ShareHash APP ಮೂಲಕ ಕೋಟಿ ಕೋಟಿ ದೋಖಾ: ಸಿಸಿಬಿಯಿಂದ ನಾಲ್ವರ ಸೆರೆ, 17 ಕೋಟಿ ಜಪ್ತಿ!
ಬೆಂಗಳೂರು, ಏ. 18: ಕ್ರಿಪ್ಟೋ ಕರೆನ್ಸಿ ಮೈನಿಂಗ್ ಯಂತ್ರ ನೀಡುವ ಸೋಗಿನಲ್ಲಿ ಸಾರ್ವಜನಿಕರನ್ನು ನಂಬಿಸಿ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದ ನಾಲ್ವರು ಹೈಟೆಕ್ ವಂಚಕರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ವಿವಿಧ 44 ಬ್ಯಾಂಕ್ಗಳಲ್ಲಿ ತೆರೆದಿದ್ದ ಖಾತೆಗಳಲ್ಲಿನ 15 ಕೋಟಿ ರೂ. ನಗದು ಹಣ, ಎರಡು ಕೆ.ಜಿ. ಚಿನ್ನ ಸೇರಿದಂತೆ ಒಟ್ಟು 17 ಕೋಟಿ ರೂ. ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ.
ಜಬೀವುಲ್ಲಾ ಖಾನ್, ರೆಹಮತ್ ಉಲ್ಲಾ ಖಾನ್, ಶೀತಲ್ ಬಸ್ತವದ್, ಇಮ್ರಾನ್ ರಿಯಾಜ್ ಬಂಧಿತ ಆರೋಪಿಗಳು. ಈ ಖತರ್ ನಾಕ್ ಕಿಲಾಡಿಗಳು ವಿವಿಧ ಕಂಪನಿಗಳ ಹೆಸರಿನಲ್ಲಿ ತೆಗೆದಿದ್ದ ಬ್ಯಾಂಕ್ ಖಾತೆಗಳನ್ನು ಸಿಸಿಬಿ ಪೊಲೀಸರು ಜಪ್ತಿ ಮಾಡಿದ್ದಾರೆ. ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ಕೊಡುವುದಾಗಿ ನಂಬಿಸಿ ಜನರಿಗೆ ಮೋಸ ಮಾಡಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
SHAREHASH ಅಪ್ಲಿಕೇಷನ್ ಮೂಲಕ ಹೀಲಿಯಂ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಕ್ರಿಪ್ಟೋ ಮೈನಿಂಗ್ ಯಂತ್ರ ನೀಡುವುದಾಗಿ ನಂಬಿಸಿ ಸಾರ್ವಜನಿಕರಿಂದ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿಸಿದ್ದಾರೆ. ಕೋವಿಡ್ ಲಾಕ್ ಡೌನ್ ಸಮಯದಲ್ಲಿ ಸಾರ್ವಜನಿಕರ ವಾಟ್ಸಪ್ ಗ್ರೂಪ್ ಮತ್ತು ಎಸ್ಎಂಎಸ್ ಮೂಲಕ ಶೇರ್ ಹಾಶ್ ಅಪ್ಲಿಕೇಷನ್ ಇನ್ಸ್ಟಾಲ್ ಮಾಡುಕೊಳ್ಳುವಂತೆ ಮಾಡಿ ಕಿರಾತಕರು ಹೀಲಿಯಂ ಕ್ರಿಪ್ಟೋ ಟೋಕನ್ ನೀಡುವುದಾಗಿ ನಂಬಿಸಿದ್ದಾರೆ. ಇದನ್ನು ನಂಬಿದವರಿಂದ ಗೂಗಲ್ ಪೇ, ಪೋನ್ ಪೇ ಮೂಲಕ ಹಣವನ್ನು ಹೂಡಿಕೆ ಮಾಡಿಸಿಕೊಂಡಿದ್ದಾರೆ.
ವಿವಿಧ ಕಂಪನಿಗಳ ಹೆಸರಿನಲ್ಲಿ ಉಳಿತಾಯ ಬ್ಯಾಂಕ್ ಖಾತೆ ತೆರೆದು ಆ ಬ್ಯಾಂಕುಗಳಿಗೆ ಗೂಗಲ್ ಪೇ, ಪೋನ್ ಪೇ ಮೂಲಕ ಹಣ ಹೂಡಿಕೆ ಮಾಡಿಸಿಕೊಂಡಿದ್ದಾರೆ. ಅದರಲ್ಲೂ ಕೊರೊನಾ ಲಾಕ್ ಡೌನ್ ಸಮಯದಲ್ಲಿ ಸುಲಭವಾಗಿ ಹಣ ಮಾಡುವ ಉದ್ದೇಶದಿಂದ ಲಕ್ಷಂತರ ಮಂದಿ ಡೌನ್ಲೋನ್ ಮಾಡಿಕೊಂಡು ಹೂಡಿಕೆ ಮಾಡಿದ್ದಾರೆ.
