ಜನ ನಾಯಕನಾಗಲು ಹೋಗಿ ಜೈಲು ಸೇರಿದ ಪೊಲೀಸ್ ಇನ್ಸ್ಪೆಕ್ಟರ್ ಎಸ್. ಆರ್. ರಾಘವೇಂದ್ರ!
ಬೆಂಗಳೂರು, ಸೆ. 18: ಪಾವಗಡದ ಜನರಿಗಾಗಿ ಟ್ರಸ್ಟ್ ಸ್ಥಾಪಿಸಿ ಸೇವೆ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ದೊಡ್ಡ ಹೆಸರು ಮಾಡಿದ್ದ ಚಿಕ್ಕಜಾಲ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಆರ್. ರಾಘವೇಂದ್ರ ಜಮೀನು ವಿವಾದ ಪ್ರಕರಣದಲ್ಲಿ ಹತ್ತು ಲಕ್ಷ ರೂ. ಲಂಚ ಸ್ವೀಕರಿಸಿ ಎಸಿಬಿ ಬಲೆಗೆ ಬಿದ್ದಿದ್ದಾರೆ. ವಿಚಿತ್ರವೆಂದರೆ ಒಂದೇ ಭೂ ವಿವಾದ ಪ್ರಕರಣದಲ್ಲಿ ಇಬ್ಬರು ಇನ್ಸ್ಪೆಕ್ಟರ್ ಗಳು ಲಂಚ ಸ್ವೀಕರಿಸಿ ಭವಿಷ್ಯದ ಮೇಲೆ ಕಲ್ಲು ಹಾಕಿಕೊಂಡಿದ್ದಾರೆ !
ಜಮೀನು ವಿಚಾರವಾಗಿ ಎಫ್ಐಆರ್ ದಾಖಲಿಸಿ ತಪ್ಪಿಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲು ಖಾಸಗಿ ವ್ಯಕ್ತಿ ಮೂಲಕ 2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಚಿಕ್ಕಜಾಲ ಪೊಲೀಸ್ ಇನ್ಸ್ಪೆಕ್ಟರ್ ಎಸ್. ಆರ್. ರಾಘವೇಂದ್ರ ಅವರನ್ನು ಬೆಂಗಳೂರು ನಗರ ಘಟಕದ ಎಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಲಕ್ಷ ರೂ. ಲಂಚದ ಹಣ ವಶಪಡಿಸಿಕೊಂಡಿದ್ದಾರೆ. ಕಳೆದ ಒಂದು ತಿಂಗಳಿನಿಂದ ಈಚೆಗೆ ಎಂಟು ಲಕ್ಷ ರೂ. ಹಣವನ್ನು ರಾಘವೇಂದ್ರ ಪಡೆದುಕೊಂಡಿರುವುದಕ್ಕೆ ವಿಡಿಯೋ ಹಾಗೂ ಅಡಿಯೋ ಸಾಕ್ಷಾಧಾರಗಳು ಲಭ್ಯವಾಗಿವೆ. ಬೆಂಗಳೂರು ನಗರ ಘಟಕದ ಎಸ್ಪಿ ಯತೀಶ್ ಚಂದ್ರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿದೆ.
ಶೆಟ್ಟಿಹಳ್ಳಿ ಸರ್ವೆ ನಂಬರ್ 29 ರಲ್ಲಿ ಐದು ಎಕರೆ ಜಮೀನು ಇದ್ದು, ಈ ಜಮೀನು ಒಡೆತನ ವಿಚಾರವಾಗಿ ದೂರುದಾರ ಶಿವಶಂಕರ್ ಮತ್ತು ದಿನೇಶ್ ಎಂಬುವರ ನಡುವೆ ವಿವಾದ ಉಂಟಾಗಿತ್ತು. ತನಗೆ ಸೇರಿದ್ದು ಎಂದು ಶಿವಶಂಕರ್ ಜಮೀನಿಗೆ ಕಾಂಪೌಂಡ್ ಹಾಕಿ ಸೆಕ್ಯುರಿಟಿ ಗಾರ್ಡ್ ಇಟ್ಟಿದ್ದರು. ಈ ಸ್ವತ್ತು ತನಗೆ ಸೇರಿದ್ದು ಎಂದು ಬೋರ್ಡ್ ಸಹ ಹಾಕಿದ್ದರು. ಕೆಲ ದಿನಗಳ ಹಿಂದೆ ಅಪರಿಚಿತರು ಶಿವಶಂಕರ್ ಗೆ ಸೇರಿದೆ ಎನ್ನಲಾದ ಜಾಗಕ್ಕೆ ತೆರಳಿ ಬೋರ್ಡ್ ನ್ನು ಕಿತ್ತುಕೊಂಡು ಹೋಗಿದ್ದರು. ಬೋರ್ಡ್ ಕಿತ್ತುಕೊಂಡು ಹೋಗಿರುವ ಬಗ್ಗೆ ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಾಗಿತ್ತು.
ಅಕ್ರಮವಾಗಿ ಜಮೀನಿಗೆ ಅತಿಕ್ರಮ ಪ್ರವೇಶ ಮಾಡಿ ಬೋರ್ಡ್ ಕಿತ್ತು ಹಾಕಿದವರ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮ ಜರುಗಿಸಲು ದೂರು ನೀಡಿದ ಶಿವಶಂಕರ್ ಗೆ ಹತ್ತು ಲಕ್ಷ ರೂ. ಹಣ ನೀಡುವಂತೆ ಚಿಕ್ಕಜಾಲ ಠಾಣೆ ಇನ್ಸ್ಪೆಕ್ಟರ್ ಎಸ್.ಆರ್. ರಾಘವೇಂದ್ರ ಬೇಡಿಕೆ ಇಟ್ಟಿದ್ದಾರೆ. ಮೊದಲ ಕಂತಿನಲ್ಲಿ ನಾಲ್ಕು ಲಕ್ಷ ರೂ. ಪಡೆದಿದ್ದಾರೆ.
ಆನಂತರ ಎರಡನೇ ಕಂತಿನಲ್ಲಿ ನಾಲ್ಕು ಲಕ್ಷ ರೂ. ಪಡೆದಿದ್ದಾರೆ. ಮೂರನೇ ಕಂತಿನಲ್ಲಿ ರಾಘವೇಂದ್ರ ಹೆಸರಿನ ಖಾಸಗಿ ವ್ಯಕ್ತಿ ಮೂಲಕ ದೂರುದಾರ ಶಿವಶಂಕರ್ ನಿಂದ ಎರಡು ಲಕ್ಷ ರೂ. ಲಂಚ ಸ್ವೀಕರಿಸುವ ವೇಳೆ ಎಸಿಬಿ ಬೆಂಗಳೂರು ನಗರ ಘಟಕದ ಡಿವೈಎಸ್ವಿ ರವಿಶಂಕರ್ ಕೆ. ಮತ್ತು ತಂಡ ದಾಳಿ ನಡೆಸಿದೆ. ಲಂಚದ ಹಣದ ಸಮೇತ ಇನ್ಸ್ಪೆಕ್ಟರ್ ರಾಘವೇಂದ್ರ ಮತ್ತು ಖಾಸಗಿ ಏಜೆಂಟ್ ರಾಘವೇಂದ್ರ ಇಬ್ಬರೂ ಸಿಕ್ಕಿಬಿದ್ದಿದ್ದಾರೆ. ಆರೋಪಿತರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಬೆಂಗಳೂರು ನಗರ ಘಟಕದ ಎಸಿಬಿ ಪೊಲೀಸರು ಮುಂದಾಗಿದ್ದಾರೆ.
ಇದೇ ಜಮೀನು ವಿವಾದದಲ್ಲಿ ಟ್ರ್ಯಾಪ್ ಆಗಿದ್ದ ಇನ್ಸ್ಪೆಕ್ಟರ್ : ಕಳೆದ ಡಿಸೆಂಬರ್ ನಲ್ಲಿ ಇದೇ ಜಮೀನು ವಿಚಾರವಾಗಿ ದಿನೇಶ್ ಮತ್ತು ಶಿವಶಂಕರ್ ನಡುವೆ ವಿವಾದ ಉಂಟಾಗಿತ್ತು. ಚಿಕ್ಕಜಾಲ ಇನ್ಸ್ಪೆಕ್ಟರ್ ಅಗಿದ್ದ ಯಶವಂತ್ ಅವರು ಲಂಚ ಸ್ವೀಕರಿಸಿ ಬೆಂಗಳೂರು ನಗರ ಘಟಕದ ಎಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಯಶವಂತ್ ಎಸಿಬಿ ಬಲೆಗೆ ಬಿದ್ದು ತೆರವಾದ ಜಾಗಕ್ಕೆ ಎಸ್. ಅರ್. ರಾಘವೇಂದ್ರ ಬಂದಿದ್ದರು. ಕಾಕತಳೀಯ ಎಂಬಂತೆ ರಾಘವೇಂದ್ರ ಕೂಡ ಅದೇ ಪ್ರಕರಣದಲ್ಲಿ ಲಂಚ ಸ್ವೀಕರಿಸಿ ಎಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಮನೆ ಮೇಲೆ ದಾಳಿ ಸಾಧ್ಯತೆ:
ಹತ್ತು ಲಕ್ಷ ರೂ. ಲಂಚ ಸ್ವೀಕರಿಸಿರುವುದಕ್ಕೆ ಸಾಕ್ಷಾಧಾರಗಳು ಸಿಕ್ಕಿರುವ ಕಾರಣದಿಂದ ಪೊಲೀಸ್ ಇನ್ಸ್ಪೆಕ್ಟರ್ ಎಸ್.ಅರ್. ರಾಘವೇಂದ್ರ ಅವರ ಮನೆ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ. ಕೆಲ ದಿನಗಳ ಎಂಟು ಲಕ್ಷ ರೂ. ಲಂಚದ ಹಣವನ್ನು ರಾಘವೇಂದ್ರ ಪಡೆದಿರುವುದಕ್ಕೆ ದಾಖಲೆಗಳು ಲಭ್ಯವಾಗಿದ್ದು, ರಾಘವೇಂದ್ರ ಅವರ ಮನೆ ಶೋಧ ನಡೆಸಲಿದ್ದಾರೆ. ಮನೆಯಲ್ಲಿನಗದು ಸೇರಿದಂತೆ ಅಕ್ರಮ ಆಸ್ತಿ ಕಂಡು ಬಂದರೆ ಲಂಚ ಸ್ವೀಕಾರ ಪ್ರಕರಣದ ಜತೆಗೆ ಅಕ್ರಮ ಆಸ್ತಿ ಗಳಿಕೆ ಪ್ರಕರಣವೂ ದಾಖಲಾಗಲಿದೆ.
