ಸಿಕೆಪಿಯಲ್ಲಿ ಕರಕುಶಲ ಪ್ರೇಮಿಗಳಿಗಾಗಿ ಚಿತ್ತ ಚಿತ್ತಾರದ ಮೇಳ
ಬೆಂಗಳೂರು ಫೆಬ್ರವರಿ 20: ಚಿತ್ರಕಲಾ ಪರಿಷತ್ತು ಕರಕುಶಲ ವಸ್ತುಗಳ ಪ್ರೇಮಿಗಳಿಗಾಗಿ 'ಚಿತ್ತ ಚಿತ್ತಾರ ಮೇಳ' ಪ್ರದರ್ಶನವನ್ನು ಫೆ.22ರಿಂದ ಮಾರ್ಚ್ 3ರವರೆಗೆ ಆಯೋಜಿಸಿದೆ.
ಈ ಚಿತ್ತಾರದ ವಿಶೇಷವೆಂದರೆ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳು ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುತ್ತವೆ.
ಮನೆಯನ್ನು ಅಲಂಕಾರ ಮಾಡುವ ಉತ್ಪನ್ನಗಳು, ಹ್ಯಾಂಡ್ಲೂಂಗಳು, ಕರಕುಶಲ ವಸ್ತುಗಳು, ಬಟ್ಟೆ, ಮರದ ಆಟಿಕೆಗಳು, ಹೆಂಗಳೆಯರ ಆಕರ್ಷಣೆಗೆಂದು ಆಭರಣಗಳು, ಬೆಡ್ ಲೈನೆನ್, ಕಲಾಕೃತಿಗಳು, ಪೀಠೋಪಕರಣಗಳು, ಮ್ಯಾಟ್ಗಳು, ಪಿಂಗಾಣಿ ವಸ್ತುಗಳು ಸೇರಿದಂತೆ ನೂರಾರು ಬಗೆಯ ಉತ್ಪನ್ನಗಳು ಈ ಪ್ರದರ್ಶನದಲ್ಲಿರಲಿವೆ.
ಫೆಬ್ರವರಿ 22 ರಿಂದ ಮಾರ್ಚ್ 3 ರವರೆಗೆ ಪ್ರತಿದಿನ ಬೆಳಗ್ಗೆ 11 ರಿಂದ ಸಂಜೆ 7 ಗಂಟೆಯವರೆಗೆ ಈ ಪ್ರದರ್ಶನ ಮತ್ತು ಮಾರಾಟ ಮೇಳ ಇರಲಿದೆ. ಕರ್ನಾಟಕ ಚಿತ್ರಕಲಾ ಪರಿಷತ್ತು ಆಯೋಜಿಸಿರುವ ಈ ಮೇಳದ ಪ್ರಮುಖ ಉದ್ದೇಶ ಕುಶಲಕರ್ಮಿಗಳನ್ನು ಉತ್ತೇಜಿಸಿ ಅವರಿಗೊಂದು ಮಾರುಕಟ್ಟೆ ಕಲ್ಪಿಸುವುದಾಗಿದೆ.
ಚಿತ್ತಾರ
ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್
(ಶಿವಾನಂದ ವೃತ್ತದ ಬಳಿ)
ದಿನಾಂಕ: ಫೆಬ್ರವರಿ 22 ರಿಂದ ಮಾರ್ಚ್ 3 ರ ವರೆಗೆ
ಸಮಯ: ಬೆಳಿಗ್ಗೆ 11 ಗಂಟೆಯಿಂದ ಸಂಜೆ 7 ರ ವರೆಗೆ