ನಾಲ್ಕು ವಿಶ್ವವಿದ್ಯಾಲಯ ಸ್ಥಾಪಿಸುತ್ತೇನೆ : ಬಚ್ಚೇಗೌಡ
(ಬಚ್ಚೇಗೌಡರ ಸಂದರ್ಶನದ ಮುಂದುವರಿದ ಭಾಗ)
ಪ್ರಶ್ನೆ : ಚಿಕ್ಕಬಳ್ಳಾಪುರ ದೇಶಕ್ಕೆ ಭಾರತ ರತ್ನ ಸರ್ ಎಂ. ವಿಶ್ವೇಶ್ವರಯ್ಯನವರನ್ನು ನೀಡಿದ ಸ್ಥಳ. ಇಲ್ಲಿನ ಶಿಕ್ಷಣ ವಲಯದ ಅಭಿವೃದ್ಧಿಗೆ ನಿಮ್ಮ ಯೋಜನೆ ಏನು?
ಬಚ್ಚೇಗೌಡ : ಬಹಳ ಒಳ್ಳೆ ಪ್ರಶ್ನೆ. ನಾನೇ ಹೇಳಬೇಕು ಅಂದ್ಕೊಂಡಿದ್ದೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನಾಲ್ಕು ವಿಶ್ವವಿದ್ಯಾನಿಲಯಗಳನ್ನು ಸ್ಥಾಪಿಸುವ ಯೋಜನೆ ನನ್ನದಾಗಿದೆ. ಈ ಪೈಕಿ ಚಿಕ್ಕಬಳ್ಳಾಪುರದಲ್ಲಿ ಸ್ಥಾಪನೆಯಾಗಬೇಕಿರುವ ವಿಶ್ವವಿದ್ಯಾನಿಲಯಕ್ಕೆ ಸರ್. ಎಂ. ವಿಶ್ವೇಶ್ವರಯ್ಯ ವಿಶ್ವವಿದ್ಯಾನಿಲಯ ಎಂದು ನಾಮಕರಣ ಮಾಡಲಾಗುವುದು. ಈ ಪ್ರದೇಶದಲ್ಲಿ ಒಂದು ಸರ್ಕಾರಿ ವೈದ್ಯಕೀಯ ಕಾಲೇಜನ್ನು ಸ್ಥಾಪಿಸುವ ಮೂಲಕ ಬಡಜನತೆಯ ಆರೋಗ್ಯಕ್ಕೆ ಮತ್ತಷ್ಟು ಸೌಲಭ್ಯ ಕಲ್ಪಿಸಲಾಗುವುದು. ಈ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರಿ ಸ್ವಾಮ್ಯದ ಉದ್ದಿಮೆ ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದು ಇವರ ಮಕ್ಕಳಿಗಾಗಿ 6ರಿಂದ 8 ಕೇಂದ್ರಿಯ ವಿದ್ಯಾಲಯಗಳನ್ನು ಸ್ಥಾಪಿಸಲು ಪ್ರಯತ್ನ ನಡೆಸುತ್ತೇನೆ.
ಪ್ರಶ್ನೆ : ನರೇಂದ್ರ ಮೋದಿಯವರು ರಾಷ್ಟ್ರವ್ಯಾಪಿ 24x7 ವಿದ್ಯುತ್ ನೀಡ್ತೀನಿ ಅಂತಾ ಹೇಳ್ತಿದ್ದಾರೆ. ನೀವು ಇಲ್ಲಿನ ರೈತರಿಗೆ, ಜನರಿಗೆ 24x7 ವಿದ್ಯುತ್ ನೀಡ್ತೀರಾ?
ಬಚ್ಚೇಗೌಡ : ಸಂದೇಹನೇ ಇಲ್ಲ. ನಮ್ಮ ಈ ಪ್ರದೇಶದಲ್ಲಿ ರೈತರಿಗೆ ನಿರಂತರ 3 ಫೇಸ್ ವಿದ್ಯುತ್ ನೀಡಲು ಸಾಧ್ಯವಿರುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಈ ನಿಟ್ಟಿನಲ್ಲಿ ಕೇಂದ್ರೀಯ ವಿದ್ಯುತ್ ಗ್ರಿಡ್ ಅನ್ನು ಮತ್ತಷ್ಟು ಸದೃಢಗೊಳಿಸಲಾಗುವುದು. ಗೌರಿಬಿದನೂರು ಅಥವಾ ಬಾಗೇಪಲ್ಲಿಯಲ್ಲಿ ಕೇಂದ್ರೀಯ ಸೌರ ವಿದ್ಯುತ್ ಪಾರ್ಕ್ ನಿರ್ಮಾಣ ಮಾಡುವ ಮೂಲಕ ಈ ಭಾಗದ ವಿದ್ಯುತ್ ಅಭಾವವನ್ನು ಸಂಪೂರ್ಣವಾಗಿ ಕೊನೆಗಾಣಿಸಬೇಕೆಂಬ ಕನಸು ನನ್ನದು.
ಪ್ರಶ್ನೆ : ಚಿಕ್ಕಬಳ್ಳಾಪುರ ಬೆಂಗಳೂರಿಗೆ ಹೊಂದಿಕೊಂಡಂತಿರುವ ಕ್ಷೇತ್ರ. ಇಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ಅಗಾಧ ಸಾಧ್ಯತೆಗಳಿವೆ. ನೀವು ಈ ನಿಟ್ಟಿನಲ್ಲಿ ಜನತೆಗೆ ಏನು ಭರವಸೆ ನೀಡುತ್ತೀರಾ?
ಬಚ್ಚೇಗೌಡ : ನೀರಿನ ಕೊರತೆಯಿಂದಾಗಿ ಈ ಪ್ರದೇಶದಲ್ಲಿ ಕೈಗಾರಿಕೆಗಳ ಬೆಳವಣಿಗೆ ಆಗುತ್ತಿಲ್ಲ. ಈಗಾಗಲೇ ಹಮ್ಮಿಕೊಂಡಿರುವ ಶಾಶ್ವತ ನೀರಾವರಿ ಯೋಜನೆಗಳಲ್ಲಿ ಕೈಗಾರಿಕೆಗಳಿಗೂ ಅಗತ್ಯವಿರುವ ನೀರು ಕಲ್ಪಿಸಿ, ಕೈಗಾರಿಕೆಗಳ ಬೆಳವಣಿಗೆಗೆ ಅನುಕೂಲ ಮಾಡಿಕೊಡಲಾಗುವುದು. ಚಿಕ್ಕಬಳ್ಳಾಪುರ ತಾಲ್ಲೂಕಿನಲ್ಲಿ ಜವಳಿ ಪಾರ್ಕ್ ಹಾಗೂ ಅತೀ ಹೆಚ್ಚು ಹಿಂದುಳಿದ ಬಾಗೇಪಲ್ಲಿ ಮತ್ತು ಗೌರಿಬಿದನೂರು ತಾಲ್ಲೂಕುಗಳಲ್ಲಿ ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಲು ಎಲ್ಲಾ ರೀತಿಯ ಪ್ರಯತ್ನ ಮಾಡುತ್ತೇನೆ. ಇದರಿಂದ ಆ ಪ್ರದೇಶಗಳಲ್ಲಿ ಹೆಚ್ಚಿನ ಉದ್ಯೋಗ ಸೃಷ್ಟಿಯಾಗುತ್ತದೆಂಬ ಆಶಯ ನನ್ನದು. ಕಟ್ಟಡ ಕಾರ್ಮಿಕರ ಮಕ್ಕಳಿಗಾಗಿ ನನ್ನ ಲೋಕಸಭಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರದ ವಸತಿ ಶಾಲೆಯನ್ನು ಸ್ಥಾಪಿಸುತ್ತೇನೆ.
ಬೆಂಗಳೂರಿನ ದಕ್ಷಿಣ ಪ್ರದೇಶದಲ್ಲಿ ಐಟಿ ವಲಯ ಬೆಳೆದಿರುವಂತೆ, ಬೆಂಗಳೂರಿನ ಉತ್ತರ ದಿಕ್ಕಿನಲ್ಲಿ ಯಲಹಂಕ ಮತ್ತು ದೇವನಹಳ್ಳಿ ಸುತ್ತಮುತ್ತಲ ಪ್ರದೇಶದಲ್ಲಿ ಕೇಂದ್ರ ಸಹಾಯಧನದ ನೆರವಿನಿಂದ ಸಾಫ್ಟ್ವೇರ್ ಪಾರ್ಕ್ಗಳನ್ನು ನಿರ್ಮಾಣ ಮಾಡಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತೇನೆ. ಇದರಿಂದ ಇಡೀ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಉದ್ಯೋಗಾವಕಾಶಗಳ ಜೊತೆಗೆ ಕಟ್ಟಡ ನಿರ್ಮಾಣ, ವಸತಿ ನಿರ್ಮಾಣ, ಸಾರಿಗೆ, ಪ್ರವಾಸೋದ್ಯಮ ಆದಿಯಾಗಿ ಹಲವಾರು ವಲಯಗಳಲ್ಲಿ ಬಂಡವಾಳ ಹೂಡಿಕೆ ಹಾಗೂ ವ್ಯಾಪಾರ ವಹಿವಾಟು ಹೆಚ್ಚುತ್ತದೆ ಎಂಬುದು ನನ್ನ ನಂಬಿಕೆ.