ಈದ್ಗಾ ಮೈದಾನ ವಿವಾದ; ಶಾಂತಿ ಸಭೆ ಬಳಿಕ ಜಮೀರ್ ಹೇಳಿದ್ದೇನು?
ಬೆಂಗಳೂರು, ಜುಲೈ 08: ಚಾಮರಾಜಪೇಟೆಯ ಈದ್ಗಾ ಮೈದಾನದ ಗೊಂದಲದ ಪರಿಣಾಮ ಕ್ಷೇತ್ರದ ಸಂಘಟನೆಗಳು ಹಾಗೂ ಮುಖಂಡರ ಜೊತೆ ಶಾಂತಿ ಸಭೆಯನ್ನು ನಡೆಸಲಾಯಿತು. ಶಾಸಕ ಜಮೀರ್ ಅಹ್ಮದ್ ಖಾನ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ 500ಕ್ಕೂ ಹೆಚ್ಚು ಮುಖಂಡರು, ಹಲವು ಕನ್ನಡ ಪರ ಸಂಘಟನೆಗಳ ಸದಸ್ಯರು, ಮಾಜಿ ಪಾಲಿಕೆ ಸದಸ್ಯರು ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಮೈದಾನವನ್ನು ಆಟದ ಮೈದಾನವಾಗಿಯೇ ಉಳಿಸುವಂತೆ ಮುಖಂಡರ ಮನವಿ ಮಾಡಿದ್ದಾರೆ.
ಕ್ಷೇತ್ರದ ಜನರು ಮತ್ತು ಮುಖಂಡರ ಮನವಿಗೆ ಒಪ್ಪಿದ ಶಾಸಕ ಜಮೀರ್ ಅಹ್ಮದ್ ಖಾನ್, "ಇದು ಕೇವಲ ಒಂದು ಜಾತಿ ಧರ್ಮಕ್ಕೆ ಸೀಮಿತವಾಗಿದ್ದಲ್ಲ. ಎಲ್ಲಾ ಸಮುದಾಯಕ್ಕೆ ಸೇರಿದ್ದು, ಇದರಿಂದ ಈಗ ಹೇಗಿದೆಯೋ ಅದೇ ರೀತಿ ಮುಂದವರೆಯಲಿದೆ" ಎಂದು ಹೇಳಿದರು.
ಮಾಜಿ ಪಾಲಿಕೆ ಸದಸ್ಯ ಬಿ. ಟಿ. ಶ್ರೀನಿವಾಸ್ ಮೂರ್ತಿ ಮಾತನಾಡಿ, "ಜಮೀರ್ ಶಾಸಕರಾಗಿನಿಂದ ಯಾವುದೇ ಹಿಂದೂ-ಮುಸ್ಲಿಂ ಗಲಾಟೆ ಆಗಿಲ್ಲ. ಬಕ್ರೀದ್ ಹಬ್ಬದ ವೇಳೆ ಬೇಕೆಂತಲೇ ಕೆಲವರು ಹೀಗೆ ಮಾಡುತ್ತಿದ್ದಾರೆ. ಆಟದ ಮೈದಾನವನ್ನಾಗಿ ಉಳಿಸಿಕೊಳ್ಳಲು ಶಾಸಕರು ಸಹಕರಿಸುವ ವಿಶ್ವಾಸವಿದೆ" ಎಂದರು.
ಇನ್ನು ಪ್ರಮುಖವಾಗಿ ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದ ಸಂಸದ ಪಿ. ಸಿ. ಮೋಹನ್ ಮತ್ತು ಮಾಜಿ ಶಾಸಕರಾದ ಪ್ರಮೀಳಾ ನೇಸರ್ಗಿ ಸಭೆಗೆ ಗೈರುಹಾಜರಾಗಿದ್ದರು. ಈ ಇಬ್ಬರು ಬಿಜೆಪಿ ಮುಖಂಡರ ಗೈರಿಗೆ ಕಾರಣ ತಿಳಿದು ಬಂದಿಲ್ಲ.
