ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ, ಪೊಲೀಸರ ಬಿಗಿ ಭದ್ರತೆ
ಬೆಂಗಳೂರು, ಆಗಸ್ಟ್ 14: ಬೆಂಗಳೂರಿನ ಚಾಮರಾಜಪೇಟೆ ಆಟದ ಮೈದಾನ ಅಥವಾ ಈದ್ಗಾ ಮೈದಾನ ವಿವಾದದ ಕೇಂದ್ರ ಬಿಂದುವಾಗಿದೆ. ಈದ್ಗಾ ಮೈದಾನದಲ್ಲಿ ಕಂದಾಯ ಇಲಾಖೆ ಧ್ವಜಾರೋಹಣಕ್ಕೆ ಸಕಲ ರೀತಿಯಲ್ಲೂ ಸಿದ್ದತೆಯನ್ನು ಮಾಡಿಕೊಂಡಿದೆ. ಧ್ವಜಾರೋಹಣದ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಪೊಲೀಸರು ಭಾರಿ ಭದ್ರತೆಯನ್ನು ಏರ್ಪಡಿಸಿದ್ದಾರೆ.
75ನೇ ವರ್ಷದ ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಈದ್ಗಾ ಮೈದಾನದಲ್ಲಿ ಧ್ವಜರೋಹಣದ ಸಮಯ ಬದಲಾವಣೆ ಮಾಡಲಾಗಿದೆ. ಆಗಸ್ಟ್ 15ರ ಬೆಳಗ್ಗೆ 8 ಗಂಟೆಗೆ ಈದ್ಗಾ ಮೈದಾನದಲ್ಲಿ ಧ್ವಜಾರೋಹಣ ನಡೆಯಲಿದೆ. ಮಾಣಿಕ್ ಶಾ ಪೆರೇಡ್ ನಲ್ಲಿ 9 ಗಂಟೆಗೆ ಧ್ವಜಾರೋಹಣ ನಡೆಯಲಿದ್ದೂ ಅದಕ್ಕೂ ಮುನ್ನವೇ ಚಾಮರಾಜಪೇಟೆಯ ಮೈದಾನದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳಿಂದ ಧ್ವಜಾರೋಹಣ ನಡೆಯಲಿದೆ.
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ; ಪ್ರಹ್ಲಾದ್ ಜೋಶಿ ಹೇಳಿದ್ದೇನು?
ಈಗಾಗಲೇ ತಾತ್ಕಾಲಿಕ ಧ್ವಜ ಸ್ಥಂಭವನ್ನು ನಿರ್ಮಾಣ ಮಾಡಲಾಗಿದೆ. ಪೌರಕಾರ್ಮಿಕರು ಮೈದಾನದ ಆವರಣವನ್ನು ಸ್ವಚ್ಛಗೊಳಿಸಿ 75ನೇ ಅಮೃತ ಮಹೋತ್ಸವ ಸ್ವಾತಂತ್ರ್ಯೋತ್ಸವಕ್ಕೆ ಸನ್ನದ್ದಗೊಳಿಸುತ್ತಿದ್ದಾರೆ. ಇನ್ನು ಕಂದಾಯ ಇಲಾಖೆ ಮಾರ್ಕ್ ಮಾಡಲಾಗಿದ್ದ ಸ್ಥಳದಲ್ಲಿ 20 ಅಡಿ ಎತ್ತರದಲ್ಲಿ ಧ್ವಜಾರೋಹಣವನ್ನು ಮಾಡಲು ಸಕಲ ರೀತಿಯಲ್ಲೂ ಕಂದಾಯ ಇಲಾಖೆಯ ಅಧಿಕಾರಿಗಳು ಸಜ್ಜಾಗಿದ್ದಾರೆ.
ಮೈದಾನದ ಸುತ್ತ ಬ್ಯಾರಿಕೇಡ್, ಸಿಸಿಟಿವಿ ಕಣ್ಗಾವಲು
ಈದ್ಗಾ ಮೈದಾನದಲ್ಲೂ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮದ ಸಿದ್ದತೆ ಬಗ್ಗೆ ಕಂದಾಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಖುದ್ದು ಉತ್ತರ ವಿಭಾಗ ಉಪ ವಿಭಾಗಧಿಕಾರಿ ಶಿವಣ್ಣ ಹಾಗೂ ಸಿಬ್ಬಂದಿ ಪರಿಶೀಲಮೆಯನ್ನು ನಡೆಸಿದ್ದಾರೆ. ಧ್ವಜಾರೋಹಣ ಮತ್ತು ಸಾರ್ವಜನಿಕರು ಮತ್ತು ಮಕ್ಕಳು ಕೂರುವ ಕುರಿತಾಗಿ ಪರಿಶೀಲನೆ ಮಾಡಲಾಗಿದೆ. ಮೈದಾನದ ಸುತ್ತ ಬ್ಯಾರಿಕೇಡ್, ಸಿಸಿಟಿವಿ ಅಳವಡಿಸಿರುವ ಕಂದಾಯ ಇಲಾಖೆ ಬ್ಯಾರಿಕೇಡ್ ಗಳಿಗೆ ತ್ರಿವರ್ಣ ಧ್ವಜ ಅಳವಡಿಸುತ್ತಿರುವ ಸಿಬ್ಬಂದಿ ಮಕ್ಕಳನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಪ್ರತ್ಯೇಕ ಗೇಟ್ ಮೂಲಕ ತಪಾಸಣೆಯನ್ನು ಮಾಡಿ ಒಳಕ್ಕೆ ಪ್ರವೇಶವನ್ನು ನೀಡಲಾಗುತ್ತದೆ. ಈಗಾಗಲೇ ಧ್ವಜರೋಹಣ ಸ್ತಂಭ ಮಾರ್ಕ್ ಮಾಡಿರೋ ಕಂದಾಯ ಇಲಾಖೆ ಅಧಿಕಾರಿಗಳು ಸ್ವಾತಂತ್ರ್ಯೋತ್ಸವ ಧ್ವಜಾರೋಹಣ ನಡೆಸಲಿದ್ದಾರೆ.
ಮೊದಲ ಬಾರಿಗೆ ಈದ್ಗಾ ಮೈದಾನದಲ್ಲಿ ಧ್ವಜರೋಹಣ
ಈದ್ಗಾ ಮೈದಾನದಲ್ಲಿನ ಸ್ವಾತಂತ್ರ್ಯ ದಿನಾಚರಣೆಗೆ ಸಾರ್ವಜನಿಕರಿಗೆ ಪಾಸ್ ಕೊಡುವ ಚಿಂತನೆಯನ್ನು ನಡೆಸಲಾಗಿದೆ. ವಂದೇ ಮಾತರಂ ಮತ್ತು ಭಾರತ್ ಮಾತಾಕಿ ಜೈ ಅಂತ ಎರಡೇ ಘೋಷಣೆ ಕೂಗಬೇಕು. ಅದನ್ನು ಹೊರತು ಪಡಿಸಿ ಪಕ್ಷ, ಸಂಘಟನೆ ಬೇರೆ ಯಾವುದೇ ರೀತಿಯ ಘೋಷಣೆಗಳನ್ನು ಮೈದಾನದ ಬಳಿ ಕೂಗುವಂತಿಲ್ಲ. ಮಕ್ಕಳನ್ನ ಹೊರತುಪಡಿಸಿ ಸಾರ್ವಜನಿಕರಿಗೆ ಪ್ರತ್ಯೇಕ ಗೇಟ್ ಮೂಲಕ ಒಳಗೆ ತಪಾಸಣೆ ಮಾಡಲಾಗುತ್ತದೆ. ಆರ್ಎಎಫ್ ಪಡೆಯಿಂದ ಚಾಮರಾಜಪೇಟೆಯಲ್ಲಿ ಪರೇಡ್ ನಡೆಸಿದ್ದು ಜನರ ಸಾಮರಸ್ಯ, ಶಾಂತಿಯನ್ನು ಕದಡುವವರಿಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಲಾಗಿದೆ. ಇದೇ ಮೊದಲ ಬಾರಿಗೆ ಈದ್ಗಾಮೈದಾನದಲ್ಲಿ ಧ್ವಜರೋಹಣ ಹಿನ್ನಲೆ ಅದ್ದೂರಿಯಾಗಿ ಕಾರ್ಯಕ್ರಮ ಮಾಡಲು ಕಂದಾಯ ಇಲಾಖೆ ಸಿದ್ದತೆ ಮಾಡಿಕೊಳ್ಳಲಾಗಿದೆ.
ಧ್ವಜಾರೋಹಣ ವೇಳೆ ಭಾಗಿಯಾಗಬಹುದು
ಕಂದಾಯ ಇಲಾಖೆಯ ಅಧಿಕಾರಿಗಳು ಧ್ವಜಾರೋಹಣವನ್ನು ಮಾಡಲಿದ್ದಾರೆ. ಈ ವೇಳೆ ಸ್ಥಳೀಯ ಕೆಲವು ಜನಪ್ರತಿನಿಧಿಗಳು ಪ್ರೋಟೋ ಕಾಲ್ ನಂತೆ ಶಾಸಕ ಜಮೀರ್ ಅಹಮದ್ ಖಾನ್ ಮತ್ತು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ. ಸಿ. ಮೋಹನ್ ಸಹ ಭಾಗಿಯಾಗಬಹುದು ಎಂದು ಈಗಾಗಲೇ ಕಂದಾಯ ಸಚಿವ ಆರ್. ಅಶೋಕ್ ಸ್ಪಷ್ಟಪಡಿಸಿದ್ದರು.
600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ
ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಮತ್ತು ಡಿಸಿಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಲಾಗಿದೆ. 600ಕ್ಕೂ ಹೆತ್ತು ಪೊಲೀಸರು ಮೈದಾನದ ಸುತ್ತ ನಿಯೋಜನೆ ಮಾಡಲಾಗಿದೆ. ಕೆಎಸ್ಆರ್ಪಿ , ಸಿಎಆರ್, ಆರ್ಎಎಫ್ ಪಡೆ ಸೇರಿದಂತೆ ಪಶ್ಚಿಮ ವಿಭಾಗದ ಪೊಲೀಸರು ಮೈದಾನವನ್ನು ಕಾಯಲಿದ್ದಾರೆ.