ಚರ್ಚ್ ಸ್ಟ್ರೀಟ್ನಲ್ಲಿ ಶನಿವಾರ ಬಾನೆತ್ತರ ಹಾರಲಿದೆ ಗಾಳಿಪಟ
ಬೆಂಗಳೂರು, ಜ. 9: ನಗರದ ಚರ್ಚ್ ಸ್ಟ್ರೀಟ್ನಲ್ಲಿ ಬಾಂಬ್ ಸ್ಫೋಟಗೊಂಡು 10 ದಿನಗಳಷ್ಟೇ ಕಳೆದಿವೆ. ಸ್ಫೋಟ ಪ್ರಕರಣ ಜನರ ಮನದಲ್ಲಿನ್ನೂ ಹಸಿಯಾಗಿದೆ. ಪೊಲೀಸರು ಇನ್ನೂ ಪಾತಕಿಗಳಿಗಾಗಿ ಹುಡುಕುತ್ತಿದ್ದಾರೆ. ಆದರೆ, ಸ್ಥಳೀಯರು ಆಗಲೇ ಇದೇ ಜಾಗದಲ್ಲಿ ಗಾಳಿಪಟ ಹಾರಿಸಲು ಸಜ್ಜಾಗಿದ್ದಾರೆ!
ಚರ್ಚ್ ಸ್ಟ್ರೀಟ್ನಲ್ಲಿ ಸಂಭವಿಸಿದ ಬಾಂಬ್ ಸ್ಫೋಟದಿಂದ ಬೆಂಗಳೂರಿಗರು ಅಧೀರರಾಗಿಲ್ಲ, ಭಯೋತ್ಪಾದನೆಯ ಉದ್ದೇಶ ಈಡೇರಿಲ್ಲ ಎಂಬ ಸಂದೇಶ ರವಾನಿಸಲು ಸ್ಥಳೀಯರು ಒಗ್ಗೂಡಿದ್ದಾರೆ. ಇದೇ ಪ್ರದೇಶದಲ್ಲಿರುವ ಕೆಲವು ಕಟ್ಟಡಗಳ ಟೆರೇಸ್ಗಳ ಮೇಲೆ ಜ. 10ರಂದು ಶನಿವಾರ ಸಂಜೆ 4ರಿಂದ 6 ಗಂಟೆಯವರೆಗೆ ಜನರೆಲ್ಲ ಒಗ್ಗೂಡಿ ಗಾಳಿಪಟ ಹಾರಿಸಲಿದ್ದಾರೆ ಎಂದು ಕಾರ್ಯಕ್ರಮ ಆಯೋಜಿಸಿರುವ 'ಬೆಂಗಳೂರು ನೀಡ್ಸ್ ಯು (Bengaluru Needs You)' ಸಂಘಟನೆ ತಿಳಿಸಿದೆ.
ಚರ್ಚ್ ಸ್ಟ್ರೀಟ್ನಲ್ಲಿನ ನಿವಾಸಿಗಳು, ಅಂಗಡಿಕಾರರನ್ನು ಒಗ್ಗೂಡಿಸುವುದು, ಅವರಲ್ಲಿ ಆತ್ಮಸ್ಥೈರ್ಯ ಹೆಚ್ಚಿಸುವುದು, ಬಾಂಬ್ ಸ್ಫೋಟವನ್ನು ಒಗ್ಗಟ್ಟಿನಿಂದ ಖಂಡಿಸುವುದು ಈ ಕಾರ್ಯಕ್ರಮದ ಉದ್ದೇಶ ಎಂದು 'ಬೆಂಗಳೂರು ನೀಡ್ಸ್ ಯು' ಸಂಘಟನೆ ತಿಳಿಸಿದೆ. ದಿ ಎಂಟರ್ಟೇನ್ಮೆಂಟ್ ಸ್ಟೋರ್, ರೂಸ್ಟರ್ ಗಿಟಾರ್ಸ್ ಹಾಗೂ ಭೀಮಾಸ್ ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಕೈಗೂಡಿಸಿವೆ. [ಸ್ಫೋಟಕದೊಂದಿಗೆ ಮೂವರ ಬಂಧನ]
ಈ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಪಾಲ್ಗೊಳ್ಳಬಹುದು. ಕಾರ್ಯಕ್ರಮಕ್ಕೆ ಮುನ್ನವೇ ಹೆಸರು ನೋಂದಾಯಿಸಬೇಕಿಲ್ಲ. ಪಾಲ್ಗೊಂಡವರೆಲ್ಲ ಹಬ್ಬದ ಸಂಭ್ರಮ ಸವಿಯಬಹುದು. ಗಾಳಿಪಟ ಹಾರಿಸುತ್ತ ಮಕ್ಕಳಂತೆ ನಲಿಯಬಹುದು.
ಈ ಕುರಿತು 'ಒನ್ಇಂಡಿಯಾ ಕನ್ನಡ'ದ ಜೊತೆ ಮಾತನಾಡಿದ 'ಬೆಂಗಳೂರು ನೀಡ್ಸ್ ಯು' ಸ್ವಯಂ ಸೇವಕಿ ಶ್ರುತಿ, "ಆಗಮಿಸುವ ಎಲ್ಲರಿಗೂ ಉಚಿತವಾಗಿ ಗಾಳಿಪಟವನ್ನು ನಮ್ಮ ಸಂಘಟನೆಯಿಂದಲೇ ಪೂರೈಸಲಾಗುವುದು. ಹಲವು ಕಟ್ಟಡಗಳ ಟೆರೇಸ್ ಮೇಲೆ ಗಾಳಿಪಟ ಹಾರಿಸಲಾಗುವುದು. ಪ್ರತಿ ಸ್ಥಳದಲ್ಲಿಯೂ ಓರ್ವ ಸ್ವಯಂ ಸೇವಕ ಇದ್ದು ಮಾರ್ಗದರ್ಶನ ನೀಡಲಿದ್ದಾರೆ" ಎಂದು ತಿಳಿಸಿದರು.
"ಕಾರ್ಯಕ್ರಮಕ್ಕೆ ಈಗಾಗಲೇ ಬೆಂಗಳೂರು ಪೊಲೀಸ್ ಆಯುಕ್ತರು ಒಪ್ಪಿಗೆ ನೀಡಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರಿಗೆ ಸೂಕ್ತ ಬಂದೋಬಸ್ತ್ ಏರ್ಪಡಿಸುವುದಾಗಿ ತಿಳಿಸಿದ್ದಾರೆ. ಈಗಾಗಲೇ ಎಲ್ಲ ಸಿದ್ಧತೆಗಳು ಪೂರ್ಣಗೊಂಡಿವೆ" ಎಂದು ಶ್ರುತಿ ಹೇಳಿದ್ದಾರೆ.
ರಾಜ್ಯಸಭೆ ಸದಸ್ಯ ಪ್ರೊ. ರಾಜೀವ ಗೌಡ ಅವರು ಮುನ್ನಡೆಸುತ್ತಿರುವ 'ಬೆಂಗಳೂರು ನೀಡ್ಸ್ ಯು' ಒಂದು ಸಾಮಾಜಿಕ ಸಂಘಟನೆ. ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ.