ನಮ್ಮ ತಾಯಿ ಸಾವಿಗೆ ಬಿಬಿಎಂಪಿ ಕಾರಣ ಎಂದು ಕಣ್ಣೀರು ಹಾಕುತ್ತಿರುವ ಹೆಣ್ಣು ಮಕ್ಕಳು
ಬೆಂಗಳೂರು, ಮೇ. 18: ನಮ್ಮ ತಾಯಿ ಸಾವಿಗೆ ಬಿಬಿಎಂಪಿ ನಿರ್ಲಕ್ಷ್ಯವೇ ಕಾರಣ. ನಮ್ಮ ತಾಯಿಯ ಜೀವವನ್ನೇ ಕಸಿದುಕೊಂಡು ನಮ್ಮನ್ನು ಅನಾಥರನ್ನಾಗಿ ಮಾಡಿದ್ದಾರೆ. ಬಿಬಿಎಂಪಿಗೆ ನೂರು ಸಲ ಕರೆ ಮಾಡಿದ್ರೂ ಯಾರೂ ರೆಸ್ಪಾಂಡ್ ಮಾಡಲಿಲ್ಲ. ಬೆಡ್ ಸಿಕ್ಕಿದ್ದರೆ ನಮ್ಮ ಅಮ್ಮ ಬದುಕುತ್ತಿದ್ದರು!
Recommended Video
ಕೊರೊನಾ ಸೋಂಕಿಗೆ ತಾಯಿಯನ್ನು ಕಳೆದುಕೊಂಡಿರುವ ಅನಾಥ ಹೆಣ್ಣುಮಕ್ಕಳ ಕಣ್ಣೀರಿನ ಕಥೆಯಿದು. ಕೊರೊನಾ ಸೋಂಕಿತರಿಗೆ ಬೆಡ್ ಸೌಲಭ್ಯ ಕಲ್ಪಿಸಲು ಟೆಂಡರ್ ಗುತ್ತಿಗೆ ಮಾದರಿಯ ನಿರ್ಬಂಧಗಳನ್ನು ವಿಧಿಸಿದ ಪರಿಣಾಮ ಇಂಥ ಎಷ್ಟೋ ಮುಗ್ಧ ಜೀವಗಳು ಪ್ರಾಣ ಕಳೆದುಕೊಂಡಿವೆ. ಬಿಯು ನಂಬರ್, ಎಸ್ಆರ್ಎಫ್ ನಂಬರ್ ಇದ್ದರೆ ಮಾತ್ರ ಹಾಸಿಗೆ ಕೊಡ್ತೀವಿ ಎನ್ನುವ ಕುರುಡು ಕಾನೂನುಗಳು ಅದೆಷ್ಟು ಜೀವಗಳನ್ನು ಬಲಿ ಪಡೆದಿದೆಯೋ ಲೆಕ್ಕ ಹಾಕಲು ಅಸಾಧ್ಯ. ಈಗಲೂ ಬಿಬಿಎಂಪಿ ಎಚ್ಚೆತ್ತುಕೊಂಡಿಲ್ಲ. ಬಿಬಿಎಂಪಿ ನಿರ್ಲಕ್ಷ್ಯದಿಂದ ತನ್ನ ತಾಯಿಯನ್ನು ಕಳೆದುಕೊಂಡ ಕಣ್ಣೀರಿನ ಕಥೆಯನ್ನು ಮುಗ್ಧ ಕಂದಮ್ಮಗಳು ಹಂಚಿಕೊಂಡಿದ್ದು ಹೀಗೆ.
