನೆಗಳ ಮೇಲೆ ದಾಳಿ ನಡೆದಿದೆ.
ಬೆಂಗಳೂರಿನ ಸಿದ್ಧಾಪುರದಲ್ಲಿರುವ ವಿಲ್ಸನ್ ಗಾರ್ಡನ್ ನಾಗನ ಮನೆ ಮೇಲೆ ದಾಳಿ ನಡೆದಿದ್ದು, ಎರಡು ಲಕ್ಷ ರೂಪಾಯಿ ನಗದು ಹಣ, ಚಾಕು ಚೂರಿಗಳು ದಾಳಿಯಲ್ಲಿ ಪತ್ತೆಯಾಗಿವೆ. ರೌಡಿಯೊಬ್ಬನ ಮನೆಯಲ್ಲಿ 254 ಆಧಾರ್ ಕಾರ್ಡ್ ಸಿಕ್ಕಿದ್ದು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಭಾವಿ ರೌಡಿಗಳ ಹಿಂಬಾಲಕರ ಮನೆಯಲ್ಲಿ ಚಾಕು ಮತ್ತಿತರ ಮಾರಕಾಸ್ತ್ರಗಳು ಸಿಕ್ಕಿದ್ದು ಸಿಸಿಬಿ ಪೊಲೀಸರನ್ನೇ ಬೆಚ್ಚಿ ಬೀಳಿಸಿದೆ.
ಕೆಲವು ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಅಪರಾಧ ನಿಯಂತ್ರಣ ಮಾಡಲೆಂದು ಎರಡು ಸಾವಿರ ರೌಡಿಗಳ ಮನೆಗಳ ಮೇಲೆ ಬೆಂಗಳೂರು ಪೊಲೀಸರು ದಾಳಿ ನಡೆಸಿದ್ದರು. ಆದರೂ ಸಹ ಅಪರಾಧ ಚಟುವಟಿಕೆಗಳು ನಿಯಂತ್ರಣಕ್ಕೆ ಬಂದಿರಲಿಲ್ಲ. ಈ ನಿಟ್ಟಿನಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳ ಮಟ್ಟದಲ್ಲಿ ಸಭೆ ನಡೆಸಿದ್ದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂತ್ ರೌಡಿ ಚಟುವಟಿಕೆ ನಿಗ್ರಹಕ್ಕೆ ಕ್ರಮ ಜರುಗಿಸಲು ಸೂಚಿಸಿದ್ದರು.
Recommended Video
ಪೊಲೀಸ್ ಆಯುಕ್ತರ ಸೂಚನೆ ಹಿನ್ನೆಲೆಯಲ್ಲಿ ಸೈಲೆಂಟ್ ಸುನೀಲ್, ಜೆ.ಬಿ. ನಾರಾಯಣ, ಸೈಕಲ್ ರವಿ, ವಿಲ್ಸನ್ ಗಾರ್ಡನ್ ನಾಗ ಸೇರಿದಂತೆ ಪ್ರಮುಖ ರೌಡಿಗಳ ಮನೆಗಳ ಮೇಲೆ ಏಕ ಕಾಲಕ್ಕೆ ದಾಳಿ ನಡೆದಿದೆ. ಈ ದಾಳಿಯಿಂದ ಬೆಂಗಳೂರಿನ ದಾದಾಗಿರಿ ನಿಯಂತ್ರಣಕ್ಕೆ ಬರಲಿದೆಯಾ ಕಾದು ನೋಡಬೇಕಿದೆ. ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮಾರ್ಗದರ್ಶನದಲ್ಲಿ ಈ ದಾಳಿ ನಡೆದಿದೆ.