ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಳೆ ನೀರು ಮನೆಗಳಿಗೆ ನುಗ್ಗದಂತಹ ಕಾಮಗಾರಿಗಳಿಗೆ ಆದ್ಯತೆ: ಸಿಎಂ ಬೊಮ್ಮಾಯಿ

|
Google Oneindia Kannada News

ಬೆಂಗಳೂರು, ನ.5: ಬೆಂಗಳೂರಿನಲ್ಲಿ ಮಳೆ ಬಂದಾಗ ಮನೆಗಳಿಗೆ ನೀರು ನುಗ್ಗುವುದನ್ನು ತಡೆಯಲು ಏನು ತುರ್ತು ಕಾಮಗಾರಿ ಕೈಗೊಳ್ಳಬೇಕು ಎಂಬುದರ ಬಗ್ಗೆ ವಿವರ ಸಲ್ಲಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ತತ್ತರಿಸಿದೆ. ತುರ್ತು ಪರಿಹಾರ ಕಾಮಗಾರಿಗಳ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರು ನಗರ ಸ್ಥಳೀಯ ಸಂಸ್ಥೆಗಳೊಂದಿಗೆ ಶುಕ್ರವಾರ ತುರ್ತು ಸಭೆ ನಡೆಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.

ನಗರದಲ್ಲಿ ಪದೇ ಪದೇ ಮಳೆಯಾದಾಗ ತಗ್ಗು ಪ್ರದೇಶದ ಮನೆಗಳಿಗೆ ನೀರು ತುಂಬಿಕೊಳ್ಳುತ್ತದೆ. ಮನೆಯಲ್ಲಿರುವ ವಸ್ತುಗಳೆಲ್ಲವೂ ನೀರಿನಲ್ಲಿ ಕೊಚ್ಚಿಹೋಗಿ ಜನಸಾಮಾನ್ಯರಿಗೆ ಅಪಾರ ನಷ್ಟವಾಗುತ್ತದೆ. ಆದ್ದರಿಂದ ಮನೆಗಳಿಗೆ ನೀರು ನುಗ್ಗದಂತೆ ತುರ್ತಾಗಿ ಮತ್ತು ಶಾಶ್ವತವಾಗಿ ಏನು ಮಾಡಬೇಕು, ಯಾವ ಕಾಮಗಾರಿಗಳ ಅಗತ್ಯವಿದೆ ಎಂಬುದರ ಬಗ್ಗೆ ಅಧಿಕಾರಿಗಳಿಗೆ ವಿವರ ಕೇಳಿದ್ದೇನೆ. ವರದಿ ಸಲ್ಲಿಕೆ ಬಳಿಕ ಹಣಕಾಸಿನ ನೆರವು ನೀಡಿ ಕೂಡಲೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

Rain

ಈ ಬಾರಿಯ ಮಳೆಗಾಲ ವಿಸ್ತರಣೆಯಾಗಿದೆ. ಅಕ್ಟೋಬರ್, ನವೆಂಬರ್‌ನಲ್ಲೂ ಸಾಕಷ್ಟು ಮಳೆಯಾಗುತ್ತಿದೆ. ಇನ್ನೂ ಕೆಲ ದಿನಗಳ ಕಾಲ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ. ನಗರದಲ್ಲಿ ಮಳೆ ಬಂದರೆ ಯಾವ ಪ್ರದೇಶಗಳಿಗೆ ಹೆಚ್ಚಿನ ತೊಂದರೆಯಾಗುತ್ತದೆ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಯಿತು. ಮುಖ್ಯವಾಗಿ ನಗರದ ಪಶ್ಚಿಮ ಮತ್ತು ದಕ್ಷಿಣ ಭಾಗದ ಪ್ರದೇಶಗಳು ಮಳೆಗೆ ಹೆಚ್ಚಿನ ಹಾನಿಯಾಗುತ್ತವೆ. ಅಲ್ಲದೆ, ನಗರದ ಹೊರವಲಯದ ಪ್ರದೇಶಗಳಲ್ಲಿಯೂ ಮಳೆ ಅವಘಡಗಳು ಉಂಟಾಗುತ್ತವೆ ಎಂದರು.

