ಚಿತ್ರದುರ್ಗದ ಮುರುಘಾ ಮಠ ನಕ್ಸಲರ ಅಡ್ಡೆಯಾಗಿದೆ- ಶಾಸಕ ಬಸನಗೌಡ ಯತ್ನಾಳ್ ಆರೋಪ
ಬೆಂಗಳೂರು ಸೆಪ್ಟೆಂಬರ್ 16: ಅತ್ಯಾಚಾರ ಪ್ರಕರಣದಲ್ಲಿ ಮುರುಘಾ ಮಠ ಶ್ರೀಗಳ ಬಂಧನದ ಬಳಿಕ ಮಠದ ಬಗ್ಗೆ ಹಲವಾರು ಹೇಳಿಕೆಗಳು ಹೊರಬರುತ್ತಿವೆ. ಈ ನಡುವೆ 'ಚಿತ್ರದುರ್ಗದ ಮುರುಘಾ ಮಠ ನಕ್ಸಲರ ಅಡ್ಡೆಯಾಗಿದೆ' ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆ ನೀಡಿದ್ದಾರೆ.
ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಹೊತ್ತಿರುವ ಚಿತ್ರದುರ್ಗದ ಪ್ರಸಿದ್ಧ ಮುರುಘಾ ಮಠದ ಶಿವಮೂರ್ತಿ ಮುರುಘಾ ಶರಣ ಸ್ವಾಮೀಜಿಯ ನ್ಯಾಯಾಂಗ ಬಂಧನ ವಿಸ್ತರಣೆಯಾಗಿದೆ. ಮುರುಘಾ ಸ್ವಾಮೀಜಿಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಆದೇಶ ಹೊರಡಿಸಿದೆ.
ಈ ಘಟನೆಯ ಬಗ್ಗೆ ಇಂದು ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಚಿತ್ರದುರ್ಗದ ಮುರುಘಾ ಮಠ ಪ್ರಗತಿಪರರು, ನಕ್ಸಲರ ಅಡ್ಡೆಯಾಗಿದೆ ಎಂದು ಹೇಳಿದ್ದಾರೆ. ಜೊತೆಗೆ ಚಿತ್ರದುರ್ಗದ ಮಠದಲ್ಲಿ ಮಕ್ಕಳ ಮೇಲಿನ ದೌರ್ಜನ್ಯ, ಮಠದ ಆಸ್ತಿ ಬಗ್ಗೆ ತನಿಖೆಯಾಗಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಿಗೆ ಪತ್ರ ಬರೆಯುತ್ತೇನೆ. ಚಿತ್ರದುರ್ಗ ಮುರುಘಾ ಮಠದ ಬಗ್ಗೆ ಸಾರ್ವಜನಿಕರಿಗೆ ಗೊತ್ತಾಗಲಿ ಎಂದಿದ್ದಾರೆ.
ಮಠದ ಆಡಳಿತಾಧಿಕಾರಿ ಶಿವಮೂರ್ತಿ ಮರುಘಾ ಶರಣರು ಮಠವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರನ್ನು ಗದ್ದುಗೆಯಿಂದ ಕೆಳಗಿಳಿಸಬೇಕು. ಈ ಬಗ್ಗೆ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ಹೇಳಿ ಕೇಳಿ ಮುರುಘಾ ಮಠ ಲಿಂಗಾಯತರ ಶ್ರೀಮಂತ ಮಠವಾಗಿದೆ. ಮಠದ ಆಸ್ತಿ ಹೇಗೆ ಉಳಿಸಬೇಕು? ಅಲ್ಲಿ ಈ ಹಿಂದೆ 10 ಸಾವಿರ ಎಕರೆ ಕಾಫಿ ಎಸ್ಟೇಟ್ ಇತ್ತು. ಈಗ ಅದು 500 ಎಕರೆಗೆ ಇಳಿದಿದೆ. ಅಲ್ಲಿರುವ ಆಡಳಿತಾಧಿಕಾರಿ ಸ್ಥಳವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಇದನ್ನು ಯಾರು ಕಬಳಿಸಿದ್ದಾರೆ ಎಂದು ಗೊತ್ತಾಗಬೇಕಿದೆ. ಬೇರೆ ಮಠದ ಮೇಲೆ ಇಂತಹ ಗಂಭೀರ ಆರೋಪ ಬಂದಿಲ್ಲ ಎಂದು ತಿಳಿಸಿದರು.
ಬಾಲಕಿಯರ ಮೇಲಿನ ಆರೋಪ ಬಂದಿದೆ. ಇದರ ಬಗ್ಗೆ ಸೂಕ್ತ ತನಿಖೆಗೆ ನಾವು ಹೈಕೋರ್ಟ್ ಮೇಲೆ ಒತ್ತಡ ತರುತ್ತೇವೆ. ಮಠದ ಸಂಪ್ರದಾಯಂತೆ ನಡೆದುಕೊಳ್ಳಬೇಕು. ಪಾಕ್ನ ಮಲಾಲಗೆ ಬಸವ ಪ್ರಶಸ್ತಿ ಕೊಟ್ಟಿದ್ದಾರೆ. ಲಿಂಗಾಯತ ಮಠ ಅಂದರೆ ಶಿಕ್ಷಣ ಕೊಡುವುದು. ಸಿದ್ದಗಂಗಾ ಮಠದಂತೆ ಇರಬೇಕು. ಇದರ ಬಗ್ಗೆ ಎಲ್ಲಾ ತನಿಖೆಯಾಗಬೇಕು ಎಂದು ಹೇಳಿದರು.