ಬೆಂಗಳೂರಿನಲ್ಲಿ ಉರಿಯುವ 'ಪೌರತ್ವ'ದ ಬೆಂಕಿಗೆ 'ನಿಷೇಧಾಜ್ಞೆ'ಯ ತುಪ್ಪ
Recommended Video
ಬೆಂಗಳೂರು, ಡಿಸೆಂಬರ್.19: ಪೌರತ್ವ ತಿದ್ದುಪಡಿ ಕಾಯ್ದೆಯ ಬೆಂಕಿ ದೇಶಾದ್ಯಂತ ಆಕ್ರೋಶದ ಜ್ವಾಲೆಯಾಗಿದೆ. ಬೆಂಗಳೂರಿನಲ್ಲಿ ಅದೇ ಪೌರತ್ವದ ಬೆಂಕಿಗೆ ರಾಜ್ಯ ಸರ್ಕಾರದ ಕ್ರಮ ತುಪ್ಪ ಸುರಿದಂತೆ ಆಗಿದೆ. ಡಿಸೆಂಬರ್.19ರಂದು ನಗರದಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಕ್ರಮವನ್ನು ತಡೆಯಲು ರಾಜ್ಯಾದ್ಯಂತ ಸೆಕ್ಷನ್ 144 ಜಾರಿಗೊಳಿಸಲಾಗಿದೆ.
ರಾಜ್ಯ ಸರ್ಕಾರ ತೆಗೆದುಕೊಂಡ ನಿಷೇಧಾಜ್ಞೆಯ ಕ್ರಮ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಆಗಿದೆ. ಮೊದಲೇ ಕೇಂದ್ರ ಸರ್ಕಾರದ ವಿರುದ್ಧ ಕೆರಳಿರುವ ಸಂಘಟನೆಗಳು ರಾಜ್ಯ ಸರ್ಕಾರದ ನಿಲುವಿನಿಂದ ರೊಚ್ಚಿಗೆದ್ದಿವೆ. ನಿಷೇಧಾಜ್ಞೆ ನಡುವೆ ಬೆಂಗಳೂರಿನಲ್ಲಿ ಪ್ರತಿಭಟನೆ ಕಾವು ತೀವ್ರಗೊಂಡಿದೆ.
ರಾಜ್ಯಾದ್ಯಂತ 3 ದಿನ ನಿಷೇಧಾಜ್ಞೆ: ಡಿಜಿಪಿಗೆ ಸಿಎಂ ಕೊಟ್ಟ ಸಂದೇಶವೇನು?
ಬೆಂಗಳೂರಿನ ಟೌನ್ ಹಾಲ್ ಹಾಗೂ ಮೈಸೂರು ಬ್ಯಾಂಕ್ ಸರ್ಕಲ್ ಬಳಿ ನೆರೆದ ನೂರಾರು ಮಂದಿ ಪ್ರತಿಭಟನಾಕಾರರು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಧಿಕ್ಕಾರ ಕೂಗಿದರು. ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಕೆಲವು ಪ್ರತಿಭಟನಾಕಾರರನ್ನು ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ವಶಕ್ಕೆ ಪಡೆದರು.
ಇತಿಹಾಸ ತಜ್ಞ ರಾಮಚಂದ್ರ ಗುಹಾರನ್ನು ವಶಕ್ಕೆ ಪಡೆದ ಪೊಲೀಸರು
ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಹೋರಾಟದಲ್ಲಿ ಪಾಲ್ಗೊಳ್ಳಲು ಇತಿಹಾಸ ತಜ್ಞ ರಾಮಚಂದ್ರ ಗುಹಾ ತೆರಳಿದ್ದರು. ಈ ವೇಳೆ ನಗರದ ಟೌನ್ ಹಾಲ್ ಬಳಿ ಪ್ರತಿಭಟನೆಗೆ ಮುಂದಾದ ಗುಹಾರನ್ನು ಪೊಲೀಸರು ವಶಕ್ಕೆ ಪಡೆದರು. ಇತ್ತ ಸದಾಶಿವನಗದ ನಿವಾಸದಲ್ಲೇ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ರನ್ನು ವಶಕ್ಕೆ ಪಡೆಯಲಾಯಿತು.
ರಾಜ್ಯದಲ್ಲಿ ಶಾಂತಿ ಕಾಪಾಡುವಂತೆ ಸಿಎಂ ಮನವಿ
ರಾಜ್ಯದ ಜನತೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಶಾಂತಿ ಕಾಪಾಡುವಂತೆ ಕಳಕಳಿಯ ಮನವಿ ಮಾಡಿಕೊಂಡಿದ್ದಾರೆ. ಗೃಹಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಸಿಎಂ, ಎಲ್ಲರೂ ಶಾಂತಿ ಕಾಪಾಡಿ ರಾಜಕೀಯ ವ್ಯಕ್ತಿಗಳು ಕೂಡಾ ಶಾಂತಿಗೆ ಭಂಗ ಬಾರದಂತೆ ನಡೆದುಕೊಳ್ಳಬೇಕಾಗಿ ಹೇಳಿದರು. ಪೌರತ್ವ ತಿದ್ದುಪಡಿ ಕಾಯ್ದೆಯು ದೇಶದ ಕಾನೂನಾಗಿದೆ. ಈ ಕಾಯ್ದೆಯಿಂದ ಯಾರಿಗೂ ಆತಂಕ ಅಥವಾ ತೊಂದರೆ ಆಗದು. ಪೌರತ್ವ ಕಾಯ್ದೆ ಜನರನ್ನು ರಾಷ್ಟ್ರೀಯತೆ ಆಧಾರದಲ್ಲಿ ಗುರುತಿಸುತ್ತದೆ. ಜಾತಿ, ಪಂಥ, ಧರ್ಮದ ಆಧಾರದಲ್ಲಿ ಈ ಕಾಯ್ದೆ ಜನರನ್ನು ಗುರುತಿಸುವುದಿಲ್ಲ. ದೇಶದ ಎಲ್ಲ ರಾಜ್ಯಗಳು ಒಕ್ಕೂಟ ವ್ಯವಸ್ಥೆಯಲ್ಲಿದ್ದು, ಕಾಯ್ದೆ ಎಲ್ಲ ರಾಜ್ಯಗಳಿಗೂ ಅನ್ವಯ ಆಗುತ್ತೆ ಎಂದರು.
ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ಬೆಂಗಳೂರಲ್ಲಿ ಯಾರೂ ಕೆಮ್ಮುವ ಹಾಗಿಲ್ಲ!
ಪೊಲೀಸರಿಗೆ ಮೊದಲೇ ಎಚ್ಚರಿಕೆ ನೀಡಿರುವ ಮುಖ್ಯಮಂತ್ರಿ
ಇನ್ನು, ಟೌನ್ ಹಾಲ್ ಬಳಿ ನಡೆದ ಲಾಠಿಚಾರ್ಜ್ ಗೆ ಸಂಬಂಧಿಸಿದಂತೆ ಸಿಎಂ ಬಿಎಸ್ ವೈ ಪ್ರತಿಕ್ರಿಯೆ ನೀಡಿದರು. ಯಾವುದೇ ಕಾರಣಕ್ಕೂ ಪೊಲೀಸರು ಕಾನೂನು ಕೈಗೆತ್ತಿಕೊಳ್ಳುವ ಕೆಲಸ ಮಾಡಬಾರದು. ಈ ಬಗ್ಗೆ ಪೊಲೀಸರಿಗೆ ಈಗಾಗಲೇ ಸೂಚನೆ ಕೊಟ್ಟಿದ್ದೇನೆ. ಯಾರು ಗೂಂಡಾಗಳು ಇದ್ದಾರೋ ಅವರ ಮೇಲೆ ಕ್ರಮ ಕೈಗೊಳ್ಳಿ. ಆದರೆ, ಸಾಮಾನ್ಯ ಜನರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳಬಾರದು. ಒಂದು ವೇಳೆ ಆ ರೀತಿ ನಡೆದುಕೊಂಡರೆ ಅಂಥವರ ವಿರುದ್ಧವೇ ಕಠಿಣ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಸಿಎಂ ಎಚ್ಚರಿಕೆ ನೀಡಿದ್ದಾರೆ.
|
ನಿಷೇಧಾಜ್ಞೆ ಹೇರಿಕೆ ವಿರೋಧಿಸಿ ಹೈಕೋರ್ಟ್ ಗೆ ಅರ್ಜಿ
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುವ ಮುನ್ನವೇ ರಾಜ್ಯಾದ್ಯಂತ ನಿಷೇಧಾಜ್ಞೆ ಘೋಷಿಸಿದ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗಲಾಗಿದೆ. ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಹಕ್ಕನ್ನು ಹತ್ತಿಕ್ಕುವ ಕೆಲಸ ಮಾಡಲಾಗುತ್ತಿದೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಸಲ್ಲಿಸಿದ ಅರ್ಜಿಯನ್ನು ಡಿಸೆಂಬರ್.21ರಂದು ವಿಚಾರಣೆ ನಡೆಸಲು ರಾಜ್ಯ ಹೈಕೋರ್ಟ್ ಸಮ್ಮತಿಸಿದೆ.