ಉಪಚುನಾವಣಾ ಕಣ: ಶಿವಾಜಿನಗರ ಕ್ಷೇತ್ರದಿಂದ ಟಬು ದಿನೇಶ್ ಗುಂಡೂರಾವ್ ಅಭ್ಯರ್ಥಿ?
ಬೆಂಗಳೂರು, ನವೆಂಬರ್ 16 : ಶಿವಾಜಿ ನಗರ ಕ್ಷೇತ್ರ ಉಪ ಚುನಾವಣೆಗೆ ಸ್ಪರ್ಧಿಸಲು ದಿನೇಶ್ ಗುಂಡೂರಾವ್ ಪತ್ನಿ ಟಬು ದಿನೇಶ್ ಗುಂಡೂರಾವ್ ಹೆಸರು ಕೇಳಿ ಬಂದಿದೆ. ಶಿವಾಜಿ ನಗರ ಕ್ಷೇತ್ರದಿಂದ ಸ್ಪರ್ಧೆಗೆ ಸಾಕಷ್ಟು ಆಕಾಂಕ್ಷಿಗಳಿದ್ದರು. ಅದರಲ್ಲೂ ಪ್ರಮುಖವಾಗಿ ರಿಜ್ವಾನ್ ಅರ್ಷದ್ ಹೆಸರು ಮುಂಚೂಣಿಯಲ್ಲಿತ್ತು. ಆದರೆ ರಿಜ್ವಾನ್ ಅರ್ಷದ್ಗೆ ಪಕ್ಷದಲ್ಲಿ ಸಾಕಷ್ಟು ವಿರೋಧ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇಲ್ಲ. ಹೀಗಾಗಿ ಟಬು ದಿನೇಶ್ ಗುಂಡೂರಾವ್ ಹೆಸರು ಮುನ್ನೆಲೆಗೆ ಬಂದಿರುವುದು ರಾಜ್ಯ ನಾಯಕರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬ ಕುತೂಹಲಕ್ಕೆ ಕಾರಣವಾಗಿದೆ.
ಕಾಂಗ್ರೆಸ್ ಹೈಕಮಾಂಡ್ ಅಂಗಳ ತಲುಪಿದ ಶಿವಾಜಿನಗರ ಟಿಕೆಟ್ ಫೈಟ್
ಟಬು ದಿನೇಶ್ ಹೆಸರು ಈ ಹಿಂದೆಯೂ ಶಿವಾಜಿ ನಗರ ಕ್ಷೇತ್ರದಿಂದ ಕೇಳಿಬಂದಿತ್ತು. ಆಗ ತಾನು ಚುನಾವಣಾ ಅಖಾಡಕ್ಕೆ ಇಳಿಯುವುದಿಲ್ಲ ಎಂದು ಸ್ವತಃ ಟಬು ಹೇಳಿಕೆಯನ್ನು ನೀಡಿದ್ದರು. ಆದರೆ ಈಗ ಶಿವಾಜಿ ನಗರ ಕ್ಷೇತ್ರದ ಕೆಲ ಕಾರ್ಪೊರೇಟರ್ಗಳು ಟಬು ಅವರನ್ನೇ ಕಣಕ್ಕಿಳಿಸಬೇಕು ಎಂಬು ಒತ್ತಡವನ್ನು ಹೇರುತ್ತಿದ್ದಾರೆ. ಮಾತ್ರವಲ್ಲ ಈ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ದಿನೇಶ್ ಗುಂಡೂರಾವ್ ಅವರ ಜೊತೆಗೂ ದೂರವಾಣಿ ಮೂಲಕ ಮಾತುಕತೆಯನ್ನು ನಡೆಸಿದ್ದಾರೆ.
ಟಬು ಅವರನ್ನು ಕಣಕ್ಕಿಳಿಸಬೇಕೆಂದು ಕೇಂದ್ರ ನಾಯಕರ ಮಟ್ಟದಲ್ಲೂ ಮಾತುಕತೆ ನಡೆದಿದೆ ಎನ್ನಲಾಗಿದೆ. ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ರಾಜ್ಯಕ್ಕೆ ಆಗಮಿಸಿದ್ದ ವೇಳೆ ಈ ಕುರಿತಾಗಿಯೂ ಚರ್ಚೆ ನಡೆದಿತ್ತು ಎಂಬ ಮಾಹಿತಿಯಿದೆ. ಆದರೆ ಸ್ವತಃ ಕೆಪಿಸಿಸಿ ಅಧ್ಯಕ್ಷರಾಗಿರುವ ದಿನೇಶ್ ಗುಂಡೂರಾವ್ ಈ ಬಗ್ಗೆ ಎಲ್ಲೂ ಹೇಳಿಕೆಯನ್ನು ನೀಡಿಲ್ಲ. ತಾವಾಗಿಯೇ ಪತ್ನಿಯ ಹೆಸರನ್ನು ಮುನ್ನೆಲೆಗೆ ತಂದರೆ ಅಧಿಕಾರ ದುರುಪಯೋಗ ಪಡಿಸಿಕೊಂಡ ಆರೋಪವೂ ಕೇಳಿ ಬರುವ ಸಾದ್ಯತೆಯಿದೆ. ಹೀಗಾಗಿ ಮೌನವಹಿಸಿದ್ದಾರೆ.
ಉಪಚುನಾವಣೆ ನಡೆಯುವ 15 ಕ್ಷೇತ್ರಗಳ ಪೈಕಿ 8ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಲಾಗಿದೆ. 7ಕ್ಷೇತ್ರಗಳ ಅಭ್ಯರ್ಥಿಗಳ ಕುರಿತಾಗಿ ಕೆಪಿಸಿಸಿ ಇನ್ನೂ ಯಾವುದೇ ನಿರ್ಧಾರವನ್ನು ಕಾಂಗ್ರೆಸ್ ತೆಗೆದುಕೊಂಡಿಲ್ಲ.
ಸೋಶಿಯಲ್ ಮೀಡಿಯಾದಲ್ಲಿ ಟಬು ಸಕ್ರಿಯ:
ರಾಜಕೀಯವಾಗಿ ಆ್ಯಾಕ್ಟಿವ್ ಇರದ ಟಬು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ ಸದ್ದು ಮಾಡುತ್ತಿರುತ್ತಾರೆ. ಪತಿ ದಿನೇಶ್ ಗುಂಡೂರಾವ್ಗೆ ಪಕ್ಷಗದ ನಾಯಕರೇ ತರಾಟೆಗೆ ತೆಗೆದುಕೊಂಡ ಸಂದರ್ಭದಲ್ಲಿ ಪತಿಯ ಪರವಾಗಿ ಮಾಡಿದ ಟ್ವೀಟ್ ಸಾಕಷ್ಟು ವೈರಲ್ ಆಗಿತ್ತು. ಪತಿಯ ಪರವಾಗಿ ಪ್ರಚಾರದಲ್ಲಿ ಟಬು ಭಾಗವಹಿಸಿದ್ದು ಬಿಟ್ಟರೆ ರಾಜಕೀಯವಾಗಿ ಯಾವುದೇ ಹುದ್ದೆಯನ್ನು ಹೊಂದಿಲ್ಲ.
ವಿನಾಕಾರಣ ಚರ್ಚೆಯ ಕೇಂದ್ರಬಿಂದುವಾಗಿದ್ದ ಟಬು:
ಧರ್ಮದ ಕಾರಣಕ್ಕೆ ಟಬು ಅವರನ್ನು ರಾಜಕೀಯ ಚರ್ಚೆಗೆ ವಿನಾಕಾರಣ ಎಳೆದು ತರಲಾಗಿತ್ತು. ಕೇಂದ್ರ ಸಚಿವರಾಗಿದ್ದ ಅನಂತ್ ಕುಮಾರ್ ಹೆಗ್ಡೆ ದಿನೇಶ್ ಗುಂಡೂರಾವ್ ಅವರನ್ನು ಟೀಕಿಸುವ ಭರದಲ್ಲಿ ಟಬು ಅವರ ಧರ್ಮವನ್ನು ಎಳೆದು ತಂದಿದ್ದರು. ಇದು ವಿವಾದವನ್ನು ಎಬ್ಬಿಸಿತ್ತು. ಇದಕ್ಕೆ ಟ್ವಿಟ್ಟರ್ನಲ್ಲಿ ಟಬು ನೀಡದ ಉತ್ತರ ವೈರಲ್ ಆಗಿತ್ತು.
ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ರೋಷನ್ ಬೇಗ್:
ಐಎಂಎ ವಂಚನೆ ಪ್ರಕರಣ ಹಾಗೂ ಆರ್ಎಸ್ಎಸ್ ಮುಖಂಡ ರುದ್ರೇಶ್ ಕೊಲೆ ಪ್ರಕರಣದಲ್ಲಿ ರೋಶನ್ ಬೇಗ್ ಹೆಸರು ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬಿಜೆಪಿ ರೋಶನ್ ಗೇಗ್ ಅವರನ್ನು ಪಕ್ಷದೊಳಗೆ ಸೇರಿಸಿಕೊಂಡಿಲ್ಲ. ಹೀಗಾಗಿ ರೋಷನ್ ಬೇಗ್ ಶಿವಾಜಿನಗರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಶರವಣ ಬಿಜೆಪಿ ಅಭ್ಯರ್ಥಿ:
ತಮಿಳು ಹಾಗು ಮುಸ್ಲಿಮ್ ಮತದಾರರನ್ನು ಹೆಚ್ಚಾಗಿ ಹೊಂದಿರುವ ಶಿವಾಜಿನಗರ ಕ್ಷೇತ್ರವನ್ನು ಈ ಈ ಬಾರಿಯಾದರೂ ತನ್ನ ತೆಕ್ಕೆಗೆ ಹಾಕಿಕೊಳ್ಳುವ ಪ್ರಯತ್ನ ಬಿಜೆಪಿ ನಡೆಸಿದೆ. ಹೀಗಾಗಿ ಶಿವಾಜಿನಗರ ಕ್ಷೇತ್ರದಿಂದ ಶರವಣ ಅವರನ್ನು ಬಿಜೆಪಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದೆ. ಮೊದಲ ಪಟ್ಟಿಯಲ್ಲಿ ಕಾಂಗ್ರೆಸ್ ಜೆಡಿಎಸ್ ರೆಬೆಲ್ ನಾಯಕರಿಗೆ ಟಿಕೆಟ್ ಘೋಷಣೆ ಮಾಡಿದ್ದ ಬಿಜೆಪಿ ಎರಡನೇ ಪಟ್ಟಿಯಲ್ಲಿ ಶರವಣ ಹೆಸರು ಘೋಷಿಸಿತ್ತು.