ಕಬ್ಬನ್ ಪಾರ್ಕ್ ಉಳಿವಿಗಾಗಿ ಚಿಪ್ಕೋ ಚಳುವಳಿ ಮಾದರಿ ಪ್ರತಿಭಟನೆಗೆ ಸಜ್ಜು
ಬೆಂಗಳೂರು, ನವೆಂಬರ್ 03: ಕಬ್ಬನ್ ಪಾರ್ಕ್ ಉಳಿವಿಗಾಗಿ ವಿವಿಧ ಸಂಘಟನೆಗಳು ಭಾನುವಾರಂದು ನಡೆಸಿದ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದೆ. Cubbon Park Walkers Association(CPWA) ಸಂಘಟನೆಯು ನಡೆಸುತ್ತಿರುವ ಕಬ್ಬನ್ ಪಾರ್ಕ್ ಉಳಿವಿಗಾಗಿ ಪ್ರತಿಭಟನೆ ನಡೆಸಿದೆ.
ಈ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷದ ರಾಜ್ಯ ಕಾರ್ಯದರ್ಶಿಗಳಾದ ಸಂಚಿತ್ ಸಹಾನೀ, ರಾಜ್ಯ ಜಂಟಿ ಕಾರ್ಯದರ್ಶಿಗಳಾದ ದರ್ಶನ್ ಜೈನ್, ಬೆಂಗಳೂರು ಘಟಕದ ಅಧ್ಯಕ್ಷರಾದ ಮೋಹನ್ ದಾಸರಿ ಮತ್ತು ಪಕ್ಷದ ಹಲವು ಮುಖಂಡರು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು. ಸರ್ಕಾರವು ತನ್ನ ನಿರ್ಧಾರವನ್ನು ಕೈಬಿಡುವವರೆಗೂ ಆಮ್ ಆದ್ಮಿ ಪಕ್ಷವು ಕಬ್ಬನ್ ಪಾರ್ಕ್ ಉಳಿವಿಗಾಗಿ ಹೋರಾಟದಲ್ಲಿ ಮುನ್ನಡೆಯಲಿದೆ ಎಂದರು.
ಕಬ್ಬನ್ ಪಾರ್ಕ್ ಉಳಿವಿಗಾಗಿ ಹೋರಾಟಕ್ಕೆ ಆಮ್ ಆದ್ಮಿ ಪಕ್ಷದ ಸಂಪೂರ್ಣ ಬೆಂಬಲ
1970ರಲ್ಲಿ ಉತ್ತರಾಖಂಡ ರಾಜ್ಯದಲ್ಲಿ ಪರಿಸರ ಸಂರರಕ್ಷಣೆಗಾಗಿ ನಡೆದ 'ಚಿಪ್ಕೋ ಚಳುವಳಿ' ಎಲ್ಲರಿಗೂ ನೆನಪಿರಬಹುದು, ಬೆಂಗಳೂರಿನಲ್ಲೂ ಅಂತಹದ್ದೇ ಹೋರಾಟಕ್ಕೆ ಸಜ್ಜಾಗುವಂತಹ ಅನಿವಾರ್ಯತೆಯನ್ನು ರಾಜ್ಯ ಸರ್ಕಾರ ಸೃಷ್ಟಿಸಿದೆ. ಬೆಂಗಳೂರಿನ ಶ್ವಾಸಕೋಶವಾದ ಪಾರಂಪರಿಕ ತಾಣ ಕಬ್ಬನ್ ಪಾರ್ಕನ್ನು ಕಾಂಕ್ರೀಟ್ ಕಾಡಾಗಿ ಪರಿವರ್ತಿಸಲು ಹೊರಟಿರುವ ಸರ್ಕಾರ ಬೆಂಗಳೂರಿನ ಪರಿಸರಕ್ಕೆ ಕೊಡಲಿ ಹಾಕಲು ಮುಂದಾಗಿದೆ.
ಪಾರಂಪರಿಕ ಸ್ಥಳಗಳಲ್ಲಿ ಒಂದಾಗಿರುವ ಕಬ್ಬನ್ ಪಾರ್ಕ್ನ ಸುತ್ತಮುತ್ತ ಯಾವುದೇ ಹೊಸ ಕಟ್ಟಡಗಳನ್ನು ಕಟ್ಟುವಂತಿಲ್ಲವೆಂದು ನಿಯಮಗಳಿವೆ. ಆದರೆ ಆ ನಿಯಮಗಳನ್ನೇ ಗಾಳಿಗೆ ತೂರಿ 'ಹಳೆಯ ವಕೀಲರ ಪರಿಷತ್ ಕಟ್ಟಡವನ್ನು' ಕೆಡವಿ, ಬಹು ಅಂತಸ್ತಿನ ಹೊಸ ಶಾಸಕರ ಭವನ ಕಟ್ಟಲು ಅನುಮತಿ ನೀಡಲಾಗಿದೆ.
ದೆಹಲಿಯಲ್ಲಿ ಎಎಪಿ ಸರ್ಕಾರವು ಕಳೆದ 5 ವರ್ಷಗಳಲ್ಲಿ ಪರಿಸರ ರಕ್ಷಣೆ ಮತ್ತು ಗಿಡ-ಮರಗಳನ್ನು ಬೆಳೆಸುವುದಕ್ಕೆ ಹೆಚ್ಚಿನ ಆದ್ಯತೆ ನೀಡಿ 19% ಹಸಿರು ಹೊದಿಕೆ(ಗ್ರೀನ್ ಕವರ್)ಯನ್ನು ಹೆಚ್ಚಿಸಿದೆ. ಅಲ್ಲದೆ ಮುಂಬೈನ ಆರೇ ಕಾಲೊನಿಯಲ್ಲಿರುವ ಅರಣ್ಯ ಪ್ರದೇಶದಲ್ಲಿ ಮೆಟ್ರೋ ಡಿಪೋ ನಿರ್ಮಾಣಕ್ಕಾಗಿ 2141 ಮರಗಳನ್ನು ಕಡಿಯಲು ಮುಂದಾಗಿದ್ದ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಅಲ್ಲಿನ ಸ್ಥಳೀಯ ನಾಗರಿಕರ ಜೊತೆಗೂಡಿ ಹೋರಾಟ ನಡೆಸಿ, ಅರಣ್ಯ ಪ್ರದೇಶವನ್ನು ಉಳಿಸಿಕೊಳ್ಳಲು ಆಮ್ ಆದ್ಮಿ ಪಕ್ಷವು ಮುಂಚೂಣಿ ಪಾತ್ರವಹಿಸಿದೆ.
ಪರಿಸರ ಸಂರಕ್ಷಣೆಯ ವಿಷಯದಲ್ಲಿ ರಾಜಿಯಿಲ್ಲದೆ ನೆಲ-ಜಲ ಸಂರಕ್ಷಣೆಗೆ ಆಮ್ ಆದ್ಮಿ ಪಕ್ಷವು ಕಟಿಬದ್ದವಾಗಿದೆ. ದೇಶದ ಯಾವುದೇ ಮೂಲೆಯಲ್ಲೂ ಅನವಶ್ಯಕವಾಗಿ ಪರಿಸರವನ್ನು ನಾಶ ಮಾಡುವುದರ ವಿರುದ್ಧ ಪರಿಸರ ರಕ್ಷಣೆಯ ಹೋರಾಟ ನಡೆಸಲು ಪಕ್ಷವು ಸಿದ್ಧವಾಗಿದೆ.