ಬೆಂಗಳೂರಿನಲ್ಲಿ 'ಸಂಪೂರ್ಣ ಲಾಕ್ ಡೌನ್' ಸಾಧ್ಯತೆ ತೀರಾ ಕಮ್ಮಿ: ಕಾರಣಗಳು ಐದು
ಆಡಳಿತ ಮತ್ತು ವಿರೋಧ ಪಕ್ಷಗಳಿಗೆ ಸದ್ಯ ಮುಂದಿರುವ ಪ್ರಮುಖ ವಿಷಯವೇನಂದರೆ ಅದು ಕೊರೊನಾ ನಿಯಂತ್ರಣ ಬರುವುದಕ್ಕಿಂತಲೂ ಹೆಚ್ಚಾಗಿ ಉಪ ಚುನಾವಣೆ ಎನ್ನುವುದು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿರುವ ಮಾತು.
ಈ ಮಾತಿಗೆ ಪುಷ್ಟಿ ನೀಡುವಂತೆ ಸರ್ವಪಕ್ಷಗಳ ಸಭೆಯನ್ನು ಮುಖ್ಯಮಂತ್ರಿ ಯಡಿಯೂರಪ್ಪನವರು ಇದೇ ಭಾನುವಾರದಂದು (ಏಪ್ರಿಲ್ 18) ಕರೆದಿದ್ದಾರೆ. ಏಪ್ರಿಲ್ 17ಕ್ಕೆ ಉಪ ಚುನಾವಣೆಯ ಮತದಾನ ನಡೆಯಲಿದೆ. "ಸರ್ವಪಕ್ಷಗಳ ಸಭೆಗೆ ವಿರೋಧ ಪಕ್ಷದವರನ್ನು ಆಹ್ವಾನಿಸಿದ್ದೇನೆ, ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ" ಎಂದು ಸಿಎಂ ಬಿಎಸ್ವೈ ಹೇಳಿದ್ದಾರೆ.
ಯಾವುದೇ ಕಾರಣಕ್ಕೂ ಲಾಕ್ಡೌನ್ ಮಾಡುವುದಿಲ್ಲ; ನಿರ್ಮಲಾ ಸೀತಾರಾಮನ್ ಸ್ಪಷ್ಟನೆ
ಸದ್ಯ, ರಾಜ್ಯದೆಲ್ಲಡೆ ಅದರಲ್ಲೂ ಪ್ರಮುಖವಾಗಿ ರಾಜಧಾನಿ ಬೆಂಗಳೂರಿನಲ್ಲಿ ಬಿಸಿಬಿಸಿ ಚರ್ಚೆಯ ವಿಷಯ ಏನಂದರೆ ಅದು ಲಾಕ್ ಡೌನ್. ಬೆಂಗಳೂರು ಸಂಪೂರ್ಣ ಲಾಕ್ ಡೌನ್ ಎನ್ನುವ ತರಹೇವಾರಿ ಸುದ್ದಿಯನ್ನು ಮಾಧ್ಯಮಗಳು ಬಿತ್ತರಿಸುತ್ತಿರುವುದು ಸಾರ್ವಜನಿಕರ ನೆಮ್ಮದಿಗೆ ಭಂಗ ತರುತ್ತಿದೆ.
