ಕುತೂಹಲ ಮೂಡಿಸಿದ ನೆನಪಿರಲಿ ಪ್ರೇಮ್-ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ!
ಬೆಂಗಳೂರು, ಅ. 16: ಮಹತ್ವದ ಬೆಳವಣಿಗೆಯಲ್ಲಿ ನೆನಪಿರಲಿ ಖ್ಯಾತಿಯ ನಟ ಪ್ರೇಮ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಇಲ್ಲಿನ ನಾಗರಬಾವಿಯಲ್ಲಿರುವ ನಟ ಪ್ರೇಮ್ ನಿವಾಸಕ್ಕೆ ಡಿಕೆ ಶಿವಕುಮಾರ್ ಬೇಟಿ ಕೊಟ್ಟಿದ್ದಾರೆ. ಪ್ರೇಮ್ ದಂಪತಿ ಜೊತೆ ಡಿಕೆ ಶಿವಕುಮಾರ್ ಮಾತುಕತೆ ನಡೆಸಿದರು. ಆರ್ ಆರ್ ನಗರ ಉಪ ಚುನಾವಣೆ ಹಿನ್ನೆಲೆಯಲ್ಲಿ ಈ ಭೇಟಿಗೆ ಮಹತ್ವ ಬಂದಿದ್ದು, ನಟ ಪ್ರೇಮ್ ಅವರು ಕಾಂಗ್ರೆಸ್ ಸೇರುತ್ತಾರಾ ಎಂಬ ಚರ್ಚೆ ಶುರುವಾಗಿದೆ.
ಆರ್ ಆರ್ ನಗರ ಚುನಾವಣೆಯಲ್ಲಿ ನಿನಿಮಾ ನಿರ್ಮಾಪಕರೂ ಆಗಿರುವ ಮಾಜಿ ಶಾಸಕ ಮುನಿರತ್ನ ಅವರು ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದಾರೆ. ಮುನಿರತ್ನ ಅವರ ಪರವಾಗಿ ಹಲವು ಸಿನಿಮಾ ನಟ-ನಟಿಯರು ಪ್ರಚಾರದಲ್ಲಿ ಭಾಗವಹಿಸಲಿದ್ದಾರೆ. ಮುನಿರತ್ನ ಅವರ ಪರವಾಗಿ ಪ್ರಮುಖವಾಗಿ ನಟರಾದ ದರ್ಶನ್, ಯಶ್ ಬರುವ ಸಾಧ್ಯತೆಗಳಿವೆ. ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಪರವಾಗಿ ಪ್ರಚಾರಕ್ಕೆ ಬರುವಂತೆ ನಟ ಪ್ರೇಮ್ ಅವರನ್ನು ಡಿ.ಕೆ. ಶಿವಕುಮಾರ್ ಅವರು ಆಹ್ವಾನಿಸಿದ್ದಾರೆ ಎನ್ನಲಾಗಿದೆ.
Recommended Video
ಈಗಾಗಲೇ ನಟಿ ಮಾಲಾಶ್ರೀ, ಸಾಧು ಕೋಕಿಲ, ಉಮಾಶ್ರೀ, ಜಯಮಾಲಾ ಸೇರಿದಂತೆ ಚಿತ್ರರಂಗದ ಹಲವು ಪ್ರಮುಖರು ಕಾಂಗ್ರೆಸ್ ಪಕ್ಷದಲ್ಲಿದ್ದಾರೆ. ಹೀಗಾಗಿ ಪ್ರೇಮ್ ಅವರನ್ನೂ ಸ್ಟಾರ್ ಕ್ಯಾಂಪೇನರ್ ಎಂದು ಭಾಗಿಯಾಗಲು ಮನವಿ ಮಾಡಿದ್ದಾರೆ ಎನ್ನಲಾಗಿದೆ.