ಎಂಇಪಿ ಪಕ್ಷದ ಮುಖ್ಯಸ್ಥೆ ನೌಹೀರಾ ಶೇಖ್ಗೆ ಜಾಮೀನು
ಬೆಂಗಳೂರು, ಏಪ್ರಿಲ್ 30: ಎಂಇಪಿ ಪಕ್ಷದ ಅಧ್ಯಕ್ಷೆ ನೌಹೀರಾ ಶೇಖ್ಗೆ ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ನ್ಯಾಯಾಧೀಶ ಶಿವಶಂಕರ ಬಿ ಅಮರಣ್ಣವರ, ಐದು ಲಕ್ಷ ರೂ ಬೆಲೆಯ ಎರಡು ಬಾಂಡ್ ಮತ್ತು ಇಬ್ಬರು ವ್ಯಕ್ತಿಗಳ ಶ್ಯೂರಿಟಿ, ದೇಶವನ್ನು ಬಿಟ್ಟು ಹೋಗಬಾರದು, ಸಾಕ್ಷ್ಯಗಳ ನಾಶಕ್ಕೆ ಮುಂದಾಗಬಾರದು ಎಂಬ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ.
ನೌಹೀರಾ ಶೇಖ್ ಠೇವಣಿದಾರರಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಶಿಕ್ಷೆ ಅನುಭವಿಸುತ್ತಿದ್ದರು.ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಹೀರಾ ಗ್ರೂಪ್ ಆಫ್ ಕಂಪನಿಯು ಕಳೆದ ವರ್ಷಗಳಿಂದ ಇಸ್ಲಾಮಿಕ್ ಬ್ಯಾಂಕಿಂಗ್ ಪದ್ಧತಿ ಪ್ರಕಾರ ಚಿನ್ನ,ಟೆಕ್ಸ್ಟೈಲ್ಸ್, ಆಹಾರ ಪದಾರ್ಥಗಳು ಮತ್ತಿತರೆ ವ್ಯಾಪಾರ ವಹಿವಾಟಿನಲ್ಲಿ ತೊಡಗಿದೆ.
ಇದರಿಂದ ಬರುವ ಲಾಭದಲ್ಲಿ ಕಂಪನಿಯಲ್ಲಿ ಹಣ ಹೂಡಿಕೆ ಮಾಡಿರುವವರ ಖಾತೆಗೆ ಹಂಚಿಕೆ ಮಾಡಲಾಗುತ್ತಿತ್ತು. ಆದರೆ ಕಳೆದ ವರ್ಷ ಜೂನ್ ನಂತರ ಆರ್ಬಿಐನಿಯಮಗಳ ಬದಲಾವಣೆ ನಿಯಮಗಳ ಬದಲಾವಣೆ ಹಾಗೂ ಸರಕು ಮತ್ತು ಸೇವಾ ತೆರಿಗೆ ಕಾಯಿದೆ ಜಾರಿಯಿಂದ ಕೆಲ ತಾಂತ್ರಿಕ ಕಾರಣಗಳಿಂದ ಸಕಾಲದಲ್ಲಿ ಲಾಭಾಂಶವನ್ನು ನೀಡಲು ಸಾಧ್ಯವಾಗಿಲ್ಲ ಎಂದು ತಿಳಿಸಿದ್ದಾರೆ.