ಲಾಕ್ ಡೌನ್ ವಿಚಾರದಲ್ಲಿ ಸರಕಾರ ಕೂಡಾ ಗಂಟೆಗೊಂದು ಹೇಳಿಕೆ ನೀಡುತ್ತಿರುವುದು ಸಾರ್ವಜನಿಕರನ್ನು ಇನ್ನೂ ಗೊಂದಲಕ್ಕೀಡಾಗುವಂತೆ ಮಾಡುತ್ತಿದೆ. ಆದರೂ, ಸಂಪೂರ್ಣ ಲಾಕ್ ಡೌನ್ ಅಂಥ ಕಠಿಣ ನಿರ್ಧಾರವನ್ನು ಬಿಎಸ್ವೈ ಸರಕಾರ ತೆಗೆದುಕೊಳ್ಳುವ ಸಾಧ್ಯತೆ ತೀರಾ ಕಮ್ಮಿ. ಅದಕ್ಕೆ ಐದು ಕಾರಣಗಳು:
ಲಾಕ್ಡೌನ್ ಇಲ್ಲ, ಹದಿನೈದು ದಿನ ಶಿಸ್ತಿನ ಕರ್ಫ್ಯೂ: ಸಿಎಂ ಉದ್ಧವ್ ಠಾಕ್ರೆ
ಮಹಾರಾಷ್ಟ್ರ ಸರಕಾರ ಲಾಕ್ ಡೌನ್ ಬದಲು ಸೆಕ್ಷನ್ 144
ಇಡೀ ದೇಶದಲ್ಲಿ ಏನು ಕೊರೊನಾ ಹೊಸ ಕೇಸ್ಗಳು ಹುಟ್ಟುತ್ತಿವೆಯೋ, ಸಾವು ಸಂಭವಿಸುತ್ತಿದೆಯೋ ಅದರಲ್ಲಿ ಸಿಂಹ ಪಾಲು ಮಹಾರಾಷ್ಟ್ರದ್ದು. ಇತ್ತೀಚಿನ ದಿನಗಳಲ್ಲಿ ಸರಾಸರಿ ಐವತ್ತು ಸಾವಿರಕ್ಕೂ ಹೆಚ್ಚು ಕೇಸ್ ಗಳು ಅಲ್ಲಿಂದ ಬರುತ್ತಿದೆ. ತೀರಾ ಮೆಡಿಕಲ್ ಎಮರ್ಜೆನ್ಸಿಯಲ್ಲಿ ಆ ರಾಜ್ಯವಿದ್ದರೂ, ಸಂಪೂರ್ಣ ಲಾಕ್ ಡೌನ್ ಬದಲು, ಸೆಕ್ಷನ್ 144 ಸೇರಿದಂತೆ ಕಟ್ಟುನಿಟ್ಟಿನ ಕ್ರಮಕ್ಕೆ ಮಹಾರಾಷ್ಟ್ರ ಸರಕಾರ ಮುಂದಾಗಿದೆ. ಹಾಗಾಗಿ, ಬಿಎಸ್ವೈ ಸರಕಾರ ಅದನ್ನೇ ಉದಾಹರಣೆಯಾಗಿ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.
ರಾಜ್ಯದ ಬೊಕ್ಕಸದಲ್ಲಿ ದುಡ್ಡೇ ಇಲ್ಲ
ರಾಜ್ಯದ ಹಣಕಾಸಿನ ಪರಿಸ್ಥಿತಿ ಸರಿಯಿಲ್ಲ, ಇದನ್ನು ಮುಖ್ಯಮಂತ್ರಿಗಳೇ ಹಲವು ಬಾರಿ ಒಪ್ಪಿಕೊಂಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮತ್ತೊಂದು ಸುತ್ತಿನ ಲಾಕ್ ಡೌನ್ಗೆ ರಾಜ್ಯ ಸರಕಾರ ಮುಂದಾಗುವ ಸಾಧ್ಯತೆ ಕಮ್ಮಿ. ಅಬಕಾರಿ ಇಲಾಖೆ ಹೊರತು ಪಡಿಸಿ, ಮಿಕ್ಕ ಯಾವ ಇಲಾಖೆಯೂ ಸರಕಾರ ನೀಡಿರುವ ಟಾರ್ಗೆಟ್ ಅನ್ನು ಇನ್ನೂ ಮುಟ್ಟಲಿಲ್ಲ ಎನ್ನುವುದು ವಾಸ್ತವತೆ.
ಮನೆಯೊಂದಕ್ಕೆ ಹತ್ತು ಸಾವಿರ ಪರಿಹಾರ ನೀಡಿ ಎನ್ನುವ ಅವೈಜ್ಞಾನಿಕ ಕ್ರಮ
ಆಡಳಿತ ಪಕ್ಷದ ಎಲ್ಲಾ ನಿರ್ಧಾರವನ್ನು ಪ್ರಶ್ನಿಸುವುದು, ವ್ಯಂಗ್ಯವಾಡುವುದು ವಿರೋಧ ಪಕ್ಷಗಳ ಕೆಲಸ. ಈಗಾಗಲೇ, ನೈಟ್ ಕರ್ಫ್ಯೂಗೆ ತಕರಾರು ಎತ್ತಿರುವ ಕಾಂಗ್ರೆಸ್ ಮತ್ತು ಜೆಡಿಎಸ್, ಲಾಕ್ ಡೌನ್ ಬಗ್ಗೆ ತೀವ್ರ ವಿರೋಧ ವ್ಯಕ್ತ ಪಡಿಸುತ್ತಿದೆ. ಲಾಕ್ ಡೌನ್ ಒಂದು ವೇಳೆ ಜಾರಿಗೆ ತಂದರೆ, ಮನೆಯೊಂದಕ್ಕೆ ಹತ್ತು ಸಾವಿರ ಪರಿಹಾರ ನೀಡಿ ಎನ್ನುವ ಅವೈಜ್ಞಾನಿಕ ತಾಕೀಕನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಂದಿಟ್ಟಿದ್ದಾರೆ.
