ಕಲಾಕಾರರ ಕಲಾಕೃತಿಗಳಿಗೆ ಪ್ರೋತ್ಸಾಹ ನೀಡುವ ವೇದಿಕೆ 'ಚಿತ್ತಾರ': ಡಾ ಬಿಎಲ್ ಶಂಕರ್
ಬೆಂಗಳೂರು ಫೆಬ್ರವರಿ 22, 2019: ಕಲಾಕಾರರ ಕಲಾಕೃತಿಗಳಗೆ ಪ್ರೋತ್ಸಾಹ ನೀಡಲು ಚಿತ್ತಾರ ಮೇಳವನ್ನು ಆಯೋಜಿಸಲಾಗಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷರಾದ ಡಾ ಬಿ ಎಲ್ ಶಂಕರ್ ಹೇಳಿದರು.
ಕರ್ನಾಟಕ ಚಿತ್ರಕಲಾ ಪರಿಷತ್ ತನ್ನ ಆವರಣದಲ್ಲಿ ಆಯೋಜಿಸಲಾಗಿರುವ 10 ದಿನದ ಕರಕುಶಲ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು. ಫೆಬ್ರವರಿ 22 ರಿಂದ ಮಾರ್ಚ್ 3 ರವರೆಗೆ ಕರ್ನಾಟಕ ಚಿತ್ರಕಲಾ ಪರಿಷತ್ನಲ್ಲಿ ಈ "ಚಿತ್ತಾರ ಮೇಳ" ಕರಕುಶಲ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ.
ಸಿಕೆಪಿಯಲ್ಲಿ ಕರಕುಶಲ ಪ್ರೇಮಿಗಳಿಗಾಗಿ ಚಿತ್ತ ಚಿತ್ತಾರದ ಮೇಳ
ಈ ಚಿತ್ತಾರ ಮೇಳ ಕರಕುಶಲ ಪ್ರದರ್ಶನ ಮತ್ತು ಮಾರಾಟ ಮೇಳದ ವಿಶೇಷವೆಂದರೆ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂಥ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ ಎಂದರು.
ದೇಶದ ಕಲಾವಿದರ ಕಲಾಕೃತಿಗಳಿಗೆ ಪ್ರೋತ್ಸಾಹ ನೀಡುವುದು ಚಿತ್ರಕಲಾ ಪರಿಷತ್ತಿನ ಉದ್ದೇಶವಾಗಿದೆ. ದೇಶದ ಎಲ್ಲಾ ಭಾಗಗಳ ಕಲಾವಿದರಿಗೆ, ಕರಕುಶಲಕಾರರಿಗೆ ಹಾಗೂ ಅವರ ಕಲಾಕೃತಿಗಳಿಗೆ ಸೂಕ್ತ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಬಹಳ ಸಹಕಾರಿ ಎಂದು ತಿಳಿಸಿದರು.
ಉದ್ಘಾಟನಾ ಕಾರ್ಯಕ್ರದಲ್ಲಿ ಕಿರುತೆರೆ ನಟಿ ಹಾಗೂ ರಂಗಕರ್ಮಿ ಸುನೇತ್ರಾ ಪಂಡಿತ್ ಹಾಗೂ ಖ್ಯಾತ ನಿರ್ದೇಶಕ ರವಿ ಆರ್ ಗರಣಿ, ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಪ್ಪಾಜಯ್ಯ ಸೇರಿದಂತೆ ಹಲವರು ಭಾಗವಹಿಸಿದ್ದರು.
ಫೆಬ್ರವರಿ 22 ರಿಂದ ಮಾರ್ಚ್ 3 ರವರೆಗೆ ಪ್ರತಿದಿನ ಬೆಳಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ಈ ಪ್ರದರ್ಶನ ಮತ್ತು ಮಾರಾಟ ಮೇಳ ಇರಲಿದೆ. ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿರುವ ಈ ಮೇಳದ ಪ್ರಮುಖ ಉದ್ದೇಶ ಕುಶಲಕರ್ಮಿಗಳನ್ನು ಉತ್ತೇಜಿಸಿ ಅವರಿಗೊಂದು ಮಾರುಕಟ್ಟೆ ಕಲ್ಪಿಸುವುದಾಗಿದೆ.