ಭವಾನಿ ಬದುಕಿನ ಹಳಿ ತಪ್ಪಿಸಿದ ವಿಧಿಯ ಅಟ್ಟಹಾಸ!
ಬೆಂಗಳೂರು, ಡಿ. 29 : ವಿಧಿಯ ವಿಕಟ ಅಟ್ಟಹಾಸಕ್ಕೆ ಅಮಾಯಕ ಜೀವಿಯೊಂದು ಮುರುಟಿಹೋಗಿದೆ. ನಮ್ಮ ಕೈಮೀರಿದ ಘಟನೆಗಳು ಜೀವನವನ್ನೇ ಜಬಡಿಹಾಕುತ್ತವೆ. ಬಹುಶಃ 'ಹೀಗಾಗಿದ್ದರೆ' ಅವರು ಬದುಕುತ್ತಿದ್ದರೇನೋ ಎಂಬಂತಹ ಮಾತುಗಳಿಗೆ ಬೆಲೆಯೇ ಇಲ್ಲದಂತೆ ಬಾಂಬ್ ಸ್ಫೋಟದಲ್ಲಿ ಭವಾನಿಯವರು ಗಂಡ, ಮಕ್ಕಳು, ಅಪಾರ ಬಂಧುಗಳನ್ನು ಬಿಟ್ಟು ಅಗಲಿದ್ದಾರೆ.
"ಊಟ ಆಯ್ತಾ?" ಎಂಬ ಹೆಂಡತಿಯ ಕಟ್ಟಕಡೆಯ ಮಾತುಗಳನ್ನು ನೆನೆದು ಗಂಡ ಬಾಲನ್ ಅವರು ಉಮ್ಮಳಿಸುತ್ತಿದ್ದರೆ, ಹದಿನೈದು ವರ್ಷದ ಭರತ್ ನಾರಾಯಣ್ ಮತ್ತು ಹನ್ನೊಂದು ವರ್ಷದ ಮಗಳು ಲಕ್ಷ್ಮೀ ದೇವಿ ಪ್ರೀತಿಯ ಅಮ್ಮನನ್ನು ಕಳೆದುಕೊಂಡು ಬಿಕ್ಕಳಿಸುತ್ತಿದ್ದುದು ಎಂಥವರ ಹೃದಯವನ್ನೂ ಆರ್ದ್ರವಾಗಿಸಿಬಿಡುವಂಥದ್ದು, ಆ ದುಷ್ಕರ್ಮಿಗಳನ್ನು ಹೊರತುಪಡಿಸಿ!
ಕ್ರಿಸ್ಮಸ್ ರಜಾ ಕಳೆಯಲೆಂದು ಬೆಂಗಳೂರಿಗೆ ವಾರದ ಹಿಂದೆ ಮಕ್ಕಳ ಸಮೇತ ಬಂದಿದ್ದ ಭವಾನಿ (38) ಶನಿವಾರವೇ ಚೆನ್ನೈಗೆ ಮರಳಬೇಕಿತ್ತು. ಆದರೆ, ವಿಪರೀತ ಜನಸಂದಣಿಯಿಂದಾಗಿ ರೈಲ್ವೆ ಟಿಕೆಟ್ ಸಿಗದಿದ್ದರಿಂದ ಹೊರಡುವುದನ್ನು ಸೋಮವಾರಕ್ಕೆ ಮುಂದೂಡಿದ್ದರು. ಶನಿವಾರವೇ ಟಿಕೆಟ್ ಸಿಕ್ಕಿದ್ದರೆ ಅವರು ಬದುಕಿರುತ್ತಿದ್ದರೋ ಏನೋ? ವಿಧಿಯಾಟ ಅವರ ಬದುಕಿನ ಹಳಿಯನ್ನೇ ತಪ್ಪಿಸಿಬಿಟ್ಟಿದೆ.
ಗುರುವಾರ ಮೈಸೂರಿನಲ್ಲಿ ಮಕ್ಕಳನ್ನು ಸುತ್ತಾಡಿಸಿದ್ದ ಭವಾನಿ ಅವರು ಬಾಲನ್ ಅವರ ಅಣ್ಣನ ಮಹೇಂದ್ರನ್ ಅವರ ಮಗ ಕಾರ್ತಿಕ್ ಜೊತೆಗೂಡಿ ಚರ್ಚ್ ಸ್ಟ್ರೀಟಿಗೆ ಬಂದಿದ್ದರು. ಅಮೀಬಾದಲ್ಲಿ ಮಕ್ಕಳಿಗೆ ಬೌಲಿಂಗ್ ಆಟವಾಡಿಸಲೆಂದು ಕರೆದುಕೊಂಡು ಕೋಕೋನಟ್ ಗ್ರೋವ್ ಹೋಟೆಲಿನ ಬಳಿ ಹೋಗುತ್ತಿದ್ದಾಗ ಸಂಭವಿಸಿದ ಭೀಕರ ಸ್ಫೋಟಕ್ಕೆ ಅವರು ಬಲಿಯಾಗಿರುವುದು ನಿಜಕ್ಕೂ ವಿಪರ್ಯಾಸ. [ಮೆಹದಿ ಬಂಧನಕ್ಕೆ ಪ್ರತೀಕಾರವೆ?]
ತಲೆಗೆ ತೀವ್ರ ಪೆಟ್ಟಾಗಿದ್ದರಿಂದ ಪ್ರಜ್ಞೆತಪ್ಪಿ ಬಿದ್ದಿದ್ದ ಭವಾನಿ ಅವರನ್ನು ಆಟೋ ಚಾಲಕನೊಬ್ಬ ಮಲ್ಯ ಆಸ್ಪತ್ರೆಗೆ ಸಾಗಿಸಿ ಮಾನವೀಯತೆ ಮೆರೆದಿದ್ದಾರೆ. ಆದರೆ, ಅದೇ ಸಮಯದಲ್ಲಿ ಆಂಬ್ಯುಲೆನ್ಸ್ ದೊರೆತಿದ್ದರೆ ಬಹುಶಃ ಅವರು ಬದುಕಿ ಉಳಿಯುವ ಸಂಭವನೀಯತೆ ಇರುತ್ತಿತ್ತೇನೋ? ಆಟೋ ಆಸ್ಪತ್ರೆ ತಲುಪುವುದು ತಡವಾಗಿದ್ದರಿಂದ ಸಾಕಷ್ಟು ರಕ್ತಸ್ರಾವವಾಗಿ ಅವರು ಅಸುನೀಗಿದ್ದಾರೆ. [ಚರ್ಚ್ ಸ್ಟ್ರೀಟ್ ದಾಳಿ ರೂವಾರಿ ಯಾರು?]
ಚರ್ಚ್ ಸ್ಟ್ರೀಟ್ ಸ್ಫೋಟದಲ್ಲಿ ಅಸುನೀಗಿದ ಭವಾನಿ
ಚೆನ್ನೈನ ಅಣ್ಣಾ ಸಾಲೈನಲ್ಲಿ ವಾಸವಿದ್ದ ಭವಾನಿ ಕ್ರಿಸ್ಮಸ್ ರಜಾ ಕಳೆಯಲೆಂದು ಬೆಂಗಳೂರಿಗೆ ಬಂದಿದ್ದರು. ಚೆನ್ನೈಗೆ ಮರಳಲು ಸಾಧ್ಯವಾಗದೆ, ಬಾಂಬ್ ಸ್ಫೋಟದಲ್ಲಿ ದುರ್ಮರಣಕ್ಕೀಡಾದರು.
ಅಮ್ಮನ ಕಳೆದುಕೊಂಡ ಮಗಳಿಗೆ ಸಾಂತ್ವನ ಹೇಳುವರಾರು?
ಪ್ರೀತಿಯ ಅಮ್ಮನನ್ನು ಕಳೆದುಕೊಂಡ ಲಕ್ಷ್ಮೀ ದೇವಿಗೆ ತನ್ನ ಅಪ್ಪನನ್ನು ಕಂಡೊಡನೆ ದುಃಖದ ಕಟ್ಟೆಯೊಡೆಯಿತು.
ಅಮ್ಮನ ಅಗಲಿಕೆ ತಡೆಯಲಾರದೆ ಬಿಕ್ಕಳಿಸುತ್ತಿರುವ ಮಗ
ಈ ಸ್ಫೋಟ ಸಂಭವಿಸಿದಾಗ ಮಗ ಭರತ್ ನಾರಾಯಣ್ ಕೂಡ ಅವರೊಂದಿಗಿದ್ದ.
ಉಗ್ರರ ಹುಡುಕಿಕೊಟ್ಟವರಿಗೆ 10 ಲಕ್ಷ ರು. ಬಹುಮಾನ
ಚರ್ಚ್ ಸ್ಟ್ರೀಟ್ ಸ್ಫೋಟದ ಹಿಂದೆ ಸಿಮಿ ಅಥವಾ ಅಲ್ ಉಮಾಹ್ ಕೈವಾಡವಿದೆಯೆಂದು ಶಂಕಿಸಲಾಗಿದ್ದು, ಅವರ ಹುಡುಕಾಟದಲ್ಲಿ ಪೊಲೀಸರು ತೊಡಗಿದ್ದಾರೆ. ಈ ಉಗ್ರರ ಸುಳಿವು ನೀಡಿದವರಿಗೆ 10 ಲಕ್ಷ ರು. ಬಹುಮಾನ ನೀಡುವುದಾಗಿ ಸರಕಾರ ಘೋಷಿಸಿದೆ.
ಸೆಕ್ಯೂರಿಟಿ ಗಾರ್ಡ್ ಸಿಗರೇಟ್ ಸೇದಲು ಹೋಗಿದ್ದನಂತೆ
ಕೋಕೋನಟ್ ಗ್ರೋವ್ ಸಿಸಿಟಿವಿ ಕೈಕೊಟ್ಟಿದ್ದರಿಂದ ಈ ಘಟನೆಗೆ ಪ್ರಮುಖ ಸಾಕ್ಷಿಯಾಗಬೇಕಾಗಿದ್ದ ಸೆಕ್ಯೂರಿಟಿ ಗಾರ್ಡ್ ಆ ಸಮಯದಲ್ಲಿ ಅಲ್ಲಿ ಇಲ್ಲದಿದ್ದುದು ಪೊಲೀಸರಿಗೆ ಭಾರೀ ತೊಡಕಾಗಿ ಪರಿಣಮಿಸಿದೆ. ಆತ ಆ ಸಮಯದಲ್ಲಿ ಸಿಗರೇಟ್ ಸೇದಲು ಹೋಗಿದ್ದನಂತೆ.
ದೆಹಲಿಯಲ್ಲಿಯೂ ಕಟ್ಟೆಚ್ಚರದಿಂದಿರಲು ಸೂಚನೆ
ಬೆಂಗಳೂರು ಸ್ಫೋಟದ ಹಿನ್ನೆಲೆಯಲ್ಲಿ ದೆಹಲಿಯಲ್ಲಿ ಕೂಡ ಕಟ್ಟೆಚ್ಚರದಿಂದಿರಲು ಗುಪ್ತದಳ ಸೂಚಿಸಿದ್ದು, ಎಲ್ಲೆಡೆ ತಪಾಸಣೆ ನಡೆಸಲಾಗುತ್ತಿದೆ. ಮೈಕೊರೆಯುವ ಚಳಿಯಲ್ಲಿ ಬೆಂಗಳೂರಿನಲ್ಲಿ ನಡೆದ ಘಟನೆ ದೆಹಲಿಗರ ಮೈಬೆವರುವಂತೆ ಮಾಡಿದೆ. ವಾರಣಾಸಿಯಲ್ಲಿ ಕೂಡ ಎಲ್ಲೆಡೆ ತಪಾಸಣೆ ಮಾಡಲಾಗುತ್ತಿದೆ.
ಪುಣೆ, ಚೆನ್ನೈ ಸ್ಫೋಟದೊಂದಿಗೆ ಹೋಲಿಕೆ
ಪುಣೆ ಬೇಕರಿ ಸ್ಫೋಟ ಮತ್ತು ಚೆನ್ನೈ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದ ಸ್ಫೋಟದಂತೆಯೇ ಚರ್ಚ್ ಸ್ಟ್ರೀಟ್ ಸ್ಫೋಟ ಕೂಡ ಸಂಭವಿಸಿರುವುದರಿಂದ ಸಹಜವಾಗಿ ಕಣ್ಣು ಸಿಮಿ ಉಗ್ರರ ಮೇಲೆ ನೆಟ್ಟಿದೆ. ಶಕ್ತಿಯುತ ಬಾಂಬ್ ತಯಾರಿಸಲು ತಜ್ಞರ ಕೊರತೆಯಿಂದಾಗಿ ಕಡಿಮೆ ಶಕ್ತಿಯುಳ್ಳ ಬಾಂಬ್ ತಯಾರಿಸಿ ಸ್ಫೋಟಿಸುವುದನ್ನು ಸಿಮಿ ರೂಢಿಸಿಕೊಂಡಿದೆ.