ವಾಹನ ಮಾಲೀಕರ ಜೇಬು ಖಾಲಿ
ಈಗ ತಾನೇ ಹೊಸವರುಷ ಯುಗಾದಿ ಸಂಭ್ರಮ ಮುಗಿದಿದೆ. ರಾಜ್ಯದ ಬಹುತೇಕ ದೇವಾಲಯಗಳಲ್ಲಿ ಯುಗಾದಿಯ ನಂತರ ಜಾತ್ರೆ, ಉತ್ಸವ ನಡೆಯುವುದು ಪದ್ದತಿ. ಕರಾವಳಿ ಭಾಗದಲ್ಲೂ ಈ ವೇಳೆ, ಬ್ರಹ್ಮಕಲಶ, ನಾಗಮಂಡಲ, ಕೋಲನೇಮ ನಡೆಯುವ ಸಂಪ್ರದಾಯವೂ ಇದೆ. ಈಗಾಗಲೇ, ಬಿಜೆಪಿಯ ಇಬ್ಬರು ಶಾಸಕರು ನೈಟ್ ಕರ್ಫ್ಯೂ ಬಗ್ಗೆ ಅಸಮಾಧಾನ ವ್ಯಕ್ತ ಪಡಿಸಿದ್ದರು. ರಾಜಕೀಯ ಸಭೆಗೆ ಜನ ಸೇರುವುದು ಸರಿ ಎಂದಾದರೆ, ಧಾರ್ಮಿಕ ಕಾರ್ಯಕ್ರಮಕ್ಕೆ ಜನ ಸೇರುವುದರಲ್ಲಿ ತಪ್ಪೇನು ಎನ್ನುವ ಕೂಗು ಈಗಾಗಲೇ ಜೋರಾಗಿ ಸದ್ದು ಮಾಡುತ್ತಿದೆ. ಇನ್ನು, ಮುಸ್ಲಿಂ ಬಾಂಧವರ ಪವಿತ್ರ ರಂಜಾನ್ ಮಾಸ ಆರಂಭವಾಗಿದೆ.
ಸಂಪೂರ್ಣ ಲಾಕ್ ಡೌನ್ ಮಾಡಲು ಕೇಂದ್ರದ ಅನುಮತಿ ಬೇಕಾಗುತ್ತದೆ
ಸಂಪೂರ್ಣ ಲಾಕ್ ಡೌನ್ ಮಾಡಲು ಕೇಂದ್ರದ ಅನುಮತಿ ಬೇಕಾಗುತ್ತದೆ. ಎಲ್ಲಾ ರಾಜ್ಯಗಳ ಸಿಎಂಗಳ ಜೊತೆಗಿನ ಚರ್ಚೆಯ ನಂತರ ಮೋದಿ ದೇಶವನ್ನು ಉದ್ದೇಶಿಸಿ ಮಾಡಿದ ಭಾಷಣದಲ್ಲಿ ಲಾಕ್ ಡೌನ್ ಬೇಡ ಎನ್ನುವ ಮಾತನ್ನು ಹೇಳಿದ್ದರು. ಮೋದಿ ಜೊತೆಗಿನ ದೂರವಾಣಿ ಸಂಭಾಷಣೆಯ ವೇಳೆ, ಲಾಕ್ ಡೌನ್ ಮಾಡುವಂಥ ಪರಿಸ್ಥಿತಿ ರಾಜ್ಯದಲ್ಲಿ ಇಲ್ಲ ಎನ್ನುವ ಮಾತನ್ನು ಬಿಎಸ್ವೈ ಹೇಳಿದ್ದಾರೆ. ಇವೆಲ್ಲಾ ಅಂಶಗಳನ್ನು ಅವಲೋಕಿಸುವುದಾರೆ, ಬೆಂಗಳೂರಿನಲ್ಲಾಗಲಿ ಅಥವಾ ರಾಜ್ಯದಲ್ಲಾಗಲಿ ಲಾಕ್ ಡೌನ್ ಹೇರುವ ಸಾಧ್ಯತೆ ತೀರಾ ಕಮ್ಮಿ ಎನ್ನಬಹುದು.
Recommended Video