75ನೇ ಸ್ವಾತಂತ್ರ್ಯ ಸಂಭ್ರಮ: 75 ಮೀಟರ್ ರಾಷ್ಟ್ರಧ್ವಜ ಹೊತ್ತು ನಡೆದ ಬೆಂಗಳೂರು ನಾಗರಿಕರು
ಬೆಂಗಳೂರು, ಆಗಸ್ಟ್ 7: ದೇಶಾದ್ಯಂತ ಈಗಾಗಲೇ 75ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮುಗಿಲು ಮುಟ್ಟಿದೆ. ದೇಶದ ಎಲ್ಲೆಡೆ ನಾಗರಿಕರು ಈ ಸಂಭ್ರಮದಲ್ಲಿ ಉತ್ಸಾಹದಿಂದ ಭಾಗವಹಿಸುತ್ತಿದ್ದಾರೆ. ಬೈಕ್ನಲ್ಲಿ ರಾಷ್ಟ್ರಧ್ವಜ ರ್ಯಾಲಿ, ಮನೆಯ ಮೇಲೆ ಧ್ವಜ ಹಾರಾಟ, ಸಾಮಾಜಿಕ ಮಾಧ್ಯಗಳ ಪ್ರೊಫೈಲ್ ಫೋಟೊಗಳಲ್ಲೂ ತ್ರಿವರ್ಣ ಧ್ವಜ ರಾರಾಜಿಸುತ್ತಿದೆ.
ದೇಶದ 75 ನೇ ಸ್ವಾತಂತ್ರ್ಯ ಸಂಭ್ರಮದ ವೇಳೆ 'ಆಜಾದಿ ಕಾ ಅಮೃತ ಮಹೋತ್ಸವ' ಅಭಿಯಾನದ ಅಂಗವಾಗಿ, ಬೆಂಗಳೂರಿನ ಎಚ್ಎಸ್ಆರ್ ಲೇಔಟ್ನ ನಾಗರಿಕರು ಭಾನುವಾರ ಬೆಳಿಗ್ಗೆ 75 ಮೀಟರ್ ಉದ್ದದ ಭಾರತೀಯ ಧ್ವಜದೊಂದಿಗೆ ನಡೆಯುವ ಮೂಲಕ ದೇಶಾಭಿಮಾನ ಮೆರೆದಿದ್ದಾರೆ.
ಧ್ವಜಕ್ಕೆ ಅಗೌರವ ತೋರಿಸುವ ಬಿಜೆಪಿಗರದ್ದು ದೇಶದ್ರೋಹ; ಮಹದೇವಪ್ಪ
ಎಚ್ಎಸ್ಆರ್ ಲೇಔಟ್ನ ನಿವಾಸಿಗಳು ಸೋಮಸುಂದರಪಾಳ್ಯ ಕೆರೆಯಿಂದ ಹರಳೂರು ಕೆರೆಗೆ ಮೂರು ಕಿಲೋ ಮೀಟರ್ ವರೆಗೆ ಭಾನುವಾರ ಬೆಳಿಗ್ಗೆ ನಡೆದ ವಾಕಥಾನ್ನಲ್ಲಿ100 ಕ್ಕೂ ಹೆಚ್ಚು ನಾಗರಿಕರು ಭಾಗವಹಿಸಿದರು.
3 ಕಿಲೋ ಮೀಟರ್ ನಡೆದ ವಾಕಥಾನ್ ಉದ್ದಕ್ಕೂ 'ಜೈ ಹಿಂದ್' ಮತ್ತು 'ಭಾರತ್ ಮಾತಾ ಕಿ ಜೈ' ಎಂಬ ಘೋಷಣೆಗಳು ಪ್ರತಿಧ್ವನಿಸಿದವು. ವಾಕಥಾನ್ನಲ್ಲಿ ಹಿರಿಯ ನಾಗರಿಕರು, ಮಕ್ಕಳು ಸೇರಿದಂತೆ ಹಲವರು ತ್ರಿವರ್ಣ ಧ್ವಜವನ್ನು ಹಿಡಿದುಕೊಂಡು ಸಂಭ್ರಮಿಸಿದರು.
ಇದಕ್ಕಿಂತ ಸುಂದರವಾದದ್ದು ಏನಿದೆ?
ವಾಕಥಾನ್ ಬಗ್ಗೆ ಎಚ್ಎಸ್ಆರ್ ಲೇಔಟ್ ನಾಗರಿಕರ ಗುಂಪಿನ ಟ್ವಿಟರ್ ಖಾತೆಯಲ್ಲಿ ಈ ಬಗ್ಗೆ ಸಂತಸ ಹಂಚಿಕೊಳ್ಳಲಾಗಿದೆ. ವಾಕಥಾನ್ ಕುರಿತು ಫೋಟೋಗಳನ್ನು ಟ್ವೀಟ್ ಮಾಡಿ, ಇದಕ್ಕಿಂತ ಸುಂದರವಾದದ್ದು ಏನಿದೆ. 75 ನೇ ಸ್ವಾತಂತ್ರ್ಯ ಸಂಭ್ರಮ ಆಚರಿಸುವ ಸಂದರ್ಭದಲ್ಲಿ 75 ಮೀಟರ್ ತ್ರಿವರ್ಣ ಧ್ವಜವನ್ನು ಹಿಡಿದು ಸುಮಾರು 3 ಕಿಲೋಮೀಟರ್ ನಡೆಯಲಾಯಿತು. ಎಚ್ಎಸ್ಆರ್ ಲೇಔಟ್, ಸೋಮಸುಂದರಪಾಳ್ಯ, ಹರಳೂರು ಸಿಟಿಜನ್ ಗ್ರೂಪ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವು ಎಂದು ಮಾಹಿತಿ ಹಂಚಿಕೊಳ್ಳಲಾಗಿದೆ.
