ಪೌರತ್ವ ಜನಾಕ್ರೋಶ, ಬಿಜೆಪಿಗೆ ಇದು ಕೊನೆಯ ಕಾಲ: ಡಿಕೆಶಿ
ಬೆಂಗಳೂರು, ಡಿಸೆಂಬರ್ 20: ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ದ ಜನರು ಮಾಡುತ್ತಿರುವ ಪ್ರತಿಭಟನೆಯನ್ನು ನೋಡಿದರೆ, ಬಿಜೆಪಿಗೆ ಇದು ಕೊನೆಯ ಕಾಲ ಎಂಬಂತೆ ಇದೆ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇಂದು ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಹಿಂದೆ ಬ್ರಿಟಿಷರನ್ನು ಓಡಿಸಲು ಸಾವಿರಾರು ಜನ ಅಂದು ಪ್ರಾಣತ್ಯಾಗ ಮಾಡಿದ್ದರು. ಅದೇ ರೀತಿ ಬಿಜೆಪಿಯನ್ನು ತೆಗೆದು ಹಾಕಲು ಜನ ದಂಗೆ ಎದ್ದಿದ್ದಾರೆ, ಬಿಜೆಪಿಯ ಅಂತ್ಯಕ್ಕೆ ಇದು ಮುನ್ನುಡಿ ಬರೆದಿರುವಂತಿದೆ ಎಂದು ಡಿ.ಕೆ.ಶಿವಕುಮಾರ್ ಭವಿಷ್ಯ ನುಡಿದರು.
ರಾಜ್ಯದಲ್ಲಿ ಅನಾವಶ್ಯಕ ನಿಷೇಧಾಜ್ಞೆ ಜಾರಿ ಮಾಡಿರುವುದರಿಂದ, ಜನ ಸಾಮಾನ್ಯರಿಗೆ ತೊಂದರೆಯಾಗಿದೆ. ಇನ್ನು ಹೆಚ್ಚು ಅಹಿತಕರ ಘಟನೆ ನಡೆಯಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಪ್ರಚೋದನೆ ಕೊಟ್ಟಂತಿದೆ ಎಂದು ಕಿಡಿಕಾರಿದರು.
ಗೋಲಿಬಾರ್ ಗೆ ಸರ್ಕಾರ ಆದೇಶ ನೀಡಿರಲಿಲ್ಲ: ಯಡಿಯೂರಪ್ಪ
ರಾಜ್ಯದಲ್ಲಿ ಪ್ರತಿಭಟನೆ ನಡೆಯಲು ಬಿಜೆಪಿ ನಾಯಕರ ಹೇಳಿಕೆಗಳೇ ಕಾರಣ, ಹೀಗಾಗಿಯೇ ಅವರು ತಮ್ಮ ಪಕ್ಷದ ನಾಯಕರಿಗೆ ಬಹಿರಂಗವಾಗಿ ಹೇಳಿಕೆ ನೀಡದಂತೆ ಸೂಚನೆ ನೀಡಿದ್ದಾರೆ ಎಂದು ಹೇಳಿದರು.
ರಾಜ್ಯದಲ್ಲಿ ೧೪೪ ಸೆಕ್ಷನ್ ಹಾಕಿದ್ದು ಏಕೆ? ಏನಾಗಿದೆ ಎಂದು ಹಾಕಿದ್ದೀರಿ? ಯಾರೂ ಮನೆಯಲ್ಲಿ ಮದುವೆ ಮಾಡಬಾರದೇ? ಜನರು ತಮ್ಮ ಅಭಿಪ್ರಾಯ ಹೇಳಬಾರದಾ? ಜನರ ಅಭಿಪ್ರಾಯಗಳನ್ನು ಹತ್ತಿಕ್ಕುವ ಕೆಲಸ ಮಾಡುತ್ತಿದ್ದೀರಿ ಎಂದು ಎಂದರು.
ಸಾಮಾನ್ಯ ಜನರಿಗೆ ನೇರವಾಗಿ ಸಂಸತ್ತಿಗೆ ಹೋಗಿ ಹೇಳಲು ಆಗುವುದಿಲ್ಲ ಎಂದು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದಾರೆ. ಅದು ಅವರ ಹಕ್ಕು. ಅದನ್ನು ಕಸಿದುಕೊಳ್ಳಬಾರದು ಎಂದು ಮಾತಿನ ಚಾಟಿ ಬೀಸಿದರು.
ಬಿಜೆಪಿ ಪಕ್ಷದಿಂದ ಸಂವಿಧಾನವನ್ನು ಬುಡಮೇಲು ಮಾಡುವ ಹುನ್ನಾರ ನಡೆದಿದೆ. ಮಹಾತ್ಮ ಗಾಂಧಿ, ನೆಹರೂ ಅವರ ನಾಯಕತ್ವದಲ್ಲಿ ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ದಾರೆ. ಈಗ ಜಾರಿಗೆ ತಂದಿರುವ ಕಾಯ್ದೆ ಅದು ಕಾನೂನು ಬಾಹಿರವೆಂದರು.
'ಅನರ್ಹ ಅಧಿಕಾರ'ದ ಮದ ಯಡಿಯೂರಪ್ಪಗೆ ಎಲ್ಲವನ್ನೂ ಮರೆಸಿದಂತಿದೆ'
ಇಂದು ಇಡೀ ದೇಶದ ಜನರು ಕಾನೂನಿನ ಮೇಲೆ ಇರುವ ನಂಬಿಕೆಯನ್ನು ಕಳೆದುಕೊಳ್ಳುವಂತಾಗಿದೆ. ಜನರ ನಂಬಿಕೆಗೆ ವಿರುದ್ದವಾಗಿ ಕೇಂದ್ರ ಸರ್ಕಾರ ನಡೆದುಕೊಳ್ಳುತ್ತಿದೆ, ಜನ ಬಿಜೆಪಿಯನ್ನು ಮನೆಗೆ ಕಳಿಸಲು ಸಜ್ಜಾಗಿದ್ದಾರೆ ಎಂದು ಹೇಳಿದರು.
ಜನರ ಜೊತೆ ಕಾಂಗ್ರೆಸ್ ಎಂದೆಂದಿಗೂ ಇರುತ್ತದೆ. ಮಾಧ್ಯಮದವರನ್ನು ಬಂಧನ ಮಾಡಿದ್ದು ಸರಿಯಲ್ಲ. ಮೊದಲು ಗಲಭೆಗೆ ಪ್ರಚೋದನೆ ನೀಡುವ ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಿ ಎಂದು ಸವಾಲು ಹಾಕಿದರು.
ಯು.ಟಿ.ಖಾದರ್ ಯಾವುದೇ ಪ್ರಚೋದನಾತ್ಮಕ ಹೇಳಿಕೆ ನೀಡಿಲ್ಲ, ಬಿಜೆಪಿ ನಾಯಕರು ಎಷ್ಟು ಹೇಳಿಕೆ ನೀಡಿಲ್ಲ, ನಾವು ಕೂಡಾ ಬೀದಿಗಿಳಿದು ಹೋರಾಟ ಮಾಡುತ್ತೇವೆ. ಕಾಂಗ್ರೆಸ್ ಇನ್ನೂ ಜೀವಂತವಾಗಿದೆ ಎಂದು ಹೇಳಿದರು.