ಚುಕುಬುಕು ಬೇಕು: ಉಪನಗರ ರೈಲ್ವೆ ಯೋಜನೆ ಅನುಷ್ಠಾನಕ್ಕಾಗಿ ಟ್ವಿಟ್ಟರ್ ಅಭಿಯಾನ
ಬೆಂಗಳೂರು, ಜನವರಿ 3: ಬೆಂಗಳೂರಿಗರ ದಶಕಗಳ ಕನಸಿನ ಯೋಜನೆ ಸಬ್ಅರ್ಬನ್ ರೈಲು ಯೋಜನೆಗೆ ರೈಲ್ವೆ ಮಂಡಳಿಯಿಂದ ಅನುಮತಿ ದೊರೆತರೂ ಸಂಚಿವ ಸಂಪುಟದಿಂದ ಸಮ್ಮತಿ ದೊರೆಯದ ಹಿನ್ನೆಲೆಯಲ್ಲಿ ಟ್ವಿಟ್ಟರ್ ಅಭಿಯಾನ ಆರಂಭವಾಗಿದೆ.
ಇದೀಗ ಪ್ರಧಾನಿ ನರೇಂದ್ರ ಮೋದಿ ರಾಜ್ಯ ಪ್ರವಾಸದಲ್ಲಿರುವ ಕಾರಣ, 'ಚುಕುಬುಕು ಬೇಕು', 'ಮೊದಲು ಟ್ರೖೆನ್ ಬೇಕು' ಎಂಬ ಅಡಿಬರಹದಲ್ಲಿ ಟ್ವಿಟರ್ ಅಭಿಯಾನ ನಡೆಸಲಾಗಿದೆ. ಅದರಂತೆ ಗುರುವಾರ ಮಧ್ಯಾಹ್ನ 2ರಿಂದ ಅಭಿಯಾನ ನಡೆಸಲಾಗಿದ್ದು, ಸಾವಿರಕ್ಕೂ ಹೆಚ್ಚಿನ ಜನರು ಟ್ವೀಟ್ ಮಾಡಿದ್ದಾರೆ.
ನಮ್ಮ ಮೆಟ್ರೋ ಮಾದರಿಯಲ್ಲಿ ಸಬ್ಅರ್ಬನ್ ರೈಲು ಯೋಜನೆ: ಹೇಗಿರಲಿದೆ?
ನೀತಿ ಆಯೋಗ, ರೈಲ್ವೆ ಸಚಿವಾಲಯ, ಹಣಕಾಸು ಸಚಿವಾಲಯ, ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯದ ಅಧಿಕಾರಿಗಳನ್ನೊಳಗೊಂಡ ರೈಲ್ವೆ ಮಂಡಳಿ 2019ರ ನ. 4ರಂದು ಉಪನಗರ ರೈಲು ಯೋಜನೆಗೆ ಅನುಮೋದನೆ ನೀಡಿತ್ತು. ಅದಾದ ಕೆಲವೇ ದಿನಗಳಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲೂ ಯೋಜನೆಗೆ ಅನುಮತಿ ನೀಡಲಾಗುತ್ತದೆ.
ಉಪನಗರ ರೈಲು ಯೋಜನೆಯಿಂದ ನಗರದೊಳಗೆ 148.17 ಕಿ.ಮೀ. ಉದ್ದದ ರೈಲು ಸಂಪರ್ಕ ಏರ್ಪಡಲಿದೆ. ಅದರಲ್ಲಿ 55.57 ಕಿ.ಮೀ. ಎತ್ತರಿಸಿದ (ಎಲಿವೇಟೆಡ್) ಮಾರ್ಗವಾಗಿದ್ದರೆ, 92.6 ಕಿ.ಮೀ. ಉದ್ದ ನೆಲಮಟ್ಟದ ಮಾರ್ಗವಾಗಿರಲಿದೆ.
ಯೋಜನೆಗಾಗಿ 16 ಸಾವಿರ ಕೋಟಿ ರೂ. ವೆಚ್ಚಮಾಡುತ್ತಿದೆ. ಪ್ರಮುಖವಾಗಿ ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ, ತುಮಕೂರು, ಕೋಲಾರ ಜಿಲ್ಲೆಗಳನ್ನು ರೈಲ್ವೆ ಮಾರ್ಗ ಸಂರ್ಪಸಲಿದೆ. ಜತೆಗೆ ದೊಡ್ಡಬಳ್ಳಾಪುರ, ನೆಲಮಂಗಲ, ದೇವನಹಳ್ಳಿ, ಹೊಸೂರು, ಬಂಗಾರಪೇಟೆಗಳಿಗೆ ರೈಲು ಸೇವೆ ಅಭಿವೃದ್ಧಿಗೊಳ್ಳಲಿದೆ.
ರಾಜಧಾನಿಯ ಸಂಚಾರದಟ್ಟಣೆ ನಿಯಂತ್ರಣ ಉದ್ದೇಶದಿಂದ ಉಪನಗರ ರೈಲು ಯೋಜನೆಗೆ ರೈಲ್ವೆ ಮಂಡಳಿ (ವಿಸõತ) ಅನುಮೋದನೆ ನೀಡಿ ಎರಡು ತಿಂಗಳಾದರೂ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿಲ್ಲ. ಹೀಗಾಗಿ ಯೋಜನೆಗೆ ಅನುಮತಿ ನೀಡುವಂತೆ ಆಗ್ರಹಿಸಿ ಸಾರ್ವಜನಿಕರು ಗುರುವಾರ 'ಚುಕುಬುಕು ಬೇಕು' ಹ್ಯಾಷ್ಟ್ಯಾಗ್ ಅಡಿ ಟ್ವಿಟರ್ ಅಭಿಯಾನ ಕೈಗೊಂಡಿದ್ದರು.