ಡಿವೈಎಸ್ಪಿ ಲಕ್ಷ್ಮೀ ಆತ್ಮಹತ್ಯೆ: ವಿಧಿ ವಿಜ್ಞಾನ ಪರೀಕ್ಷೆಗೆ ಒಳಪಡಿಸಲು ಸಿದ್ಧತೆ
ಬೆಂಗಳೂರು, ಡಿಸೆಂಬರ್ 17: ಸ್ನೇಹಿತನ ಮನೆಯಲ್ಲಿ ನೇಣಿಗೆ ಶರಣಾದ ಸಿಐಡಿ ಡಿವೈಎಸ್ಪಿ ವಿ. ಲಕ್ಷ್ಮೀ ಕೆಎಎಸ್ ಅಧಿಕಾರಿಯ ಪುತ್ರಿ ಎಂಬ ಸಂಗತಿ ಹೊರ ಬಿದ್ದಿದೆ. ಇದರ ನಡುವೆ ಮೃತದೇಹ ವಿಧಿ ವಿಜ್ಞಾನ ಪರೀಕ್ಷೆಗೆ ಒಳಪಡಿಸಲು ಅಧಿಕಾರಿಗಳು ಮುಂದಾಗಿದ್ದಾರೆ.
ವಿಕ್ಟೋರಿಯಾ ಆಸ್ಪತ್ರೆಯಲ್ಲಿರುವ ವಿ ಲಕ್ಷ್ಮೀ ಅವರ ಮೃತ ದೇಹ ವಿಧಿ ವಿಜ್ಞಾನ ಪ್ರಯೋಗಾಲದ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹೈದರಾಬಾದ್ ನಲ್ಲಿರುವ ಅವರ ಪತಿ ಆಗಮಿಸಿದ ಬಳಿಕವೇ ಮರಣೋತ್ತರ ಪರೀಕ್ಷೆಗೆ ಒಳಪಡಿಸಲು ಕುಟುಂಬ ತೀರ್ಮಾನಿಸಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಮಹಿಳಾ ಡಿವೈಎಸ್ಪಿ ಆತ್ಮಹತ್ಯೆಗೆ ಶರಣು
ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದ ಕೆಎಎಸ್ ಅಧಿಕಾರಿ ವೆಂಕಟೇಶಪ್ಪ ಮೂಲತಃ ಕೋಲಾರ ಜಿಲ್ಲೆಯ ಮಾಲೂರಿನ ಮಾಸ್ತಿಯವರು. ಮಗಳನ್ನು ಅಧಿಕಾರಿಯನ್ನಾಗಿ ಮಾಡಿಸಲು ಪಣ ತೊಟ್ಟು ಓದಿಸಿದ್ದರು. ಆದರೆ ಈ ರೀತಿಯ ದುರಂತ ನಡೆಯಬಾರದಿತ್ತು ಎಂದು ವೆಂಕಟೇಶ್ ಅವರ ಆಪ್ತರು ಕಳವಳ ವ್ಯಕ್ತಪಡಿಸಿದ್ದರು.
ಸಿಐಡಿ ಎಸ್ಪಿ ರಾಹುಲ್ ಶಹಪುರ್ವಾಡ್ ಅವರ ಅಧೀನದಲ್ಲಿ ಲಕ್ಷ್ಮೀ ಕಾರ್ಯ ನಿರ್ವಹಿಸುತ್ತಿದ್ದರು. ಆತ್ಮಹತ್ಯೆ ಕುರಿತು ಅನ್ನಪೂಣೇಶ್ವರಿನಗರ ಪೊಲೀಸ್ ಅಧಿಕಾರಿಗಳ ಬಳಿ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಲ್ಲದೇ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳ ಬಳಿ ಸಹ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ಲಕ್ಷ್ಮೀ ಸಹೋದ್ಯೋಗಿಗಳು ಕಾನೂನು ಮತ್ತು ಸುವ್ಯವಸ್ಥೆಯ ಡಿವೈಎಸ್ಪಿಗಳಾಗಿ ನಿಯೋಜನೆಗೊಂಡಿದ್ದರು. ಲಕ್ಷ್ಮೀ ಅವರು ತರಬೇತಿ ಅವಧಿಯಲ್ಲಿ ಮಾಡಿಕೊಂಡಿದ್ದ ಎಡವಟ್ಟಿನಿಂದ ಕಾನೂನು ಸುವ್ಯವಸ್ಥೆ ಹುದ್ದೆ ಗಿಟ್ಟಿಸಲಾಗಲಿಲ್ಲ. ಹೀಗಾಗಿ ಅವರು ಸಚಿವರನ್ನು ಭೇಟಿ ಮಾಡಿ ಪೋಸ್ಟಿಂಗ್ ಕುರಿತು ಮನವಿ ಮಾಡಿದ್ದರು ಎನ್ನಲಾಗಿದೆ. ಆದರೆ, ತರಬೇತಿ ಅವಧಿಯಲ್ಲಿ ಕುಸಿದು ಬಿದ್ದಿದ್ದ ಪ್ರಕರಣ ಸಂಬಂಧ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ಮದ್ಯ ಸೇವನೆಯಿಂದ ಕುಸಿದು ಬಿದ್ದಿರುವ ಸಂಗತಿ ಹೊರ ಬಂದಿತ್ತು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆಪ್ತೆ ಬಳಿ ಹಂಚಿಕೆ: ಲಕ್ಷ್ಮೀಗೆ ಆಪ್ತ ಸ್ನೇಹಿತೆ ಗಾನ ಪಿ. ಕುಮಾರ್. ತನ್ನ ವೈಯಕ್ತಿಕ ವಿಚಾರದಿಂದ ಎಲ್ಲಾ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಮಕ್ಕಳಿಲ್ಲದೇ ಖಿನ್ನತೆಗೆ ಒಳಗಾಗಿದ್ದ ಲಕ್ಷ್ಮೀಗೆ ಸಾಕಷ್ಟು ಸಲ ಗಾನ ಪಿ. ಕುಮಾರ್ ಬುದ್ದಿ ವಾದ ಹೇಳಿದ್ದರು ಎಂದು ಗೊತ್ತಾಗಿದೆ. ಮದ್ಯಪಾನದ ಚಟಕ್ಕೆ ಬಿದ್ದಿದ್ದ ಲಕ್ಷ್ಮೀ ಒಂದು ತಿಂಗಳ ಹಿಂದಷ್ಟೇ ಶಸ್ತ್ರ ಚಿಕಿತ್ಸೆಗೆ ಒಳಪಟ್ಟಿದ್ದರು. ವೈದ್ಯರು ಕೂಡ ಮದ್ಯಪಾನ ಮಾಡದಂತೆ ಸಲಹೆ ಮಾಡಿದ್ದರು. ಖಿನ್ನತೆಯಿಂದ ಬಳಲುತ್ತಿದ್ದ ಲಕ್ಷ್ಮೀ ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರ ಕೈಗೊಂಡಿದ್ದು ಮಾತ್ರ ನಿಗೂಢವಾಗಿದೆ.
Recommended Video
ಮನೋಹರ್ ವಿಚಾರಣೆ: ಲಕ್ಷ್ಮೀ ಆಪ್ತ ಸ್ನೇಹಿತ ಮನೋಹರ್ ಅವರನ್ನು ಮಹಜರು ನಡೆಸಿದ ಅನ್ನಪೂರ್ಣೇಶ್ವರಿ ನಗರ ಪೊಲೀಸರು, ವಿಧಿ ವಿಜ್ಞಾನ ಪ್ರಯೋಗಾಲದ ಅಧಿಕಾರಿಗಳ ಮುಂದೆ ಕರೆ ತಂದಿದ್ದಾರೆ. ಮನೋಹರ್ ಮುಖಕ್ಕೆ ಕಪ್ಪು ಪಟ್ಟಿ ಕಟ್ಟಿದ್ದು, ಹೊಯ್ಸಳ ವಾಹನದಲ್ಲಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆತಂದರು. ಸಿಐಡಿ ಎಸ್ಪಿ ರಾಹುಲ್ ಶಹಪುರ್ವಾಡ್ ಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಮನೋಹರ್ ಅವರ ಹೇಳಕೆ ಪಡೆದು ಕೊಂಡಿದ್ದಾರೆ. ಪಾರ್ಟಿ ಬಳಿಕ ಲಕ್ಷ್ಮೀ ಆತ್ಮಹತ್ಯೆ ಹೇಗೆ ಮಾಡಿಕೊಂಡರು. ಎಷ್ಟು ದಿನದಿಂದ ನಿಮ್ಮ ಮತ್ತು ಲಕ್ಷ್ಮೀ ಪರಿಚಯವಿತ್ತು ಎಂಬುದರ ಬಗ್ಗೆ ಮಹೋನರ್ ಗೆ ಪ್ರಶ್ನಿಸಿದ್ದಾರೆ.