'ಕಳೆದುಕೊಂಡಿದ್ದು ಸಂವಹನವನ್ನ, ಭರವಸೆಯನ್ನಲ್ಲ!' ಇಸ್ರೋ ಬೆನ್ನಿಗೆ ನಿಂತ ಭಾರತ
Recommended Video
ಬೆಂಗಳೂರು, ಸೆಪ್ಟೆಂಬರ್ 7: ಸಮಸ್ತ ಭಾರತೀಯರು ಉಸಿರು ಬಿಗಿಹಿಡಿದು ಕಾಯುತ್ತಿದ್ದ ಚಂದ್ರಯಾನ-2 ಕೊನೆಯ ನಿರ್ಣಾಯಕ ಸಮಯದಲ್ಲಿ ಸಂಪರ್ಕ ಕಳೆದುಕೊಂಡು ನಿರಾಸೆ ಮೂಡಿಸಿದರೂ, ಇಸ್ರೋ ವಿಜ್ಞಾನಿಗಳು ಭಾರತೀಯರ ಹೃದಯ ಗೆದ್ದಿದ್ದಾರೆ.
ಅವರ ಅವಿರತ ಪರಿಶ್ರಮ, ಚಂದ್ರಯಾನ-2 ರ ಹಿಂದಿದ್ದ ಬೆವರಿಗೆ ಇಡೀ ದೇಶವೂ ಅಭಿನಂದನೆ ಸಲ್ಲಿಸಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸೇರಿದಂತೆ ಗಣ್ಯರು ಇಸ್ರೋ ಎಂದಿಗೂ ಭಾರತದ ಹೆಮ್ಮೆ ಎಂದಿದ್ದಾರೆ.
Chandrayaan 2 Moon Landing Live Updates: ಇಸ್ರೋದೊಂದಿಗೆ ಸಂಪರ್ಕ ಕಡಿದುಕೊಂಡ ವಿಕ್ರಂ ಲ್ಯಾಂಡರ್
'ಕೊನೆಯ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿರಬಹುದು. ಆದರೆ ನಿಮ್ಮೊಂದಿಗೆ ಇಡೀ ದೇಶವೂ ಇದೆ. ಈ ಸಾಧನೆಯೇನು ಕಡಿಮೆಯಲ್ಲ. ನಿಮ್ಮ ಕಾರ್ಯತತ್ಪರತೆಗೆ ನಮ್ಮ ಸಲಾಂ, ನೀವು ನಮ್ಮ ಹೃದಯ ಗೆದ್ದಿದ್ದೀರಿ' ಎಂದು ಭಾರತೀಯರು ಇಸ್ರೋ ಸಾಧನೆಗೆ ಬೆನ್ತಟ್ಟಿದ್ದಾರೆ.
ಧೃತಿಗೆಡಬೇಡಿ, ದೇಶವೇ ನಿಮ್ಮೊಂದಿಗಿದೆ: ಇಸ್ರೋಗೆ ಧೈರ್ಯ ಹೇಳಿದ ಮೋದಿ
ಸೆಪ್ಟೆಂಬರ್ 7 ರ ಬೆಳಗ್ಗಿನ ಜಾವ 1:37 ರ ವೇಳೆಗೆ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ಪ್ರಕ್ರಿಯೆಯನ್ನು ನಿರೀಕ್ಷೆಯಂತೆಯೇ ಆರಂಭಿಸಿತ್ತು. 1:49 ರ ವೇಳೆಗೆ ರಫ್ ಬ್ರೇಕಿಂಗ್ ಫೇಸ್ ಅನ್ನು ಯಶಸ್ವಿಯಾಗಿ ಪೂರೈಸಿದ ನಂತರ 2.05 ರ ಹೊತ್ತಿಗೆ ಆರ್ಬಿಟರ್ ನಿಂದ ಬೇರ್ಪಟ್ಟಿದ್ದ ವಿಕ್ರಂ ಲ್ಯಾಂಡರ್ ನಿಂದ ಡೇಟಾಗಳನ್ನುಸ್ವೀಕರಿಸುವುದನ್ನು ಆರಂಭಿಸಿದ ನೌಕೆ, ಇದ್ದಕ್ಕಿದ್ದಂತೆ ಸಂವಹನ ಕಳೆದುಕೊಂಡಿತ್ತು.
ರಾಷ್ಟ್ರಪತಿಗಳಿಂದ ಅಭಿನಂದನೆ
ಚಂದ್ರಯಾನ2 ರ ಮೂಲಕ ಇಸ್ರೋದ ಇಡೀ ತಂಡ ತಮ್ಮ ಅಸಾಧಾರಣ ಕಾರ್ಯತತ್ಪರತೆ ಮತ್ತು ಧೈರ್ಯವನ್ನು ತೋರಿಸಿದೆ. ಈ ದೇಶ ಇಸ್ರೋ ಸಾಧನೆಗೆ ಹೆಮ್ಮೆ ಪಡುತ್ತದೆ. ಒಳಿತಾಗುತ್ತದೆ ಎಂಬ ಭರವಸೆ ಇದೆ- ರಾಮನಾಥ್ ಕೋವಿಂದ್, ರಾಷ್ಟ್ರಪತಿ
ನಿಮ್ಮ ಶ್ರಮ ವ್ಯರ್ಥವಾಗಿಲ್ಲ ಎಂದ ರಾಹುಲ್ ಗಾಂಧಿ
"ಚಂದ್ರಯಾನ-2 ರ ಬೆಲೆಕಟ್ಟಲಾಗದ ಸಾಧನೆಗಾಗಿ ಇಸ್ರೋ ತಂಡದ ಎಲ್ಲ ಸದಸ್ಯರಿಗೂ ಅಭಿನಂದನೆಗಳು. ನಿಮ್ಮ ತ್ಯಾಗ, ಉತ್ಸಾಹ ಪ್ರತಿಯೊಬ್ಬರಿಗೂ ಸ್ಫೂರ್ತಿ, ನಿಮ್ಮ ಶ್ರಮ, ಕೆಲಸ ವ್ಯರ್ಥವಾಗಿಲ್ಲ. ಭಾರತ ಇನ್ನೆಷ್ಟೋ ಅಂತರಿಕ್ಷ ಯೋಜನೆಗಳಿಗೆ ಇಂದು ಭದ್ರ ತಳಪಾಯ ಒದಗಿಸಿದೆ"- ರಾಹುಲ್ ಗಾಂಧಿ, ಕಾಂಗ್ರೆಸ್ ಮುಖಂಡ
ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂದ ಅಮಿತ್ ಶಾ
ಚಂದ್ರಯಾನ-2 ಯೋಜನೆಯನ್ನು ಇಲ್ಲಿಯವರೆಗೆ ಕೊಂಡೊಯ್ದ ಇಸ್ರೋ ಬಗ್ಗೆ ಪ್ರತಿ ಭಾರತೀಯರಿಗೂ ಹೆಮ್ಮೆ ಇದೆ. ಇಸ್ರೋದ ಕಠಿಣ ಪರಿಶ್ರಮಿ ಮತ್ತು ಕಾರ್ಯತತ್ಪರ ವಿಜ್ಞಾನಿಗಳೊಂದಿಗೆ ಭಾರತ ಬೆನ್ನೆಲುಬಾಗಿ ನಿಂತಿದೆ. ಅವರ ಭವಿಷ್ಯದ ಸಾಧನೆಗಳಿಗೆ ನಮ್ಮ ಶುಭ ಹಾರೈಗಳು - ಅಮಿತ್ ಶಾ, ಕೇಂದ್ರ ಗೃಹಸಚಿವ
ಇಸ್ರೋಕ್ಕೆ ಧೈರ್ಯ ತುಂಬಿದ ಭಾರತ
"ನಾವು ಕಳೆದುಕೊಂಡಿದ್ದು ಸಂವಹನವನ್ನ, ಭರವಸೆಯನ್ನಲ್ಲ" ಎಂದು ರಾಜೇಶ್ ನಲ್ಲಯ ಎಂಬುವವರು ಟ್ವೀಟ್ ಮಾಡಿದ್ದರೆ, ಮತ್ತೆ ಹಲವರು ಇದು ಸೋಲಲ್ಲ, ಹಿನ್ನಡೆಯಷ್ಟೆ, ನಾವು ಮತ್ತೆ ಪುಟಿದೇಳುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ ಇಡೀ ಭಾರತವೂ ಇಸ್ರೋ ವಿಜ್ಞಾನಿಗಳಿಗೆ ಬೆನ್ನೆಲುಬಾಗಿ ನಿಂತಿದೆ.