ಜನತಾ ಬಜಾರ್ ಉಳಿಸುವಂತೆ ನಾಗರಿಕರಿಂದ ರಾಜ್ಯ ಸರ್ಕಾರಕ್ಕೆ ಒತ್ತಡ
ಬೆಂಗಳೂರು, ಏಪ್ರಿಲ್ 05: ಪಾರಂಪರಿಕ ಕಟ್ಟಡವನ್ನು ಉಳಿಸಲು ಪಣ ತೊಟ್ಟಿರುವ ಹೆರಿಟೇಜ್ ಬೇಕು ಗ್ರೂಪ್ ಇದೀಗ ಪಾರಂಪರಿಕ ಕಟ್ಟಡಗಳಲ್ಲಿ ಒಂದಾದ ಜನತಾ ಬಜಾರ್ನ್ನು ಉಳಿಸಲು ಮುಂದಾಗಿದೆ.
ಕೆಂಪೇಗೌಡ ರಸ್ತೆಯಲ್ಲಿರುವ 52 ವರ್ಷದ ಪಾರಂಪರಿಕ ಕಟ್ಟಡವಾದ ಜನತಾ ಬಜಾರ್ ನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿ, ಸುಮಾರು 8 ಮಹಡಿಗಳ ವಾಣಿಜ್ಯ ಸಮುಚ್ಚಯ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ ಮುಂದಾಗಿದೆ. ಈ ಕ್ರಮವನ್ನು ಖಂಡಿಸಿ ಹೆರಿಟೇಜ್ ಬೇಕು ಗ್ರೂಪ್ ಲೋಕೋಪಯೋಗಿ ಇಲಾಖೆಗೆ ಬಜಾರ್ ಉಳಿಸಲು ಮನವಿ ಮಾಡಿದೆ.
ಇತಿಹಾಸ ಪುಟಕ್ಕೆ ಮಧ್ಯಮ ವರ್ಗದ ಆಪ್ತ ಜನತಾ ಬಜಾರ್
2031ರ ಪರಿಷ್ಕೃತ ನಗರ ಯೋಜನೆಯಲ್ಲಿ ಪಾರಂಪರ ಕಟ್ಟಡಗಳ ಪಟ್ಟಿಯಲ್ಲಿ ಜನತಾ ಬಜಾರ್ ಕೂಡ ಒಂದಾಗಿದೆ. ಸಾಕಷ್ಟು ನಗರಗಳಲ್ಲಿ ಪಾರಂಪರಿಕ ಕಟ್ಟಡಗಳನ್ನು ಉಳಿಸಲು ಪ್ರಯತ್ನಪಟ್ಟರೆ ಬೆಂಗಳೂರಿನಲ್ಲಿ ಪಾರಂಪರಿಕ ಕಟ್ಟಡಗಳನ್ನು ಕೆಡವಲು ಮುಂದಾಗಿದ್ದಾರೆ.
ಕರ್ನಾಟಕ ರಾಜ್ಯ ಕೋ-ಆಪರೇಟಿವ್ ಕನ್ಸ್ಯೂಮರ್ಸ್ ಫೆಡರೇಷನ್ ಹೇಳುವ ಪ್ರಕಾರ ಜನತಾ ಬಜಾರ್ ಕಟ್ಟಡ ಇನ್ನು ಪ್ರಬಲವಾಗಿದೆ. ಇಷ್ಟು ದಿನ ಆ ಕಟ್ಟಡವನ್ನು ಉಳಿಸಲು ಅಥವಾ ಸಮರ್ಪಕ ವ್ಯವಸ್ಥೆ ಕಲ್ಪಿಸುವ ಯಾವುದೇ ಪ್ರಯತ್ನ ಕೈಗೊಳ್ಳದೇ ಇದೀಗ ಕಟ್ಟಡವನ್ನು ನೆಲಸಮ ಮಾಡಲು ಮೂಮದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದೆ.
2008ರಲ್ಲಿ ಜನತಾ ಬಜಾರ್ ಒಪ್ಪಂದ ಕೊನೆಗೊಂಡಿದೆ. ಹೊಸ ಒಪ್ಪಂದವನ್ನು ಮಾಡಿಕೊಳ್ಳಳು 2009ರಲ್ಲಿ ಸಮಿತಿಯೊಂದನ್ನು ರಚನೆಮಾಡಲಾಗಿತ್ತು. 25 ವರ್ಷದ ಅವಧಿಗೆ ಒಪ್ಪಂದ ಮುಗಿದಿದ್ದು ಪ್ರತಿ ಐದು ವರ್ಷಕ್ಕೊಮ್ಮೆ ಒಪ್ಪಂದ ನವೀಕರಣ ಮಾಡಿಕೊಳ್ಳಬೇಕಿದೆ. ಆ ಒಪ್ಪಂದ 2014ರಲ್ಲಿ ಕೊನೆಗೊಂಡಿದ್ದು, ಲೋಕೋಪಯೋಗಿ ಇಲಾಖೆಯು ಒಪ್ಪಂದವನ್ನು ಮುಂದುವರೆಸಲು ಒಪ್ಪಿಗೆ ಸೂಚಿಸಿಲ್ಲ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಚುನಾವಣೆಯ ಮುಖ್ಯ ದಿನಾಂಕಗಳು
2017ರಲ್ಲಿ ಈ ಜಾಗವನ್ನು ಬಿಟ್ಟುಕೊಡುವಂತೆ ನೊಟೀಸ್ ನೀಡಿದೆ. ಕಾಲಾವಕಾಶ ಕೋರಿ ಸಾಕಷ್ಟು ಅಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಫೆಡರೇಷನ್ ನ ಸದಸ್ಯರು ತಿಳಿಸಿದ್ದಾರೆ.
ಪ್ರತಿನಿತ್ಯ 300 ರಿಂದ 500ಗ್ರಾಹಕರು ಮಳಿಗೆಗೆ ಭೇಟಿ ನೀಡುತ್ತಿದ್ದರು. ಇದೀಗ ಜನತಾಬಜಾರ್ ಗೇಟ್ನಲ್ಲಿ ಮೆಟಲ್ ಶೀಟ್ ಅಳವಡಿಸಿರುವ ಕಾರಣ, ಗ್ರಾಹಕರು ಭೇಟಿ ನೀಡಲು ಹಿಂಜರಿಯುತ್ತಿದ್ದಾರೆ. ಜತೆಗೆ ಜನತಾ ಬಜಾರ್ ನೆಲಸಮ ಮಾಡಲು ಇರುವ ಕಾರಣ ಏನು ಎಂದು ಪ್ರಶ್ನೆ ಮಾಡುತ್ತಿದ್ದಾರೆ ಎಂದು ಜನತಾ ಬಜಾರ್ ನ ವ್ಯವಸ್ಥಾಪಕ ಬಿರಾದಾರ್ ತಿಳಿಸಿದ್ದಾರೆ.