ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ತೆರಳಿ ಮಾನವೀಯತೆ ಮೆರೆದ ಜಮೀರ್ ಅಹ್ಮದ್ ಖಾನ್
ಬೆಂಗಳೂರು, ಜ 6: ಸದಾ ಒಂದಲ್ಲಾ ಒಂದು ವಿವಾದದ ಜೊತೆಗೆ, ಮಾನವೀಯತೆಯ ಕೆಲಸಕ್ಕೂ ಹೆಸರಾಗಿರುವ ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್, ಮತ್ತೊಂದು ಜನಮೆಚ್ಚುವ ಕೆಲಸವನ್ನು ಮಾಡಿದ್ದಾರೆ.
ನಗರದ ಚಾಮರಾಜಪೇಟೆ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಜಮೀರ್ ಅಹ್ಮದ್, ಸ್ವಾಮಿಯ ದರ್ಶನವನ್ನು ಪಡೆದು, ಐವತ್ತು ಸಾವಿರ ರೂಪಾಯಿ ಹಣವನ್ನು ಅನ್ನದಾನಕ್ಕೆ ಬಳಸಿಕೊಳ್ಳಲು ದೇಣಿಗೆ ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಹನುಮಜ್ಜಯಂತಿ ಮತ್ತು ವೈಕುಂಠ ಏಕಾದಶಿಯ ಸಂದರ್ಭದಲ್ಲೂ ಜಮೀರ್, ದೇವಾಲಯಗಳಿಗೆ ಭೇಟಿಯನ್ನು ನೀಡಿದ್ದರು. ಅಯ್ಯಪ್ಪ ಸ್ವಾಮಿ ದೇವಾಲಯದ 45ನೇ ವಾರ್ಷಿಕೋತ್ಸವದ ನಿಮಿತ್ತ ಜಮೀರ್ ದೇವಾಲಯಕ್ಕೆ ಭೇಟಿ ನೀಡಿದ್ದರು.
ಕೊರೊನಾ ಹಾವಳಿ ಜೋರಾಗಿದ್ದ ಸಂದರ್ಭದಲ್ಲಿ, ಮೃತ ಪಟ್ಟವರ ಕುಟುಂಬದವರು ಅಂತಿಮ ಸಂಸ್ಕಾರಕ್ಕೆ ಗೈರಾದಾಗ, ಅದಕ್ಕಾಗಿ ತಮ್ಮದೇ ಆದ ಕೊರೊನಾ ವಾರಿಯರ್ಸ್ ಪಡೆಯನ್ನು ಜಮೀರ್ ಕಟ್ಟಿದ್ದರು. ಶಾಸಕರ ಈ ಕೆಲಸ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು.
ಸದ್ಯ ತಮ್ಮ ಮಗಳ ಮದುವೆಯ ಕೆಲಸದಲ್ಲಿ ಬ್ಯೂಸಿಯಾಗಿರುವ ಜಮೀರ್ ಅಹ್ಮದ್, ಬಿಡುವಿನ ವೇಳೆ, ಜನಸ್ನೇಹಿ ಕೆಲಸವನ್ನು ಮಾಡುತ್ತಿದ್ದಾರೆ. ಜಮೀರ್ ಮಗಳ ಮದುವೆ, ನಗರದ ಅರಮನೆ ಮೈದಾನದಲ್ಲಿ ಜನವರಿ 21ರಂದು ನಡೆಯಲಿದೆ.
Recommended Video
ಈಗಾಗಲೇ, ತಮ್ಮ ರಾಜಕೀಯ ಗುರು ದೇವೇಗೌಡ್ರು ಅವರನ್ನು ಭೇಟಿಯಾಗಿ ಜಮೀರ್ ಆಮಂತ್ರಣವನ್ನು ನೀಡಿದ್ದಾರೆ. ಆಮಂತ್ರಣ ಪತ್ರದ ಜೊತೆಗೆ, ದೀಪ ಮತ್ತು ಡ್ರೈ ಫ್ರೂಟ್ಸ್ ಇರುವ ಗಿಫ್ತ್ ಅನ್ನು ನೀಡುತ್ತಿದ್ದಾರೆ.