Cotata technology pvt ltd, Siraleen tech solution pvt ltd, Nileen infotech pvt ltd, Moltres exim pvt ltd, Crampington technology pvt ltd ಕಂಪನಿ ಹೆಸರಿನಲ್ಲಿ ಹಣ ಸ್ವೀಕರಿಸಿದ್ದಾರೆ. ಟಾರ್ಗೆಟ್ ಹಣ ಕೈ ಸೇರಿದ ಬಳಿಕ ಶೇರ್ ಹಾಷ್ ಆಪ್ ತಾಂತ್ರಿಕವಾಗಿ ದೋಷಪೂರಿತವಾಗಿದೆ. 2022 ಜನವರಿ 11 ರ ವೇಳೆಗೆ ಶೇರ್ ಹಾಷ್ ದೋಷಮುಕ್ತ ವ್ಯವಸ್ಥೆ ಹೊಂದಿದ್ದು, ಕೆಲವೇ ದಿನಗಳಲ್ಲಿ ದೋಷ ಸರಿಪಡಿಸಲಾಗುವುದು ಎಂದು ಹೇಳಲಾಗಿತ್ತು. ಎಷ್ಟು ದಿನವಾದರೂ ಪರಿಷ್ಕೃತ ಆ್ಯಪ್ ಬಿಡುಗಡೆಯಾಗಲಿಲ್ಲ. ಬಳಿಕ ವಿವಿಧ ಬ್ಯಾಂಕ್ ಖಾತೆಗಳಿಗೆ ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಅವಕಾಶ ಮಾಡಿಕೊಡಲಾಗುವುದು ಎಂದು ಕಂಪನಿ ಸೂಚಿಸಿತ್ತು. ವಾಸ್ತವದಲ್ಲಿ ShareHash ಅಪ್ಲಿಕೇಷನ್ನು ಗೂಗಲ್ ಪ್ಲೇ ಸ್ಟೋರಿನಿಂದ ತೆಗೆದು ಹಾಕಲಾಗಿದೆ.
ಹೀಲಿಯಂ ಕ್ರಿಪ್ಟೋ ಟೋಕನ್ ಹೆಚ್ಚಿನ ಲಾಭಾಂಶ ನೀಡದೇ ವಂಚನೆ ಮಾಡಿದ ಬಗ್ಗೆ ಸಾರ್ವಜನಿಕರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರನ್ನಾಧಿರಿಸಿ ಸಿಸಿಬಿ ಪೊಲೀಸ್ ಇನ್ಸ್ಪೆಕ್ಟರ್ ಬಿ.ಎಸ್. ಅಶೋಕ್ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತ ಪ್ರಕರಣ ಸಿಸಿಬಿ ಸೈಬರ್ ಕ್ರೈಂ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ. ಸಿಸಿಬಿ ಪೊಲೀಸರ ಕಾರ್ಯಾಚರಣೆಯನ್ನು ಬೆಂಗಳೂರು ನಗರ ಪೊಲೀಸ್ ಆಯುಕ್ತ ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಸಿಸಿಬಿ ಕಾರ್ಯಾಚರಣೆ:
ಇನ್ನು ಜೆ.ಪಿ. ನಗರದ ನಿವಾಸಿ ರಾಜೀವ್ ಎಂಬುವರು ಕ್ರಿಪ್ಟೋ ಕರೆನ್ಸಿ ಆಸೆಗೆ ಬಿದ್ದು ತನ್ನ ಸ್ನೇಹಿತರ ಮೂಲಕ 78 ಲಕ್ಷ ರೂ. ಹೂಡಿಕೆ ಮಾಡಿ ಮೋಸ ಹೋಗಿದ್ದರು. ಸಾವಿರಾರು ಮಂದಿ ಮೋಸ ಹೋಗಿದ್ದರೂ ಯಾದರೂ ದೂರು ನೀಡಲು ಮುಂದಾಗಿರಲಿಲ್ಲ. ತನ್ನ ಸ್ನೇಹಿತರಾದ ಆದರ್ಶ ಸಂಜೀವ್ ನಾಯ್ಕ, ಸುಧೀರ್, ವೆಂಕಟೇಶ್ ದೇವರಾಜ್, ಹರ್ಷ, ಮನೋಜ್ ಕುಮಾರ್, ಹರೀಶ್ ಕುಮಾರ್ ಮತ್ತಿತರರಿಗೆ Cotata ಟೆಕ್ನಾಲಜೀಸ್, ಜವೇರ್ ಪ್ರವೀಣ್, ಕೃಷ್ಣ, ಸುಹಾಸ್, ಮುರಳಿ, ಇಮ್ರಾನ್ ರಿಯಾಸ್ ಮತ್ತಿತರರ ವಿರುದ್ಧ ಸಿಟಿ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ದೂರು ದಾಖಲಾಗಿ ನಾಲ್ಕು ತಿಂಗಳ ಬಳಿಕ ಸಿಸಿಬಿ ಪೊಲೀಸರು ಈ ಕೇಸನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.