ಚೀಲದಲ್ಲಿ ಪಿಸ್ತೂಲು: ವಿಮಾನ ನಿಲ್ದಾಣದಲ್ಲಿ ಮಾಜಿ ಸಚಿವ ಆನಂದ್ ಅಸ್ನೋಟಿಕರ್ ವಶಕ್ಕೆ
ಬೆಂಗಳೂರು, ಸೆಪ್ಟೆಂಬರ್ 19: ಮಾಜಿ ಸಚಿವ ಆನಂದ್ ಆಸ್ನೋಟಿಕರ್ ಅವರನ್ನು ಸಿಐಎಸ್ಎಫ್ ಸಿಬ್ಬಂದಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.
ದೇವನಹಳ್ಳಿ ಕೆಐಎಎಲ್ ವಿಮಾನ ನಿಲ್ದಾಣದಲ್ಲಿ ಲಗೇಜ್ ಪರಿಶೀಲನೆ ವೇಳೆ ಆನಂದ್ ಅಸ್ನೋಟಿಕರ್ ಅವರ ಚೀಲದಲ್ಲಿ ಪಿಸ್ತೂಲು ಕಂಡುಬಂದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿದ್ದ ಸಿಐಎಸ್ಎಫ್ ಭದ್ರತಾ ಸಿಬ್ಬಂದಿ ಅವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಆನಂದ್ ಅಸ್ನೋಟಿಕರ್ ಅವರು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗೋವಾಕ್ಕೆ ಹೊರಟಿದ್ದರು. ಇಂಡಿಗೋ ವಿಮಾನದಲ್ಲಿ ಬೆಳಿಗ್ಗೆ 11 ಗಂಟೆಗೆ ಅವರು ಗೋವಾಕ್ಕೆ ತೆರಳಬೇಕಿತ್ತು. ಆಗ ಮಾಮೂಲಿ ಭದ್ರತಾ ತಪಾಸಣೆ ಸಂದರ್ಭದಲ್ಲಿ ಅವರ ಚೀಲದಲ್ಲಿ ಪಿಸ್ತೂಲು ಸಿಕ್ಕಿದೆ. ಗನ್ ಸಾಗಿಸುತ್ತಿರುವುದರ ಬಗ್ಗೆ ಅವರು ಭದ್ರತಾ ಸಿಬ್ಬಂದಿಗೆ ಯಾವುದೇ ಮಾಹಿತಿ ನೀಡಿರಲಿಲ್ಲ ಎನ್ನಲಾಗಿದೆ.
ಪಿಸ್ತೂಲ್ಗೆ ತಮ್ಮ ಬಳಿ ಪರವಾನಗಿ ಇದೆ ಎಂದು ಆನಂದ್ ಅಸ್ನೋಟಿಕರ್ ಭದ್ರತಾ ಸಿಬ್ಬಂದಿಗೆ ತಿಳಿಸಿದ್ದಾರೆ. ಅವರನ್ನು ವಶಕ್ಕೆ ಪಡೆದಿರುವ ಭದ್ರತಾ ಸಿಬ್ಬಂದಿ, ವಿಚಾರಣೆಗೆ ಒಳಪಡಿಸಿದ್ದು, ಪಿಸ್ತೂಲಿನ ಲೈಸೆನ್ಸ್ ಪರಿಶೀಲನೆ ಮಾಡುತ್ತಿದ್ದಾರೆ.
Recommended Video
ಆನಂದ್ ಅಸ್ನೋಟಿಕರ್ ಅವರು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾರವಾರ-ಅಂಕೋಲ ವಿಧಾನಸಭೆ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯ ರೂಪಾಲಿ ನಾಯ್ಕ ಎದುರು ಸೋಲು ಅನುಭವಿಸಿದ್ದರು.