ಮಳೆ ಬಂದ ಸಂದರ್ಭದಲ್ಲಿ ಸಾರ್ವಜನಿಕ ರಕ್ಷಣೆಗಾಗಿ 64 ತುರ್ತು ರಕ್ಷಣಾ ಪಡೆಗಳು ನಗರದಲ್ಲಿ ಸದ್ಯ ಕಾರ್ಯನಿರ್ವಹಿಸುತ್ತಿವೆ. ಪ್ರತಿ ತಂಡದಲ್ಲಿ 20 ಸದಸ್ಯರು ಇರುತ್ತಾರೆ. ಇದನ್ನು 30 ಸದಸ್ಯರಿಗೆ ಹೆಚ್ಚಿಸಲು ಸೂಚಿಸಲಾಗಿದೆ. ಅಲ್ಲದೆ, ಗೃಹರಕ್ಷಕ ದಳವನ್ನೂ ಹೆಚ್ಚಾಗಿ ಬಳಸಲು ಸೂಚಿಸಲಾಗಿದೆ.

ತುರ್ತು ಕಾಮಗಾರಿಗಳ ಬಳಕೆಗಾಗಿ ಎನ್‌ಡಿಆರ್‌ಎಫ್ ಹಣವನ್ನು ಬಿಬಿಎಂಪಿಗೆ ಒದಗಿಸುವಂತೆ ಕಂದಾಯ ಇಲಾಖೆ ಕಾರ್ಯದರ್ಶಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ವಿವರಿಸಿದರು.

ಮಳೆ ಬಂದಾಗ ಸಮಸ್ಯೆಯಾಗುವುದಕ್ಕೆ ಇದೇ ಕಾರಣ:

ನಗರದಲ್ಲಿ ಸ್ವಲ್ಪ ಹೆಚ್ಚಿಗೆ ಮಳೆ ಬಂದರೂ ನೀರು ರಸ್ತೆಗೆ ಹರಿದು ಬರುತ್ತವೆ, ತಗ್ಗು ಪ್ರದೇಶಗಳಲ್ಲಿ ಮನೆಗಳಿಗೆ ನುಗ್ಗುತ್ತವೆ. ಇದಕ್ಕೆ ಕಾರಣ ಏನೆಂದು ನೋಡಿದಾಗ, ಮಳೆ ನೀರು ಕಾಲುವೆಗಳ ಅಸಮರ್ಪಕ ನಿರ್ವಹಣೆ ಎದ್ದು ಕಾಣುತ್ತದೆ. ನೀರು ಹೋಗುವಂತಹ ತೂಬುಗಳು ಕಿರಿದಾಗಿವೆ, ಕೆಲವೆಡೆ ತಡೆಗೋಡೆಗಳು ಕುಸಿದು ಬಿದ್ದಿವೆ. 842ಕಿ.ಮೀ ತಡೆಗೋಡೆಯ ಪೈಕಿ ಸದ್ಯ 389 ಕಿ.ಮೀ. ತಡೆಗೋಡೆ ಮಾತ್ರ ಉಳಿದಿದೆ. ನಗರೋತ್ಥಾನ ಯೋಜನೆಯಡಿ 75 ಕಿ.ಮೀ. ತಡೆಗೋಡೆ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಕೂಡಲೇ ಕಾಮಗಾರಿಯನ್ನು ತ್ವರಿತಗೊಳಿಸಬೇಕು. ಇದಕ್ಕೆ ಬೇಕಾದ ಹೆಚ್ಚುವರಿ ಹಣಕಾಸಿನ ನೆರವನ್ನೂ ತುರ್ತು ರೀತಿಯಲ್ಲಿ ಒದಗಿಸಲಾಗುವುದು ಎಂದು ಅಧಿಕಾರಿಗಳಿಗ ಸೂಚಿಸಿರುವುದಾಗಿ ಹೇಳಿದರು.

