ಸಂಪುಟ ರಚನೆ ಪಕ್ಕಕ್ಕಿಟ್ಟು ಅಧಿಕಾರಿಗಳಿಗೆ ಯಡಿಯೂರಪ್ಪ ಕ್ಲಾಸ್
ಬೆಂಗಳೂರು, ಆಗಸ್ಟ್ 2: ವಿಧಾನಸೌಧದಲ್ಲಿ ಅಧಿಕಾರಿಗಳಿಗೆ ಸಿಎಂ ಯಡಿಯೂರಪ್ಪ ಪಾಠ ಮಾಡಿದ್ದಾರೆ.
ನಿತ್ಯ ಎಲ್ಲರು ಬೆಳಗ್ಗೆ 10 ಗಂಟೆಗೆ ಕಚೇರಿಗೆ ಬರುವುದು ಕಡ್ಡಾಯ, ಹಾಗೂ ಅವತ್ತಿನ ಕಡತಗಳನ್ನು ಅವತ್ತೇ ಮುಗಿಸಬೇಕು ಎಂದು ಅಧಿಕಾರಿಗಳಿಗೆ ಬುದ್ಧಿವಾದ ಹೇಳಿದ್ದಾರೆ. ಕಾರ್ಯದರ್ಶಿ, ಅಪರ ಮುಖ್ಯಕಾರ್ಯದರ್ಶಿ, ಜಿಲ್ಲಾಧಿಕಾರಿಗಳ ಜೊತೆಗೆ ಯಡಿಯೂರಪ್ಪ ಸಭೆ ನಡೆಸುತ್ತಿದ್ದಾರೆ.
ವಿಧಾನಸೌಧದ ಸಿಬ್ಬಂದಿಗೆ ಬಿಸಿ ಮುಟ್ಟಿಸಿದ ಸಿಎಂ ಯಡಿಯೂರಪ್ಪ
ಆಡಳಿತ ಯಂತ್ರ ಜಿಲ್ಲಾ ಮಟ್ಟದಲ್ಲಿ ಚುರುಕಾಗಬೇಕು, ಜನ ರಾಜಧಾನಿಗೆ ಅಲೆಯುವುದು ತಪ್ಪಬೇಕು, ಮುಖ್ಯ ಕಾರ್ಯದರ್ಶಿಗಳು ತಿಂಗಳಿಗೆ ಒಮ್ಮೆಯಾದರೂ ಜಿಲ್ಲೆಗೆ ಭೇಟಿ ಕೊಡಬೇಕು ಎಂದು ಸೂಚನೆ ನೀಡಿದ್ದಾರೆ.
ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಬಾರದೆ ಇರುವ ಕುರಿತು ಯಡಿಯೂರಪ್ಪ ಗುರುವಾರವಷ್ಟೇ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದರು.
ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲೆಯಲ್ಲಿ ಎರಡು ಬಾರಿ ಪ್ರವಾಸ ಮಾಡಬೇಕು, ನಾನು ಪ್ರತಿ ತಿಂಗಳು ಯಾರು ಎಲ್ಲಿ ಹೋಗಿದ್ದೀರಿ ಎನ್ನುವ ಮಾಹಿತಿ ತರಿಸಿಕೊಳ್ಳುತ್ತೇನೆ, ಇದರಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ ಎಂದರು.
ಅಧಿಕಾರಿಗಳು ಸ್ಪಂದಿಸಿದಾಗ ಜನಪರ ಸರ್ಕಾರವಾಗುತ್ತದೆ. ಕಾನೂನು ಎಸ್ಸಿ, ಎಸ್ಟಿ, ಬಡವರು, ಕಡುಬಡವರು, ಕಾರ್ಮಿಕರ ಕೆಲಸಕ್ಕೆ ಅಡ್ಡಿಯಾಗಬಾರದು. ನಾನು ನಿಮ್ಮ ಜೊತೆಗೆ ಇದ್ದೇನೆ, ಸಾಮಾನ್ಯ ಜನರಿಗೆ ಅಧಿಕಾರಿಗಳು ಸ್ಪಂದಿಸುವಂತಾಗಬೇಕು. ಅಧಿಕಾರಿಗಳ ಮೇಲೆ ನನಗೆ ವಿಶ್ವಾಸವಿದೆ.
ಹಿಂದೆ ಸಾಕಷ್ಟು ಕೊರತೆಯಾಗಿತ್ತು. ಅದಕ್ಕೆ ರಾಜಕೀಯ ವ್ಯವಸ್ಥೆ ಕಾರಣ. ಆ ಕೊರತೆ ತುಂಬುವ ಕೆಲಸ ಆಗಬೇಕು. ಬರಗಾಲ ಇದೆ, ಜನ ಕಂಗೆಟ್ಟಿದ್ದಾರೆ.
ಕೆಲವು ಕಡೆ ಪ್ರವಾಹ ಇದೆ. ಅದನ್ನು ಎದುರಿಸಲು ಅಧಿಕಾರಿಗಳು ಸಜ್ಜಾಗಬೇಕು. ಅಧಿಕಾರಿಗಳಿಗೆ ಸಮಸ್ಯೆಯ ಅರಿವಾಗಬೇಕು. ದಿಢೀರ್ ಹಳ್ಳಿಗಳಿಗೆ ಭೇಟಿ ಕೊಡಿ, ಆಗ ನಿಮ್ಮ ಕೆಳ ಅಧಿಕಾರಿಗಳು ಹೇಗೆ ಕೆಲಸ ಮಾಡ್ತಿದ್ದಾರೆ ಗೊತ್ತಾಗುತ್ತೆ.
ನೀವು ಸಮಯಕ್ಕೆ ಸರಿಯಾಗಿ ಕಚೇರಿಗೆ ಬರಬೇಕು, ಸಿಬ್ಬಂದಿಯೂ ಬರಬೇಕು. ಅವತ್ತಿಂದು ಅವತ್ತೇ ಕಡತ ವಿಲೇವಾರಿ ಆಗಬೇಕು ಯಡಿಯೂರಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.ರಾಜ್ಯದಲ್ಲಿ ಶೇ.42 ರಷ್ಟು ಮಳೆ ಕೊರತೆ ಇದೆ, ಶೇ.18 ರಷ್ಟು ಮಳೆ ವಾಡಿಕೆಗಿಂತ ಕೊರತೆ ಇದೆ, ಶೇ. 32 ರಷ್ಟು ಮಲೆನಾಡಿನಲ್ಲೇ ಮಳೆ ಕೊರತೆ ಇದೆ.
ಜಲಾಶಗಳಲ್ಲಿ ನೀರಿನ ಮಟ್ಟ ಕಡಿಮೆ ಇದೆ. 105 ತಾಲೂಕಿನಲ್ಲಿ ಅಂತರ್ಜಲ ಕುಸಿತ ಆಗಿದೆ. ಬರಗಾಲ ಪರಿಸ್ಥಿತಿ ಗಂಭೀರವಾಗಿದೆ. ಪರಿಸ್ಥಿತಿ ಯಶಸ್ವಿಯಾಗಿ ನಿಭಾಯಿಸುವ ಕೆಲಸ ಆಗಬೇಕು. ದನಕರುಗಳಿಗೆ ಮೇವು, ನೀರು ಸಿಗಬೇಕು
ಜನ ವಲಸೆ ಹೋಗುವುದನ್ನು ತಡೆಯಬೇಕು. 3067 ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಆಗ್ತಿದೆ. ಇದರಿಂದ ಬರದ ಸಮಸ್ಯೆ ಅರಿಯಬಹುದು ಶುದ್ಧ ಕುಡಿಯುವ ನೀರಿನ ಪೂರೈಕೆ ಸಮರ್ಥವಾಗಿ ಆಗಬೇಕು. ಆದ್ಯತೆ ಕೊಡಬೇಕು ಎಂದರು.
ಆಯಾ ಜಿಲ್ಲೆಗಳ 618.1 ಕೋಟಿ ರೂ. ಬರಗಾಲಕ್ಕಾಗಿ ಹಣ ನೀಡಲಾಗಿದೆ. 422 ಕೋಟಿ ತುರ್ತು ಪರಿಸ್ಥಿತಿ ನಿಭಾಯಿಸಲು ಹಣ ಬಿಡುಗಡೆ.
ಹಣಕಾಸಿನ ತೊಂದರೆ ಇದ್ದರೂ ಕೇಂದ್ರ ಸರ್ಕಾರ ರೈತರಿಗೆ ಕಿಸಾನ್ ಯೋಜನೆಯಡಿ 6000 ರೂ. ನೀಡಲಾಗುತ್ತದೆ.
ನಾವು ರಾಜ್ಯ ಸರ್ಕಾರದಿಂದ 4000 ರೂ. ಬೆಳೆ ವಿಮೆ ಕಡ್ಡಾಯ ನೋಂದಣಿ ಮಾಡಿಸುವುದು ಕಡ್ಡಾಯ. ಬರ ನಿರ್ವಹಣೆಗೆ ಆದ್ಯತೆ ನೀಡಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.
ಅಧಿಕಾರಿಗಳು ಹತ್ತಿರದ ವಿದ್ಯಾರ್ಥಿ ನಿಲಯಗಳಿಗೆ ಕಡ್ಡಾಯವಾಗಿ ಭೇಟಿ ನೀಡಬೇಕು, ಸರ್ಕಾರದ ಸವಲತ್ತು, ಸ್ವಚ್ಛತೆ ಬಗ್ಗೆ ಪರಿಶೀಲಿಸಬೇಕು, ಕೆಇಬಿ ಇಲಾಖೆಗೆ ಸಿಎಂ ಖಡಕ್ ಸೂಚನೆ ನೀಡಿದರು.
ಗಂಗಾ ಕಲ್ಯಾಣ ಯೋಜನೆಯ ಪಂಪ್ ಸೆಟ್ ಗಳಿಗೆ ಸಮರ್ಥವಾಗಿ ವಿದ್ಯುತ್ ಪೂರೈಕೆ ಆಗಬೇಕು. ಮಾಡದೇ ಹೋದ್ರೆ ಪರಿಣಾಮ ಬೇರೆ ಆಗುತ್ತೆ.
ನಾವು ನೀವು ಜನಪ್ರತಿನಿಧಿಗಳು, ಜನರ ಸಮಸ್ಯೆಗಳಿಗೆ ನಾವು ನೀವು ಸ್ಪಂದಿಸಬೇಕು ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು.
ಯಾವುದೇ ಪಕ್ಷದ ಶಾಸಕರು ದೂರು ನೀಡದಂತೆ ಎಚ್ಚರವಹಿಸಿ. ಅನಗತ್ಯ ದೂರು ನೀಡಿದ್ರೆ ನಾನು ಸೊಪ್ಪು ಹಾಕೊಲ್ಲ. ಯಾವುದೇ ಪಕ್ಷದವರಾದ್ರೂ ಸರಿ ನಾನು ಸತ್ಯ ಇಲ್ಲದೆ ಹೋದ್ರೆ ಕೇರ್ ಮಾಡೊಲ್ಲ. ನಾನು ನಿಮ್ಮ ಜೊತೆಗೆ ಇದ್ದೇನೆ. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು.
ಜನರ ಕೆಲಸ ಮಾಡದೇ ಇದ್ದರೆ ನಾವು ಬದುಕಿದ್ದು ಸತ್ತಂತೆ. ನಾವು ನೀವು ಜನರ ಪ್ರತಿನಿಧಿಗಳು. ಜನರ ಕೆಲಸ ಪ್ರಾಮಾಣಿಕವಾಗಿ ಮಾಡಿ, ಅಲ್ಲಿನ ಪರಿಸ್ಥಿತಿ ಸರಿ ಮಾಡಿ ಎಂದರು.