ಐದು ಸಾವಿರಕ್ಕೆ ಕೈಯೊಡ್ಡಿ ಸಿಕ್ಕಿಬಿದ್ದ ಚಿತ್ತಾಪುರದ ನಿಂಗಮ್ಮ
ಬೆಂಗಳೂರು, ಅಕ್ಟೋಬರ್ 14: ಕಲಬುರಗಿ ಜಿಲ್ಲೆಯ ಚಿತ್ತಾಪುರ ಪುರಸಭೆ ವ್ಯಾಪ್ತಿಯಲ್ಲಿ ಖಾತೆಗಾಗಿ ಅರ್ಜಿ ಸಲ್ಲಿಸಿದ್ದವರಿಂದ ಲಂಚ ಪಡೆಯುವಾಗ ಕಂದಾಯ ಅಧಿಕಾರಿ ನಿಂಗಮ್ಮ ಬಿರಾದಾರ್ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ. ಅರ್ಜಿದಾರರು ಎರಡು ನಿವೇಶನ ಖರೀದಿಸಿ, ಅದರ ಖಾತೆಗಾಗಿ ಅರ್ಜಿ ಹಾಕಿದ್ದರು.
ಅದಕ್ಕಾಗಿ ನಿಂಗಮ್ಮ ಅವರು ಐದು ಸಾವಿರ ರುಪಾಯಿ ನೀಡುವಂತೆ ಅರ್ಜಿದಾರರಿಗೆ ಒತ್ತಾಯಿಸಿದ್ದರು. ಈ ಬಗ್ಗೆ ಎಸಿಬಿಯಲ್ಲಿ ದೂರು ದಾಖಲಿಸಲಾಗಿತ್ತು. ಶುಕ್ರವಾರ ಹಣ ಪಡೆಯುತ್ತಿದ್ದಾಗ ಅಧಿಕಾರಿಗಳು ಬಲೆಗೆ ಕೆಡವಿದ್ದಾರೆ. ಇನ್ನು ನಂದಗುಡಿ ನಾಡಕಚೇರಿಯ ಉಪತಹಶೀಲ್ದಾರ್ ಕೆ.ಗೌತಮ್ ಲಂಚ ಪಡೆಯುವಾಗ ಎಸಿಬಿಗೆ ಸಿಕ್ಕಿಬಿದ್ದಿದ್ದಾರೆ.[2 ಲಕ್ಷ ಲಂಚ ಕೇಳಿ ಸಿಕ್ಕಿಬಿದ್ರು ತುಮಕೂರು ಕಾರ್ಪೊರೇಟರ್ ಕರುಣಾರಾಧ್ಯ]
ಹೊಸಕೋಟೆ ತಾಲೂಕು ನಂದಗುಡಿ ಹೋಬಳಿಯ ಶಿವನಪುರದವರೊಬ್ಬರು ಕೃಷಿ ಭೂಮಿ ಖರೀದಿಸಿ, ನೋಂದಣಿ ಮಾಡಿಸಿದ್ದರು. ಇದೇ ಗ್ರಾಮದವರೊಬ್ಬರು ಖರೀದಿದಾರರ ಹೆಸರಿಗೆ ಖಾತೆ ಮಾಡಕೂಡದು ಎಂದು ಆಕ್ಷೇಪಣೆ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆಯನ್ನು ನಡೆಸಿ, ವರದಿ ಸಲ್ಲಿಸುವಂತೆ ಹೊಸಕೋಟೆ ತಹಶೀಲ್ದಾರ್ ಅವರು ನಂದಗುಡಿ ನಾಡಕಚೇರಿ ಉಪ ತಹಶೀಲ್ದಾರ್ ಗೆ ಸೂಚಿಸಿದ್ದರು.[ಉಬರ್ ಚಾಲಕನಿಂದ ಲಂಚ, ನಾಲ್ವರು ಪೊಲೀಸರ ಅಮಾನತು!]
ದೂರು ಸಲ್ಲಿಸಿದವರ ಜೊತೆಗೆ ಮಾತನಾಡಿ, ರಾಜಿ ಮಾಡಿಸುತ್ತೇನೆ. ಈ ಪ್ರಕರಣವನ್ನು ಕೊನೆಗೊಳಿಸುತ್ತೇನೆ. ಅದಕ್ಕೆ ಮೂವತ್ತೈದು ಸಾವಿರ ಲಂಚ ಕೊಡಿ ಎಂದು ಉಪ ತಹಶೀಲ್ದಾರ್ ಲಂಚ ಕೇಳಿ, ಚೌಕಾಶಿ ನಂತರ ಇಪ್ಪತ್ತೈದು ಸಾವಿರಕ್ಕೆ ಒಪ್ಪಿಕೊಂಡಿದ್ದಾರೆ. ಈ ಬಗ್ಗೆ ಎಸಿಬಿ ಬಳಿ ದೂರು ದಾಖಲಾಗಿತ್ತು. ಅಕ್ಟೋಬರ್ 14ರಂದು ಲಂಚ ಪಡೆಯುವ ವೇಳೆಯಲ್ಲೇ ದಾಳಿ ನಡೆಸಿದಾಗ ಗೌತಮ್ ಸಿಕ್ಕಿಬಿದ್ದಿದ್ದಾರೆ.