ಬಿಬಿಎಂಪಿ, ಬೆಸ್ಕಾಂ, ಬೆಂಗಳೂರು ಜಲಮಂಡಳಿ ಮೂರು ಅಧಿಕಾರಿಗಳಿಗೆ ಸಮನ್ವಯ ಸಾಧಿಸಿಕೊಂಡು ಕಾಮಗಾರಿಗಳನ್ನು ನಡೆಸುವಂತೆ ಸೂಚಿಸಲಾಗಿದೆ. ಬಿಬಿಎಂಪಿ ಆಯುಕ್ತರು ಮಳೆ ಅವಘಡಳಿಗೆ ಸಂಬಂಧಿಸಿದಂತಹ ಯಾವುದೇ ಕಾಮಗಾರಿಯ ಪ್ರಗತಿಯ ವಿಚಾರಗಳನ್ನು ಕೇವಲ ಮೇಲಧಿಕಾರಿಗಳ ಸಭೆ ನಡೆಸಿ ಸುಮ್ಮನಾಗದೆ, ಕೆಳಮಟ್ಟದ ಎಂಜಿನಿಯರ್‌ಗಳ ಸಭೆಯನ್ನೂ ಕರೆದು ಪರಿಶೀಲಿಸಬೇಕು. ಅಲ್ಲದೆ, ಯಾವುದೇ ಕಾಮಗಾರಿ ವಿಳಂಬ ಆದರೂ ಸಹ ಅದಕ್ಕೆ ಆಯುಕ್ತರನ್ನೇ ಉತ್ತರದಾಯಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ಸಚಿವರ ಗೈರಿಗೆ ಮುಖ್ಯಮಂತ್ರಿ ಹೇಳಿದ್ದೇನು?

ಬೆಂಗಳೂರಿನ ಮಳೆಹಾನಿ ಕುರಿತು ಮುಖ್ಯಮಂತ್ರಿ ಸಭೆ ನಡೆಸಿದರೂ ಬೆಂಗಳೂರಿನ ಸಚಿವರು, ಶಾಸಕರು ಪಾಲ್ಗೊಳ್ಳದಿರುವುದು ಕುತೂಹಲ ಮೂಡಿಸಿತ್ತು.

Recommended Video

ರವೀಂದ್ರ ಜಡೇಜಾ ಕೊಟ್ಟ ಉತ್ತರಕ್ಕೆ ಫುಲ್‌ ಕಕ್ಕಾಬಿಕ್ಕಿಯಾದ ಪತ್ರಕರ್ತ | Oneindia Kannada

ಈ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, "ನಾನು ಕರೆದಿದ್ದು ತುರ್ತು ಸಭೆ. ಒಂದು ತಾಸಿನ ಹಿಂದಷ್ಟೇ ನಿರ್ಧಾರ ಮಾಡಿ ಕೂಡಲೇ ಅಧಿಕಾರಿಗಳನ್ನು ಬರ ಹೇಳಿದೆ. ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಬೇರೊಂದು ಕೆಲಸಕ್ಕೆ ಬಂದಿದ್ದರು. ಅವರನ್ನೂ ಸಭೆಯಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದೆ. ತುರ್ತಾಗಿ ಸಭೆ ಕರೆದಿದ್ದರಿಂದ ಯಾವುದೇ ಸಚಿವರು, ಶಾಸಕರಿಗೆ ಸೂಚನೆ ನೀಡಿರಲಿಲ್ಲ. ಇದರಲ್ಲಿ ಯಾವುದೇ ಅಪಾರ್ಥ ಬೇಡ' ಎಂದು ಸ್ಪಷ್ಟಪಡಿಸಿದರು.

English summary
Chief Minister Basavaraja Bommai has instructed officials to detail report for what emergency measures should be taken to prevent water from flooding the houses rain in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X