ಮೊದಲೇ ತಂದೆಯನ್ನು ಕಳೆದುಕೊಂಡಿದ್ದ ಮಕ್ಕಳಿಬ್ಬರು ತಾಯಿಯ ಆಸರೆಯಲ್ಲಿ ಬದುಕುತ್ತಿದ್ದರು. ಕೆಲವು ದಿನಗಳ ಹಿಂದಷ್ಟೇ ಅನಾರೋಗ್ಯಕ್ಕೆ ತುತ್ತಾಗಿ ತಂದೆ ಸಾವನ್ನಪ್ಪಿದ್ದರು. ತಾಯಿ ತನ್ನ ಇಬ್ಬರು ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು. ತಾಯಿ ನಂದಿತಾ ಗೆ ಮೇ. 6 ರಂದು ಕೊರೊನಾ ಸೋಂಕು ಕಾಣಿಸಿಕೊಂಡಿದೆ. ರಾಮಮೂರ್ತಿನಗರದಲ್ಲಿ ವಾಸವಾಗಿದ್ದ ನಂದಿತಾ ಬೆಡ್ಗಾಗಿ ಬಿಬಿಎಂಪಿಗೆ ನೂರು ಸಲ ಕರೆ ಮಾಡಿದ್ದಾರೆ. ಆದರೆ ಎಲ್ಲೂ ಸ್ಪಂದನೆ ಸಿಕ್ಕಿಲ್ಲ. ಖಾಸಗಿಯಾಗಿ ಅನೇಕ ಆಸ್ಪತ್ರೆಗಳಿಗೆ ದಾಖಲಾದರೂ ಬೆಡ್ ಸಿಕ್ಕಿಲ್ಲ. ಕೊನೆಗೂ ಸಕ್ರಾ ಆಸ್ಪತ್ರೆಯಲ್ಲಿ ಬೆಡ್ ಸಿಕ್ಕಿದೆ. ಆದರೆ, ಅಷ್ಟೊತ್ತಿಗೆ ಪರಿಸ್ಥಿತಿ ಕೈ ಮೀರಿತ್ತು. ಮೇ. 10 ರಂದು ನಂದಿತಾ ಸಾವನ್ನಪ್ಪಿದ್ದಾರೆ. ನಂದಿತಾ ಇಬ್ಬರು ಹೆಣ್ಣು ಮಕ್ಕಳು ಇದೀಗ ಅನಾಥರಾಗಿದ್ದಾರೆ.
ನಮಗೆ ಇದ್ದಿದ್ದು ತಾಯಿ ಮಾತ್ರ. ಉಳಿಸಿಕೊಳ್ಳಬೇಕು ಎಂದು ಬಿಬಿಎಂಪಿಗೆ ಕಾಲ್ ಮಾಡಿದ್ರೆ ಸ್ಪಂದನೆ ಸಿಗಲಿಲ್ಲ. ಉಸಿರಾಟದ ಸಮಸ್ಯೆ ಜಾಸ್ತಿಯಾಗಿ ಅಮ್ಮ ತೀರಿಕೊಂಡರು. ಉಸಿರಾಟದ ತೊಂದರೆಯಾದಾಗ ಬಿಬಿಎಂಪಿಗೆ ಅನೇಕ ಸಲ ಕರೆ ಮಾಡಿದ್ವಿ. ಯಾರ ಸ್ಪಂದನೆ ಸಿಗಲಿಲ್ಲ. ರೆಮ್ಡಿಸಿವಿಆರ್ ಇಂಜೆಕ್ಷನ್ ಕೂಡ ನಾವೇ ತಂದು ಕೊಟ್ಟಿದ್ದೆವು. ಆದರೆ, ಅದನ್ನು ಕೊಟ್ಟರೋ ಇಲ್ಲವೋ ಗೊತ್ತಿಲ್ಲ. ಅಮ್ಮನ ಆರೋಗ್ಯದಲ್ಲಿ ಚೇತರಿಕೆ ಕಾಣಲಿಲ್ಲ. ರೆಮ್ಡೆಸಿವಿರ್ ಕೊಟ್ಟರೋ ಇಲ್ಲವೋ ಎಂಬ ಅನುಮಾನ ಕಾಡುತ್ತಿದೆ. ಅದೇ ನಮ್ಮ ತಾಯಿ ಸಾವನ್ನಪ್ಪಿರುವ ವಿಷಯ ತಿಳಿಸಿದ ಐದು ನಿಮಿಷಕ್ಕೆ ಮಣ್ಣು ಮಾಡಲಿಕ್ಕೆ ಇದೇ ಬಿಬಿಎಂಪಿಯವರು ಆಂಬ್ಯುಲೆನ್ಸ್ ಕಳಿಸುತ್ತಾರೆ. ನಮ್ಮ ತಾಯಿ ಸಾವಿಗೆ ಬಿಬಿಎಂಪಿಯೇ ಹೊಣೆ ಎಂದು ಕಣ್ಣೀರು ಹಾಕಿದ್ದಾರೆ.