ಮಹಿಳಾ ಡಿವೈಎಸ್ಪಿ ಆತ್ಮಹತ್ಯೆಗೆ ಶರಣು
ಬೆಂಗಳೂರು, ಡಿಸೆಂಬರ್ 17: ಕುಡಿತದ ಚಟಕ್ಕೆ ಬಿದ್ದು ಕೌಟುಂಬಿಕ ಜೀವನ ಹಾಳು ಮಾಡಿಕೊಂಡಿದ್ದ ಮಹಿಳಾ ಡಿವೈಎಸ್ಪಿ ಸ್ನೇಹಿತೆಯ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ನಾಗರಭಾವಿಯಲ್ಲಿ ನಡೆದಿದೆ. ಬಿಬಿಎಂಪಿ ಉನ್ನತ ಅಧಿಕಾರಿಯ ಪುತ್ರಿಯಾಗಿರುವ ಲಕ್ಷ್ಮೀ 2014 ನೇ ಸಾಲಿನಲ್ಲಿ ಕೆಪಿಎಸ್ ಸಿ ಮೂಲಕ ಕರ್ನಾಟಕ ಪೊಲೀಸ್ ಸೇವೆಗೆ ಆಯ್ಕೆಯಾಗಿದ್ದರು. 2017 ನೇ ವರ್ಷದಲ್ಲಿ ಸೇವೆಗೆ ಸೇರಿದ್ದು ಸಿಐಡಿಯಲ್ಲಿ ಡಿವೈಎಸ್ಪಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ನಿನ್ನೆ ನಾಗರಭಾವಿ ವಿನಾಯಕ ಲೇಔಟ್ ನಲ್ಲಿರುವ ಸ್ನೇಹಿತೆ ಮನೆಗೆ ಹೋಗಿದ್ದ ಲಕ್ಷ್ಮೀ ಪಾರ್ಟಿ ಮಾಡಿ ಕಂಠಪೂರ್ತಿ ಕುಡಿದಿದ್ದಳು. ಬಳಿಕ ಪ್ರತ್ಯೇಕ ಕೋಣೆಯಲ್ಲಿ ಮಲಗಲು ಹೋಗಿದ್ದು, ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಬುಧವಾರ ರಾತ್ರಿ ಹತ್ತು ಗಂಟೆಗೆ ಪ್ರಕರಣ ಬೆಳಕಿಗೆ ಬಂದಿದೆ. ಮೂಲತಃ ಕೋಲಾರ ಜಿಲ್ಲೆ ಮಾಲೂರು ತಾಲೂಕಿನ ಮಾಸ್ತಿ ಯವರಾದ ಲಕ್ಷ್ಮೀ ತಂದೆ ಬಿಬಿಎಂಪಿಯ ಉನ್ನತ ಅಧಿಕಾರಿ ಎಂದು ಗೊತ್ತಾಗಿದೆ. ಮೃತ ದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದು, ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದೆ.
ಕುಡಿತದ ಖಿನ್ನತೆ: ಕೆಲಸಕ್ಕೆ ಸೇರುವ ಮೊದಲೇ2012 ರಲ್ಲೇ ನವೀನ್ ಎಂಬುವರನ್ನು ಪ್ರೀತಿಸಿ ಲಕ್ಷ್ಮೀ ಮದುವೆಯಾಗಿದ್ದರು. ಖಾಸಗಿ ಕಂಪನಿ ಉದ್ಯೋಗಿಯಾಗಿರುವ ನವೀನ್ ಹೈದರಾಬಾದ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಅಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದರು. ದಂಪತಿ ಕುಟುಂಬ ಕೋಣನಕುಂಟೆ ಕ್ರಾಸ್ ನಲ್ಲಿ ವಾಸವಿತ್ತು. ಕುಡಿತದ ಚಟಕ್ಕೆ ಬಿದ್ದಿದ್ದ ಲಕ್ಷ್ಮೀ ಇತ್ತೀಚೆಗೆ ಒಂದು ತಿಂಗಳ ರಜೆ ಮೇಲೆ ಹೋಗಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು.
ತರಬೇತಿಯಲ್ಲಿ ಕುಡಿತ: ಕುಡಿತದ ಚಟಕ್ಕೆ ಒಳಗಾಗಿದ್ದ ಲಕ್ಷ್ಮೀ ಮೂಸೂರಿನಲ್ಲಿ ತರಬೇತಿಯಲ್ಲಿದ್ದರು. ತರಬೇತಿ ಅವಧಿಯಲ್ಲಿಯೇ ಕುಸಿದು ಬಿದ್ದಿದ್ದರು. ಭಯ ಬಿದ್ದಿದ್ದ ಅಧಿಕಾರಿಗಳು ಆಸ್ಪತ್ರೆಗೆ ದಾಖಲಿಸಿದ್ದರು. ಲಕ್ಷ್ಮೀ ಆರೋಗ್ಯ ಪರಿಶೀಲಿಸಿದ್ದ ವೈದ್ಯರು ಕುಡಿತ ಹೆಚ್ಚಾಗಿ ಕುಸಿದು ಬಿದ್ದಿದ್ದಾರೆ ಎಂದು ಹೇಳಿದ್ದರು. ಈ ಘಟನೆ ಸಂಬಂಧ ಇಲಾಖಾ ವಿಚಾರಣೆ ನಡೆಯುತ್ತಿದ್ದು, ಇನ್ನೂ ಬಾಕಿ ಇತ್ತು. ಪ್ರತಿಷ್ಠಿತ ಕುಟುಂಬದ ಹಿನ್ನೆಲೆ ಹೊಂದಿರುವ ಲಕ್ಷ್ಮೀ ಇತ್ತೀಚೆಗೆ ರಾಜ್ಯ ಪೊಲೀಸ್ ಮಹಾ ನಿರ್ದೇಶಕರ ಕಚೇರಿಗೂ ಗುಂಡಿನ ಮತ್ತಿನಲ್ಲಿ ತೆರೆಳಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಸೂಕ್ತ ಜಾಗಕ್ಕೆ ಲಕ್ಷ್ಮೀ ಅವರನ್ನು ನಿಯೋಜಿಸಿರಲಿಲ್ಲ ಎಂದು ಅವರನ್ನು ಸಮೀಪದಿಂದ ಬಲ್ಲ ಅಧಿಕಾರಿಗಳು ತಿಳಿಸಿದ್ದಾರೆ.
ಕೌಟುಂಬಿಕ ಕಲಹ: ಇನ್ನು ಪ್ರೀತಿಸಿ ಮದುವೆಯಾಗಿದ್ದ ಲಕ್ಷ್ಮೀ ಅವರಿಗೆ ಎಂಟು ವರ್ಷವಾದರೂ ಮಕ್ಕಳು ಆಗಿರಲಿಲ್ಲ. ಲಕ್ಷ್ಮೀ ಕುಡಿತದ ನಡವವಳಿಕೆ ನೋಡಿ ಪತಿ ನವೀನ್ ಬೇಸತ್ತಿದ್ದರು. ಈ ವಿಚಾರವಾಗಿ ಎರಡು ವರ್ಷದ ಹಿಂದೆ ಇಬ್ಬರ ನಡುವೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಕುಡಿತದಿಂದ ಖಿನ್ನತೆಗೆ ಒಳಗಾಗಿದ್ದ ಲಕ್ಷ್ಮೀ ಅವರನ್ನ ಕೌನ್ಸಲಿಂಗ್ ಗೆ ಒಳಪಡಿಸಿದ್ದ ವೈದ್ಯರು, ಮುಂದೆ ಕುಡಿಯದಂತೆ ಸಲಹೆ ಮಾಡಿದ್ದರು. ಆದರೂ ಲಕ್ಷ್ಮೀ ಬಿಟ್ಟಿರಲಿಲ್ಲ. ಮಕ್ಕಳಾಗದ ಚಿಂತೆ, ಕುಡಿತದ ಖಿನ್ನತೆಯಿಂದ ಬಳಲುತ್ತಿದ್ದರು ಎಂದು ಪ್ರಾಥಮಿಕ ತನಿಖೆ ನಡೆಸಿದ ಪೊಲೀಸರು ತಿಳಿಸಿದ್ದಾರೆ.
ಗುತ್ತಿಗೆದಾರನಾಗಿರುವ ಮನೋಹರ್ ಮನೆಗೆ ಬಂದಿದ್ದ ಲಕ್ಷ್ಮೀ ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ಮಾಡಿದ್ದರು. ಬುಧವಾರ ಪಾರ್ಟಿ ನಂತರ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದರು. ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಸಂಬಂಧ ಮನೋಹರ್ ಮತ್ತು ಇತರರನ್ನು ಅನ್ನಪೂರ್ಣೇಶ್ವರಿ ನಗರ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆಯೂ ಖಿನ್ನತೆಗೆ ಒಳಗಾಗಿದ್ದ ಲಕ್ಷ್ಮೀ ಎರಡು ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ.