ಡೆತ್ ನೋಟ್ ಬರೆದಿದ್ದ ವಾಸುದೇವ ಮಯ್ಯ, ಸಾವಿನ ಪ್ರಕರಣ ಸಿಐಡಿಗೆ!
ಬೆಂಗಳೂರು, ಜುಲೈ 10 : ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಮಾಜಿ ಸಿಇಒ ವಾಸುದೇವ್ ಮಯ್ಯ ಸಾವಿನ ಕುರಿತು ಸಿಐಡಿ ತನಿಖೆ ನಡೆಸಲಿದೆ. ವಾಸುದೇವ ಮಯ್ಯ ಬರೆದಿರುವ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದ್ದು, ಪ್ರಕರಣ ಕುತೂಹಲಕ್ಕೆ ಕಾರಣವಾಗಿದೆ.
ಕರ್ನಾಟಕ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ವಾಸುದೇವ್ ಮಯ್ಯ ಸಾವಿನ ಪ್ರಕರಣವನ್ನು ಸಿಐಡಿ ತನಿಖೆಗೆ ಹಸ್ತಾಂತರ ಮಾಡಿ ಆದೇಶ ಹೊರಡಿಸಿದ್ದಾರೆ. ಸೋಮವಾರ ವಾಸುದೇವ್ ಮಯ್ಯ ಅವರ ಶವ ಕಾರಿನಲ್ಲಿ ಪತ್ತೆಯಾಗಿತ್ತು. ಬೆಂಗಳೂರು ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದರು.
ಶ್ರೀ ಗುರು ರಾಘವೇಂದ್ರ ಬ್ಯಾಂಕ್ ಮಾಜಿ ಸಿಇಒ ವಾಸುದೇವ ಮಯ್ಯಾ ಆತ್ಮಹತ್ಯೆ
ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಕೋಟ್ಯಾಂತರ ರೂಪಾಯಿ ಅಕ್ರಮದ ಆರೋಪದ ಬಗ್ಗೆ ಈಗಾಗಲೇ ಸಿಐಡಿ ತನಿಖೆ ನಡೆಯುತ್ತಿದೆ. ಆದ್ದರಿಂದ, ವಾಸುದೇವ್ ಮಯ್ಯ ಸಾವಿನ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ. ಬೆಂಗಳೂರು ನಗರ ಪೊಲೀಸ್ ಆಯುಕ್ತರು ಸಿಐಡಿ ತನಿಖೆಗೆ ಶಿಫಾರಸು ಮಾಡಿದ್ದಾರೆ.
ಗುರು ರಾಘವೇಂದ್ರ ಸಹಕಾರ ಬ್ಯಾಂಕ್ನಿಂದ ಸಾಲ ಪಡೆದವರಿಗೆ ನಡುಕ
ವಾಸುದೇವ ಮಯ್ಯ ಅವರು ಬರೆದಿರುವ ಡೆತ್ ನೋಟ್ ಪೊಲೀಸರಿಗೆ ಸಿಕ್ಕಿದೆ. 6 ಪುಟದ ಡೆತ್ ನೋಟ್ನಲ್ಲಿ ಬ್ಯಾಂಕ್ ಅವ್ಯವಹಾರದ ಕುರಿತು ಅವರು ಸುಧೀರ್ಘ ವಿವರಣೆ ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಎಂಟು ಜನರ ಹೆಸರನ್ನು ಸಹ ಅವರು ಉಲ್ಲೇಖಿಸಿದ್ದು, ತನಿಖೆಗೆ ಹೊಸ ಆಯಾಮ ನೀಡಿದೆ.
ಗುರು ರಾಘವೇಂದ್ರ ಬ್ಯಾಂಕ್ ಅವ್ಯವಹಾರ ಪ್ರಕರಣ: ತನಿಖೆ CIDಗೆ ಹಸ್ತಾಂತರ
11 ಜನರ ವಿರುದ್ಧ ದೂರು
ಮೃತ ವಾಸುದೇವ ಮಯ್ಯ ಪುತ್ರಿ ರಶ್ಮಿ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಹಾಲಿ ಸಿಇಒ ಸಂತೋಷ್ ಕುಮಾರ್, ರವಿ ಐತಾಳ, ರಾಕೇಶ್, ಶ್ರೀಪಾದ ಹೆಗಡೆ, ಪ್ರಶಾಂತ್, ರಘುನಾಥ್ ಸೇರಿದಂತೆ 11 ಜನರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ತಂದೆ ಸಾವಿಗೆ ಇವರೇ ಕಾರಣ ಎಂದು ಆರೋಪಿಸಿದ್ದಾರೆ.
ಪೊಲೀಸ್ ಆಯುಕ್ತರ ಶಿಫಾರಸು
ವಾಸುದೇವ ಮಯ್ಯ ಬರೆದ 6 ಪುಟಗಳ ಡೆತ್ ನೋಟ್, ಪುತ್ರಿ ರಶ್ಮಿ ನೀಡಿದ ದೂರು ಎಲ್ಲವನ್ನೂ ಪರಿಗಣಿಸಿದ ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರರಾವ್ ವಾಸುದೇವ ಮಯ್ಯ ಆತ್ಮಹತ್ಯೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ಶಿಫಾರಸು ಮಾಡಿದ್ದರು.
ಬಲವಂತದಿಂದ ಸಹಿ
ರಶ್ಮಿ ಅವರು ದೂರಿನಲ್ಲಿ ಬ್ಯಾಂಕ್ ಆಡಳಿತ ಮಂಡಳಿ ಅನುಮೋದನೆಯಂತೆ ಸಾಲ ನೀಡಲಾಗಿದೆ. ತಂದೆ ನಂಬಿ ಕೊಟ್ಟಿದ್ದ ಪಾಸ್ ವರ್ಡ್ಗಳನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ. ಬ್ಯಾಂಕ್ ಪರಿವೀಕ್ಷಣೆ ಸಮಯದಲ್ಲಿ ಆರ್ಬಿಐ ಅಧಿಕಾರಿಗಳು ತಂದೆ ಬಳಿಕ ಕೆಲವು ಪತ್ರಗಳಿಗೆ ಬಲವಂತದಿಂದ ಸಹಿ ಹಾಕಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ. ಈ ಕುರಿತು ಸಿಐಡಿ ತನಿಖೆ ನಡೆಯಲಿದೆ.
1400 ಕೋಟಿ ಅವ್ಯವಹಾರ
ಬಸವನಗುಡಿಯಲ್ಲಿ ಮುಖ್ಯ ಶಾಖೆ ಹೊಂದಿರುವ ಶ್ರೀ ಗುರು ರಾಘವೇಂದ್ರ ಬ್ಯಾಂಕ್ನಲ್ಲಿ 1400 ಕೋಟಿ ಅಕ್ರಮ ನಡೆದಿದೆ ಎಂಬುದು ಆರೋಪ. 69 ಹೆಸರುಗಳ ಮೂಲಕ 2876 ಖಾತೆಗಳಿಗೆ 1323 ಕೋಟಿ ಸಾಲವನ್ನು ವಿತರಣೆ ಮಾಡಿದ ಆರೋಪವಿದೆ. ಈ ಕುರಿತು ಸಿಐಡಿ ತನಿಖೆ ನಡೆಸುತ್ತಿದೆ. ಈ ಆರೋಪಕ್ಕೆ ಸಂಬಂಧಿಸಿದಂತೆ ವಾಸುದೇವ ಮಯ್ಯ ಮನೆ ಮೇಲೆ ಎಸಿಬಿ ದಾಳಿಯೂ ನಡೆದಿತ್ತು.