ಸಿಎಂ ಸಿದ್ದರಾಮಯ್ಯ ಅವರ ಸೊಸೆ ಸ್ಮಿತಾ ರಾಕೇಶ್ ಗೆ ರಕ್ಷಣೆ ಬೇಕಂತೆ!
ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸೊಸೆ ಮನೆ ಮೇಲೆ ಕಿಡಿಗೇಡಿಗಳು ದಾಳಿ ಮಾಡಿದ್ದು, ಮಲ್ಲೇಶ್ವರಂ ಠಾಣೆಗೆ ದೂರು ನೀಡಲಾಗಿದೆ.
ಬೆಂಗಳೂರು, ಜೂನ್ 06 : ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಸೊಸೆ ಸ್ಮಿತಾ ಅವರ ಮನೆ ಮೇಲೆ ಕಿಡಿಗೇಡಿಗಳು ದಾಳಿ ಮಾಡಿರುವ ಘಟನೆ ನಡೆದಿದೆ. ರಕ್ಷಣೆ ಕೋರಿ ಸ್ಮಿತಾ ಅವರು ಮಲ್ಲೇಶ್ವರಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸ್ಮಿತಾ ಅವರು ತಮ್ಮ ತಾಯಿ, ಇಬ್ಬರು ಮಕ್ಕಳೊಂದಿಗೆ ಮಲ್ಲೇಶ್ವರದಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ ನಡೆದ ಕೆಲ ಘಟನೆಗಳಿಂದ ಹೆದರಿಕೆ ಉಂಟಾಗಿದ್ದು, ತಮಗೆ ರಕ್ಷಣೆ ನೀಡಬೇಕೆಂದು ಸ್ಮಿತಾ ರಾಕೇಶ್ ದೂರಿನಲ್ಲಿ ಮನವಿ ಮಾಡಿದ್ದಾರೆ.
ಈ ಕುರಿತಂತೆ ಪೊಲೀಸರು ಈಗಾಗಲೇ ಕ್ರಮಕೈಗೊಂಡಿದ್ದು, ಸ್ಮಿತಾ ಅವರ ಮನೆಗೆ ಭದ್ರತೆ ಒದಗಿಸಿದ್ದಾರೆ. ಪಿಂಕ್ ಹೊಯ್ಸಳ ವಾಹನ ಗಸ್ತು ತಿರುಗುತ್ತಿದೆ. ಕಿಡಿಗೇಡಿಗಳ ಪತ್ತೆಗೆ ಬಲೆ ಬೀಸಿದ್ದಾರೆ. ಜೂನ್ 12ರಂದು ರಾತ್ರಿ 2 ಗಂಟೆ ವೇಳೆಗೆ ಯಾರೋ ದುಷ್ಕರ್ಮಿಗಳು ಮನೆ ಮುಂದೆ ಗಲಾಟೆ ಮಾಡಿದ್ದಾರೆ.
ಮನೆ ಕಾಂಪೌಂಡ್ ಯೊಳಗೆ ನುಗ್ಗಿ ಹಲಸಿನ ಮರದಲ್ಲಿದ್ದ ಹಣ್ಣು-ಕಾಯಿ ಕದ್ದೊಯ್ದಿದ್ದಾರೆ. ಎರಡನೇ ಬಾರಿ ಈ ಕೃತ್ಯ ಪುನಾರಾರ್ತನೆಯಾದಾಗ ಕಾಂಪೌಂಡ್ ನಲ್ಲಿ ಬಲ್ಬ್ ಚೂರು ಚೂರಾಗಿದೆ. ಮನೆಯ ಸಾಕು ನಾಯಿಗೂ ಹಲ್ಲೆ ಮಾಡಲಾಗಿದೆ. ಸ್ಮಿತಾ ಅವರ ಮನೆ ಮಲ್ಲೇಶ್ವರದ 18ನೇ ಕ್ರಾಸ್ ಬಳಿ ಇದ್ದು, ಸ್ಮಿತಾ ಅವರು ತಮ್ಮ ಪುತ್ರ ಧ್ಯಾನ್, ಮಗಳು ತನ್ಮಯಿ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಬೇಕಾದ್ದು ಅನಿವಾರ್ಯವಾಯಿತು ಎಂದಿದ್ದಾರೆ.
2016ರ ಜುಲೈನಲ್ಲಿ ಬೆಲ್ಜಿಯಂ ಪ್ರವಾಸದಲ್ಲಿದ್ದ ರಾಕೇಶ್ ಸಿದ್ದರಾಮಯ್ಯ(39) ಅವರು ಬಹು ಅಂಗಾಗ ವೈಫಲ್ಯಕ್ಕೆ ಒಳಗಾಗಿ ಅಕಾಲಿಕ ಮರಣಕ್ಕೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು.