ಗಾಂಜಾ ಸಾಂಗ್: ಸಿಸಿಬಿ ಪೊಲೀಸರ ಕ್ಷಮೆ ಕೇಳಿದ ಚಂದನ್ ಶೆಟ್ಟಿ
ಬೆಂಗಳೂರು, ಆಗಸ್ಟ್ 28: ಮಾದಕ ವಸ್ತುಗಳ ಸೇವನೆಗೆ ಉತ್ತೇಜನೆ ನೀಡುವ ಹಾಡು ಹಾಡಿ ಸಿಸಿಬಿ ಪೊಲೀಸರ ಕೆಂಗಣ್ಣಿಗೆ ಗುರಿ ಆಗಿದ್ದ ಕನ್ನಡ rapper ಚಂದನ್ ಶೆಟ್ಟಿ ಕ್ಷಮೆ ಕೇಳಿದ್ದಾರೆ.
ಚಂದನ್ ಶೆಟ್ಟಿ 2015ರಲ್ಲಿ ಹಾಡಿದ್ದ 'ಗಾಂಜಾ ಸಾಂಗ್'ನಲ್ಲಿ ಮಾದಕ ವ್ಯಸನಕ್ಕೆ ಪೂರಕವಾದ ಸಾಹಿತ್ಯ ಇರುವುದು ಸಿಸಿಬಿ ಪೊಲೀಸರ ಕಣ್ಣು ಕೆಂಪಗಾಗಿಸಿತ್ತು. ಹಾಗಾಗಿ ಸಿಸಿಬಿಯ ಮಹಿಳೆ ಮತ್ತು ಮಾದಕ ವಸ್ತು ವಿಭಾಗದ ಪೊಲೀಸರು ಚಂದನ್ ಶೆಟ್ಟಿಗೆ ಸಮನ್ಸ್ ನೀಡಿದ್ದರು.
ಗಾಂಜಾ ಸಾಂಗ್ ಹಾಡಿದ್ದ ಚಂದನ್ ಶೆಟ್ಟಿಗೆ ಪೊಲೀಸರ ಸಮನ್ಸ್
ಮಾದಕ ವಸ್ತು ಸೇವನೆಗೆ ಪ್ರೇರಿಪಿಸುವಂತಹಾ ಹಾಡು ಹಾಡಿದ ನಿಮ್ಮ ಮೇಲೆ ಪ್ರಕರಣ ದಾಖಲಿಸಲಾಗುವುದು ಈ ಕುರಿತು ವಿಚಾರಣೆ ಎದುರಿಸಿ ಎಂದು ಸಿಸಿಬಿ ಪೊಲೀಸರು ಚಂದನ್ ಶೆಟ್ಟಿಗೆ ನೊಟೀಸ್ ನೀಡಿದ್ದರು.
ಅದರಂತೆ ಇಂದು ಸಿಸಿಬಿ ಕಚೇರಿಗೆ ಭೇಟಿ ನೀಡಿದ್ದ ಚಂದನ್ ಶೆಟ್ಟಿ ಪೊಲೀಸರ ಕ್ಷಮೆ ಕೋರಿದ್ದಾರೆ. ಜವಾಬ್ದಾರಿ ಮರೆತು ಹಾಡು ಹಾಡಿದ್ದೇನೆ ಎಂದು ಹೇಳಿದ್ದಾರೆ.
ಗಾಂಜಾ ಸಾಂಗ್ ಎಂದೇ ಯೂಟ್ಯೂಬ್ನಲ್ಲಿ ಖ್ಯಾತವಾಗಿರುವ ಆ ಹಾಡನ್ನು 2015ರಲ್ಲಿ ಚಿತ್ರೀಕರಣವಾದ 'ಅಂತ್ಯ' ಚಿತ್ರಕ್ಕಾಗಿ ಚಂದನ್ ಶೆಟ್ಟಿ ಹಾಡಿದ್ದರು. ಹಾಡಿನ ಸಾಹಿತ್ಯವನ್ನು ಮುತ್ತು ಎನ್ನುವವರು ಬರೆದಿದ್ದರು. ಆದರೆ ಆ ಚಿತ್ರ ಬಿಡುಗಡೆ ಆಗಲೇ ಇಲ್ಲ. ಆದರೆ ಅದು ಯೂಟ್ಯೂಬ್ನಲ್ಲಿ ಭಾರಿ ವೈರಲ್ ಆಗಿತ್ತು.
ಮಂಗಳೂರಿನಲ್ಲಿ ಅಕ್ರಮ ಗಾಂಜಾ ಮಾರಾಟ: ಓರ್ವನ ಬಂಧನ
ಧಮ್ಮು ಬಿಡಬೇಡ, ಅದೇ ನಮಗೆ 'ಬಿಯರ್ ಎತ್ತೋದು ಹಳತಾಗಿದೆ, ಗಾಂಜಾ ಎಳೆಯೊದು ಹೊಸದಾಗಿದೆ', 'ಭಂಗಿ ಎಳಕೊಂಡು ನಗುತಾ ಇರು', 'ಶಿವನು ಹಿಡಿದರೆ ಭಂಗಿಯಂತೆ, ನಾವು ಹಿಡಿದರೆ ಕಂಬಿ ಅಂತೆ', 'ಬಿಡಬೇಡ ಧಮ್ಮು, ನಮ್ಮಯ ಪಾಲಿಗೆ ಇದೇ ವಿಸ್ಕಿ, ರಮ್ಮು' ಎಂಬ ಸಾಲುಗಳು ಹಾಡಿನಲ್ಲಿದೆ.