ಬೆಂಗಳೂರು ಪೊಲೀಸ್ ಬ್ಯಾಂಕ್ ಸಾಲ ಕ್ಲಿಯರ್ ಹೆಸರಿನಲ್ಲಿ ದೋಖಾ: ನಯ ವಂಚಕರ ಬಂಧನ
ಬೆಂಗಳೂರು, ಜು. 06: ನೀವು ಬ್ಯಾಂಕ್ ಸಾಲ ಮಾಡಿದ್ದೀರಾ? ಸಾಲ ಕಟ್ಟದೇ ಎನ್ಪಿಎ ಸಾಲಿಗೆ ಸೇರಿದೆಯಾ? ನಿಮ್ಮ ಬ್ಯಾಂಕ್ ಲೋನ್ ನ್ನು ಕಡಿಮೆ ಹಣಕ್ಕೆ ಇತ್ಯರ್ಥ ಮಾಡುತ್ತೇವೆ ಎಂದು ಹೇಳಿ ಯಾರಾದ್ರೂ ಕರೆ ಮಾಡಿಕೊಂಡು ಬಂದ್ರೆ ಹುಷಾರ್.
ಎನ್ಪಿಎ ಸಾಲಿಗೆ ಸೇರಿದ ಬ್ಯಾಂಕ್ ಸಾಲವನ್ನು ಕಡಿಮೆ ಹಣಕ್ಕೆ ಸೆಟ್ಲ್ ಮಾಡಿಕೊಡುವುದಾಗಿ ನಂಬಿಸಿ ಲಕ್ಷ ಲಕ್ಷ ಮೋಸ ಮಾಡುವ ದಗಲ್ ಬಾಜಿಗಳು ಹುಟ್ಟಿಕೊಂಡಿದ್ದಾರೆ. ಹೌದು. ಇದೇ ಸೋಗಿನಲ್ಲಿ ವ್ಯಕ್ತಿಯೊಬ್ಬರಿಂದ 82 ಲಕ್ಷ ರೂ. ಪಡೆದು ವಂಚಿಸಿದ್ದ ಇಬ್ಬರು ವಂಚಕರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ರಾಘವ್ ಲಾಲ್ ಮತ್ತು ಪಿಳ್ಳೈ ಬಂಧಿತ ಆರೋಪಿಗಳು.
ಕೊರೊನಾ ಕಾರಣ: ಎಲ್ಐಸಿ ಎನ್ಪಿಎ ಹೆಚ್ಚಳ
ಕೇರಳ ಮೂಲದ ಈ ಇಬ್ಬರು ವಂಚಕರು ಹಲವು ಬ್ಯಾಂಕ್ ಸಿಬ್ಬಂದಿಗಳ ಜತೆ ಶಾಮೀಲಾಗಿ ಬ್ಯಾಂಕ್ ಸಾಲ ಇತ್ಯರ್ಥ ಮಾಡುವ ಸೋಗಿನಲ್ಲಿ ಹಣ ಪಡೆದು ವಂಚಿಸುತ್ತಿದ್ದರು. ಸತೀಶನ್ ಎಂಬುವರು ಬ್ಯಾಂಕ್ನಲ್ಲಿ ಐದು ಕೋಟಿ ರೂ. ಸಾಲ ಪಡೆದಿದ್ದರು. ಹಣ ವಾಪಸು ಕೊಡಲು ಸಾಧ್ಯವಾಗಿರಲಿಲ್ಲ. ಸಾಲ ಖಾತೆ ಎನ್ಪಿಎ ವರ್ಗಕ್ಕೆ ಸೇರಿತ್ತು.
ಬ್ಯಾಂಕ್ ಸಿಬ್ಬಂದಿಯ ಸಂಪರ್ಕದಿಂದ ಸತೀಶನ್ ಸೇರಿದಂತೆ ಎನ್ಪಿಎ ವರ್ಗಕ್ಕೆ ಸೇರಿದ ಸಾಲಗಾರರ ಪಟ್ಟಿಯನ್ನು ಪಡೆದಿದ್ದ ವಂಚಕರು, ಕರೆ ಮಾಡಿ ನಿಮ್ಮದು ಇಂತಹ ಬ್ಯಾಂಕ್ನಲ್ಲಿ ಇಷ್ಟು ಸಾಲವಿದೆ. ನೀವು ಸಾಲ ಪಡೆದ ಬ್ಯಾಂಕ್ನಲ್ಲಿ ನಮಗೆ ಗೊತ್ತಿರುವ ಅಧಿಕಾರಿಗಳು ಇದ್ದಾರೆ. ಅವರ ಮೂಲಕ ನಿಮ್ಮ ಬ್ಯಾಂಕ್ ಸಾಲವನ್ನು ಕಡಿಮೆ ಹಣಕ್ಕೆ ಕ್ಲಿಯರ್ ಮಾಡುವುದಾಗಿ ನಂಬಿಸುತ್ತಿದ್ದರು. ಸಾಲದ ಖಾತೆ ರದ್ದು ಮಾಡುವ ಸೋಗಿನಲ್ಲಿ ಸತೀಶ್ ಬಳಿ 82 ಲಕ್ಷ ಪಡೆದಿದ್ದರು.
ಆದರೆ ಆತನ ಬ್ಯಾಂಕ್ ಸಾಲ ಇತ್ಯರ್ಥ ವಾಗಿರಲಿಲ್ಲ. ಹೀಗೆ ವಂಚನೆಗೆ ಒಳಗಾದ ಸತೀಶನ್ ಜಯನಗರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಹಿನ್ನೆಲೆಯಲ್ಲಿ ಇಬ್ಬರು ನಯವಂಚಕರನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಹಲವು ಬ್ಯಾಂಕ್ ಸಿಬ್ಬಂದಿ ಶಾಮೀಲಾಗಿರುವುದು ಗೊತ್ತಾಗಿದೆ. ಅಲ್ಲದೇ ಅನೇಕ ಮಂದಿಗೆ ವಂಚನೆ ಮಾಡಿರುವುದು ಗೊತ್ತಾಗಿದೆ. ಈ ಕುರಿತು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.