ಪಾವಗಡ ಜನ ಸೇವೆ ಹುಣಸೆ ಹಣ್ಣಲ್ಲಿ ಗೋವಿಂದ:
ಎಸ್.ಆರ್ ರಾಘವೇಂದ್ರ ಹೆಸರು ಕೇಳಿದರೇ ಸಾಕು ಇಡೀ ಪಾವಗಡದ ಜನರ ಕಿವಿ ನೆಟ್ಟಗಾಗುತ್ತದೆ. ಪಾವಗಡ ಸಮಗ್ರ ಅಭಿವೃದ್ಧಿ ಸೇವಾ ಸಂಸ್ಥೆ ಎಂಬ ಸ್ವಯಂ ಸೇವಾ ಸಂಸ್ಥೆ ಮೂಲಕ ಪರೋಕ್ಷವಾಗಿ ರಾಘವೇಂದ್ರ ಧಾರೆ ಎರೆಯುತ್ತಿದ್ದಾರೆ. ಕೊರೊನಾ ಸಂಕಷ್ಟ ಕಾಲದಲ್ಲಿ ನೂರಾರು ಮೂಟೆ ಅಕ್ಕಿ ಮತ್ತು ಆಹಾರ ಸಾಮಗ್ರಿ ವಿತರಣೆ ಮಾಡಿದ್ದರು. ಈ ಮೂಲಕ ಸಾಮಾಜಿಕ ಜಾಲ ತಾಣದಲ್ಲಿ ಮಿಂಚುತ್ತಿದ್ದರು. ಇತ್ತೀಚೆಗೆ ಎಸ್ಎಸ್ಎಲ್ ಸಿ ಯಲ್ಲಿ ಉತ್ತೀರ್ಣ ರಾದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟು ಸುದ್ದಿಯಾಗಿದ್ದರು. ಕೆಲ ದಿನಗಳ ಹಿಂದಷ್ಟೇ ಪಾವಗಡ ಜನರಿಗಾಗಿ ಡಿಜಿಟಲ್ ಸೇವಾ ವಾಹನವನ್ನು ಲೋಕಾರ್ಪಣೆ ಮಾಡಿದ್ದರು.
ರಾಘವೇಂದ್ರ ರಾಜಕೀಯಕ್ಕೆ ಎಂಟ್ರಿಯಾಗುವ ಆಲೋಚನೆಯಲ್ಲಿದ್ದರು. ಲಕ್ಷ ಲಕ್ಷ ವೆಚ್ಚ ಮಾಡುತ್ತಿದ್ದ ರಾಘವೇಂದ್ರ ಸೇವಾ ಕಾರ್ಯದ ಬಗ್ಗೆ ಅನುಮಾನ ಮೂಡಸುವಂತಿತ್ತು. ಆದರೆ ಜನ ನಾಯಕನಾಗಲು ಹೊರಟಿದ್ದ ರಾಘವೇಂದ್ರ ಇದೀಗ ಲಂಚ ಕೇಸಲ್ಲಿ ಸಿಕ್ಕಿಬಿದ್ದು, ಮಾಡಿದ ಸೇವೆಯಲ್ಲಾ ಹುಣಸೆ ಹಣ್ಣನ್ನು ನೀರಿನಲ್ಲಿ ತೊಳೆದಂತಾಗಿದೆ.
Recommended Video