ಕೋರ್ಟ್ ವಿವರ ತೆರದಿಟ್ಟ ಜಮೀರ್
ಆಟದ ಮೈದಾನ ಉಳಿಸಿ ಅಂತ ಎಲ್ಲರ ಬೇಡಿಕೆಯಾಗಿದೆ. ಆಟದ ಮೈದಾನ ಎಲ್ಲಿ ಹೋಗಿದೆ? ಎಂದು ಪ್ರಶ್ನೆ. ಆಟದ ಮೈದಾನ ತೆಗೆಯೋಕೆ ಸಾಧ್ಯಾನಾ?. ನೂರಾರು ವರ್ಷಗಳಿಂದ ಆಟದ ಮೈದಾನವಾಗಿದೆ. ಜಮೀರ್ ಜೀವಂತವಾಗಿರುವ ತನದ ಆಟದ ಮೈದಾನವಾಗಿಯೇ ಇರುತ್ತದೆ. 1954ರಲ್ಲಿ ಕೋರ್ಟ್ನಲ್ಲಿ ದಾವೆ ಹಾಕಲಾಗುತ್ತದೆ. ಒಂದು ವರ್ಷವಾದ ನಡೆದರೂ ಅಂದಿನ ಮುನ್ಸಿಪಲ್ ದಾಖಲೆ ನೀಡಲು ವಿಫಲವಾಗುತ್ತದೆ. 1958ರಲ್ಲಿ ಕಾರ್ಪೋರೇಷನ್ ಮೈಸೂರು ಕೋರ್ಟ್ಗೆ ಅಫಿಲ್ ಹೋಗುತ್ತದೆ. ಚಾಮರಾಜಪೇಟೆ ನಮ್ಮದು ಎಂದು ಅಪೀಲು ಹೋಗುತ್ತದೆ. ಅಲ್ಲೂ ಕಾರ್ಪೋರೇಷನ್ ದಾಖಲೆ ನೀಡಲು ವಿಫಲವಾಗುತ್ತದೆ. ಸುಪ್ರೀಂಕೋರ್ಟ್ನಲ್ಲೂ ಕಾರ್ಪೋರೇಷನ್ ದಾಖಲೆ ಸಲ್ಲಿಸೋಕೆ ವಿಫಲವಾಗುತ್ತದೆ.1961ರಲ್ಲಿ ಸುಪ್ರೀಂ ಇತ್ಯರ್ಥಮಾಡಿ ಆದೇಶ ನೀಡುತ್ತದೆ. 1965ರಲ್ಲಿ ವಕ್ಫ್ ಗೆ ಗೆಜೆಟ್ ನೊಟಿಫಿಕೇಷನ್ ಆಗುತ್ತದೆ. ಗೆಜೆಟ್ ನೋಟಿಫಿಕೇಷನ್ ಆದಾಗ ಅಂದಿನ ಕಾರ್ಪೋರೇಷನ್ ಚಾಲೆಂಜ್ ಮಾಡದೆ ಸುಮ್ಮನಿತ್ತು ಎಂದು ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದರು.
ಕೋವಿಡ್ ಸಮಯದಲ್ಲಿ ಇವರೆಲ್ಲಾ ಎಲ್ಲಿ ಹೋಗಿದ್ದರು?
1972ರಲ್ಲಿ ಕಾರ್ಪೋರೇಷನ್ ಮತ್ತೆ ಸುಪ್ರೀಂಕೋರ್ಟ್ ಅಫೀಲು ಹೋಗುತ್ತದೆ. ಚಾಮರಾಜಪೇಟೆಯವರು ಯಾರೂ ನನ್ನ ವಿರುದ್ಧ ಮಾತನಾಡುವುದಿಲ್ಲ. ನನ್ನ ವಿರುದ್ಧ ಮಾತನಾಡುವವರು ಚಾಮರಾಜಪೇಟೆಯವರೇ ಅಲ್ಲ, ಇಷ್ಟೆಲ್ಲಾ ಮಾತನಾಡುವವರು ಕೋವಿಡ್ ಸಮಯದಲ್ಲಿ ಎಲ್ಲಿ ಇದ್ದರು?. ಕೋವಿಡ್ ಸಮಯದಲ್ಲಿ 580 ಶವಗಳನ್ನು ಎತ್ತಿದ್ದೀವಿ ಎಂದು ಪರೋಕ್ಷವಾಗಿ ರಾಜ್ಯ ಸರ್ಕಾರಕ್ಕೆ ಮಾತಿನಲ್ಲೇ ತಿವಿದ ಜಮೀರ್ ಯಾವ ಹಿನ್ನಲೆಯಲ್ಲಿ ಚಾಮರಾಜಪೇಟೆ ಬಂದ್ಗೆ ಕರೆ ಕೊಟ್ಟರೋ ಗೊತ್ತಿಲ್ಲ ಎಂದು ಹೇಳಿದ್ದಾರೆ.
ನಾನೊಬ್ಬ ಗುಲಾಮ ಎಂದ ಜಮೀರ್
"ಪಿ. ಸಿ. ಮೋಹನ್, ಪ್ರಮೀಳಾ ನೇಸರ್ಗಿ ಅವರನ್ನೂ ಸಭೆಗೆ ಕರೆದ್ದೇವೆ. ಈ ವರ್ಷದಿಂದ ಆಗಸ್ಟ್ನಲ್ಲಿ ಧ್ವಜಾರೋಹಣ ಮಾಡಲಾಗುವುದು. ನನ್ನ ನೇತೃತ್ವದಲ್ಲಿಯೇ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡುತ್ತೇವೆ, ಎದೆ ತಟ್ಟಿಕೊಂಡು ಧ್ವಜಾರೋಹಣ ಮಾಡಿಯೇ ಸಿದ್ಧ" ಎಂದರು.
ಜಮೀರ್ ಅಹ್ಮದ್ ಖಾನ್, "ನಾನು ಒಬ್ಬ ಗುಲಾಮ, ನನ್ನ ಕೊರಳ ಪಟ್ಟಿ ಹಿಡಿದು ಕೇಳುವ ಹಕ್ಕು ಚಾಮರಾಜಪೇಟೆಯ ಜನತೆಗೆ ಇದೆ.
ಆದರೆ ಹಿಂದೂ ಆಚರಣೆಗಳಾದ ಗಣೇಶ ಹಬ್ಬ ಸೇರಿದಂತೆ ಇತರೆ ಆಚರಣೆಗಳ ಬಗ್ಗೆ ಯಾವುದೇ ಉತ್ತರವನ್ನು ನೀಡದೇ ಕೆಲವರು ರಾಜಕೀಯಕ್ಕಾಗಿ ಸೌಹಾರ್ಯವನ್ನು ಕೆಡಿಸುತ್ತಿದ್ದಾರೆ" ಎಂದು ಹೇಳಿದರು.
ಆಟದ ಮೈದಾನವಾಗಿಯೇ ಉಳಿಯಲಿದೆ
ಚಾಮರಾಜಪೇಟೆ ಕ್ಷೇತ್ರದ ಗೆಲುವಿಗೆ ಕ್ಷೇತ್ರದ ಎಲ್ಲ ವರ್ಗದ ಸಹಕರಿಸಿದ್ದಾರೆ. ಕೇವಲ ಒಂದೇ ವರ್ಗದ ಪರ ನಾನು ನಿಲ್ಲೋಕೆ ಆಗುವುದಿಲ್ಲ. ಈ ಮೈದಾನವನ್ನು ಆಟದ ಮೈದಾನವಾಗಿ ಉಳಿಸುವುದಾಗಿ ಜಮೀರ್ ನಮಗೆ ಮಾತು ಕೊಟ್ಟಿದ್ದಾರೆ ಎಂದು ಚಾಮರಾಜಪೇಟೆಯ ಮಾಜಿ ಪಾಲಿಕೆ ಸದಸ್ಯ ಚಂದ್ರಶೇಖರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Recommended Video