ಚರಣ್ ಕೋ – ಆಪ್ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯಕ್ಕೆ ಚಾಲನೆ
ಬೆಂಗಳೂರು ಅಕ್ಟೋಬರ್ 21: ನಗರದ ಬಸವನಗುಡಿಯಲ್ಲಿನ ಚರಣ್ ಸೌಹಾರ್ದ ಕೋ- ಆಫರೇಟಿವ್ ಬ್ಯಾಂಕಿನ ವತಿಯಿಂದ ರಾಜ್ಯದಲ್ಲೇ ಮೊದಲ ಬಾರಿಗೆ ಚರಣ್ ಸಹಕಾರ ಬ್ಯಾಂಕು ತನ್ನ ಗ್ರಾಹಕರಿಗೆ ಹೊರತಂದಿರುವ ಮೊಬೈಲ್ ಬ್ಯಾಂಕಿಂಗ್ ಸೌಲಭ್ಯವನ್ನು ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮನು ಬಳಿಗಾರ್ ಉದ್ಘಾಟಿಸಿದರು.
ನಂತರ ಮಾತನಾಡಿ, ಆಧುನಿಕ ಜಗತ್ತಿನ ವೇಗದ ತಂತ್ರಜ್ಞಾನವನ್ನು ಸಮರ್ಪಕವಾಗಿ ಅಳವಡಿಕೆಯಿಂದ ಮಾತ್ರ ಬ್ಯಾಂಕ್ನಂತಹ ಸಂಸ್ಥೆಗಳು ಅಭಿವೃದ್ದಿ ಹೊಂದಲು ಸಾಧ್ಯ ಎಂದು ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮನು ಬಳಿಗಾರ್ ಅಭಿಪ್ರಾಯಪಟ್ಟರು.
ಜಗತ್ತು ಕೊರೋನಾದಿಂದ ತೀವ್ರ ಸಂಕಷ್ಟಕ್ಕೆ ಈಡಾಗಿದೆ. ಇಂತಹ ದುರಿತ ಕಾಲದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳೊಂದಿಗೆ ಸ್ಪರ್ಧೆ ನಡೆಸುವಂತಹ ಸಹಕಾರ ಬ್ಯಾಂಕುಗಳು ಆಧುನಿಕ ತಂತ್ರಜ್ಞಾನನ್ನು ಅಳವಡಿಸಿಕೊಳ್ಳುವ ಮೂಲಕ ಗ್ರಾಹಕರುಗಳಿಗೆ ಉತ್ತಮ ಸೌಲಭ್ಯ ಒದಗಿಸಲು ಮುಂದಾಗುತ್ತಿರುವುದು ಬಹಳ ಸಂತಸದ ವಿಷಯವಾಗಿದೆ. ಆಧುನಿಕ ತಂತ್ರಜ್ಞಾನಗಳ ಅಳವಡಿಕೆಯಿಂದ ಬ್ಯಾಂಕಿನ ಹಲವಾರು ಸೌಲಭ್ಯಗಳು ಗ್ರಾಹಕರ ಕೈ ತುದಿಯಲ್ಲಿಯೇ ಲಭ್ಯವಾಗುವಂತೆ ಮಾಡಲಾಗಿದೆ. ಆಧುನಿಕತೆಯನ್ನು ಅಳವಡಿಸಿಕೊಳ್ಳುವುದು ಎಲ್ಲಾ ಸಂಸ್ಥೆಗಳಿಗೂ ಅನಿವಾರ್ಯ. ಜಗತ್ತಿನ ವೇಗದ ಜೊತೆ ಹೆಜ್ಜೆ ಹಾಕದಿದ್ದಲ್ಲಿ ಸಂಸ್ಥೆಗಳು ಅಭಿವೃದ್ದಿ ಸಾಧಿಸುವುದು ಸಾಧ್ಯವಿಲ್ಲ ಎಂದು ಹೇಳಿದರು.
ಚರಣ್ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ಬಿ.ವಿ ದ್ವಾರಕಾನಾಥ್ ಮಾತನಾಡಿ, ನಮ್ಮ ಗ್ರಾಹಕರ ಹೊಸದನ್ನ ಹಾಗೂ ಆಧುನಿಕ ತಂತ್ರಜ್ಞಾನವನ್ನು ನೀಡುವುದು ನಮ್ಮ ಪ್ರಮುಖ ಆದ್ಯತೆ ಆಗಿದೆ. ಈ ಮೊಬೈಲ್ ಬ್ಯಾಂಕಿಂಗ್ ಸೇವೆಯ ಮೂಲಕ ಗ್ರಾಹಕರು 24 ತಾಸುಗಳ ಕಾಲವೂ ಕೂಡಾ ತಮ್ಮ ಮೊಬೈಲ್ ನಿಂದಲೇ ಬ್ಯಾಲೇನ್ಸ್ ನ ಬಗ್ಗೆ ಮಾಹಿತಿ, ಮಿನಿ ಸ್ಟೇಟ್ಮೆಂಟ್, ಹಣ ವರ್ಗಾವಣೆ, ಹತ್ತಿರದ ಏಟಿಎಂ ಗಳನ್ನು ಹುಡುಕುವಂತಹ ಹಲವಾರು ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
Recommended Video
ಕಾರ್ಯಕ್ರಮದಲ್ಲಿ ಎಸ್ಐಆರ್ಸಿ ದ ಇನ್ಸಿಟ್ಯೂಟ್ ಆಫ್ ಚಾರ್ಟರ್ಡ ಅಕೌಂಟಂಟ್ಸ್ ಆಫ್ ಇಂಡಿಯಾದ ಅಧ್ಯಕ್ಷರಾದ ಪಂಪಣ್ಣ ಬಿ ಇ, ಚರಣ್ ಸೌಹಾರ್ದ ಬ್ಯಾಂಕಿನ ಸಂಸ್ಥಾಪಕ ಅಧ್ಯಕ್ಷರಾದ ಬಿ.ವಿ ದ್ವಾರಕಾನಾಥ್ ಹಾಗೂ ನಿರ್ದೇಶಕರುಗಳು ಹಾಗೂ ಬೆಂ ಕೋ ಶ್ರೀನಿವಾಸ್ ಅವರು ಉಪಸ್ಥಿತರಿದ್ದರು.