'ಹರ್ ಘರ್ ತಿರಂಗ' ಹಾಡು ಸಾಮಾಜಿಕ ಜಾಲತಾಣದಲ್ಲಿ ವೈರಲ್
ರಾಷ್ಟ್ರಧ್ವಜ ಹಾರಿಸಲು ಕರ್ನಾಟಕ ಸರ್ಕಾರದ ಸೂಚನೆ
'ಆಜಾದಿ ಕಾ ಅಮೃತ ಮಹೋತ್ಸ'ವವನ್ನು ಆಚರಿಸಲು ಕರ್ನಾಟಕ ಸರ್ಕಾರವು ಈಗಾಗಲೇ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಸಂಸ್ಥೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲು ಆದೇಶಿಸಿದೆ. 75ನೇ ಸ್ವಾತಂತ್ರ್ಯ ದಿನಾಚರಣೆಯಂದು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜಾರೋಹಣ ಮಾಡುವಂತೆ ಸೂಚನೆ ನೀಡಲಾಗಿದೆ.
ದೇಶಾದ್ಯಂತ ಹರ್ ಘರ್ ತಿರಂಗಾ ಆಂದೋಲನ
ಇದಕ್ಕೂ ಮುನ್ನ ಹರ್ ಘರ್ ತಿರಂಗಾ ಆಂದೋಲನವನ್ನು ಬಲಪಡಿಸುವಂತೆ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದರು. ಆಗಸ್ಟ್ 2 ರಿಂದ ಆಗಸ್ಟ್ 15 ರ ನಡುವೆ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಡಿಪಿಯಲ್ಲಿ ತ್ರಿವರ್ಣ ಧ್ವಜದ ಚಿತ್ರ ಹಾಕುವಂತೆ ನಾಗರಿಕರಿಗೆ ಮನವಿ ಮಾಡಿದರು.
ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಎಲ್ಲಾ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಪ್ರೊಫೈಲ್ ಚಿತ್ರವನ್ನ ತ್ರಿವರ್ಣ ಧ್ವಜಕ್ಕೆ ಬದಲಾಯಿಸಿದ್ದಾರೆ. ಈ ಆಂದೋಲನವು ರಾಷ್ಟ್ರೀಯ ಧ್ವಜದೊಂದಿಗೆ ಭಾರತೀಯರ ಸಂಪರ್ಕವನ್ನು ಗಾಢಗೊಳಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಅವರು ಹಾರಿಸಿದ ಮೊದಲ ತ್ರಿವರ್ಣ ಧ್ವಜದ ಛಾಯಾಚಿತ್ರವನ್ನೂ ಪ್ರಧಾನಿ ಹಂಚಿಕೊಂಡಿದ್ದಾರೆ.
ಒಂಟು ಕೋಟಿ ಧ್ವಜ ಹಾರಿಸಲು ಸಂಕಲ್ಪ
ಇಡೀ ರಾಜ್ಯದಲ್ಲಿ ಒಂದು ಕೋಟಿ ಧ್ವಜ ಹಾರಿಸುವ ಸಂಕಲ್ಪವನ್ನು ಹಾಕಿಕೊಳ್ಳಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಬಗ್ಗೆ ವಾಗ್ದಾನ ಮಾಡಿದ್ದಾರೆ.
ಅದರಂತೆ ಬೆಂಗಳೂರಿನಲ್ಲಿ ಮನೆ ಮನೆಗೆ ತ್ರಿವರ್ಣ ಧ್ವಜವನ್ನು ಹಂಚುವ ಜವಾಬ್ದಾರಿಯನ್ನು ಬಿಬಿಎಂಪಿಗೆ ವಹಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯಾದ್ಯಂತ ರಾಷ್ಟ್ರ ಧ್ವಜಗಳನ್ನು ವಿತರಣೆ ಮಾಡುವ ಜವಾಬ್ದಾರಿ ವಹಿಸಿಕೊಂಡಿದೆ. ರಾಜ್ಯದಲ್ಲೇ 50 ಲಕ್ಷ ರಾಷ್ಟ್ರ ಧ್ವಜ ಉತ್ಪಾದನೆಗೆ ಆರ್ಡರ್ ಕೊಡುವುದಾಗಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದರು.