ಚಾಮರಾಜಪೇಟೆ ಈದ್ಗಾ ಮೈದಾನ ಬಿಬಿಎಂಪಿಯದ್ದೋ?, ವಕ್ಫ್ ಮಂಡಳಿಯದ್ದೋ?
ಬೆಂಗಳೂರು, ಜೂನ್ 14: ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದ ಒಡೆತನ ವಿವಾದ ಬಗೆಹರಿಯುತ್ತಿಲ್ಲ. ಇದು ಬಿಬಿಎಂಪಿ ಆಟದ ಮೈದಾನವೇ? ಎನ್ನುವ ಗೊಂದಲ ಇನ್ನೂ ಬಗೆಹರಿಯುತ್ತಿಲ್ಲ. ಇದೇ ವಿಚಾರ ಈಗ ದಿನಕ್ಕೊಂದು ತಿರುವು ಪಡೆಯುತ್ತಲೇ ಇದೆ. ಹಿಂದೂಪರ ಸಂಘಟನೆ, ಹಿಂದೂ ಸನಾತನ ಪರಿಷತ್, ಶ್ರೀರಾಮ ಸೇನೆ ಮೈದಾನ ವಿಚಾರವಾಗಿ ಪಾಲಿಕೆಗೆ ಮತ್ತೊಂದು ಡೆಡ್ ಲೈನ್ ನೀಡಿದ್ದಾರೆ.
ಚಾಮರಾಜಪೇಟೆಯ ವಿವಾದಿತ ಈದ್ಗಾ ಮೈದಾನದ ಸುತ್ತಲೂ ಬಿಬಿಎಂಪಿ 12 ಕಂಬಗಳನ್ನು ನೆಟ್ಟಿದ್ದು, ಸಿಸಿ ಕ್ಯಾಮೆರಾ ಅಳವಡಿಸಲು ಸಿದ್ಧತೆ ಅಂತಿಮಗೊಳಿಸಿದೆ. ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಕಲ್ಪಿಸಿದೆ. ಆದರೆ ಇದು ಪಾಲಿಕೆಯ ಸ್ವತ್ತು ಅಂತ ಬೋಡ್೯ ಹಾಕಲು ಅಧಿಕಾರಿಗಳು ಮುಂದು ಬರುತ್ತಿಲ್ಲ.
ಇನ್ನೂ ಹಿಂದೂ ಸಂಘಟನೆಗಳ ಮನವಿಯನ್ನು ಸ್ವೀಕರಿಸುತ್ತಲೂ ಇಲ್ಲ. ಬೇಡ ಅಂತ ನಿರ್ಲಕ್ಷ್ಯ ಕೂಡಾ ಮಾಡುತ್ತಿಲ್ಲ. ಅನುಮತಿ ನೀಡುವುದಕ್ಕೆ ಡೆಡ್ ಲೈನ್ ನೀಡಿದ್ದರೂ ಮತ್ತೊಮ್ಮೆ ಪರಿಶೀಲಿಸುತ್ತೀವಿ. ಕಾನೂನು ಕೋಶದ ಅಭಿಪ್ರಾಯ ಪಡೆಯುತ್ತೇವೆ ಎಂದು ಬಿಬಿಎಂಪಿ ಕಾಲಾಹರಣ ಮಾಡುತ್ತಲೇ ಇದೆ.
ಬಿಬಿಎಂಪಿಯ ದ್ವಂದ್ವ ನಿಲುವಿಗೆ ಹಿಂದೂಪರ ಸಂಘಟನೆಗಳು ಅಸಮಾಧಾನವನ್ನು ಹೊರಹಾಕಿದ್ದಾರೆ. ಬಿಬಿಎಂಪಿ ತನ್ನ ಸ್ವತ್ತಿನ ಕಾರ್ಯವೈಖರಿಯನ್ನು ನಿರ್ಧರಿಸಲು ಮೀನಾ ಮೇಷ ಎಣಿಸುತ್ತಿರುವುದು ಏಕೆ? ಎಂದು ಪ್ರಶ್ನಿಸುತ್ತಿದ್ದಾರೆ.
ಯೋಗ, ಸ್ವಾತಂತ್ರ್ಯ ದಿನಕ್ಕೆ ಅವಕಾಶ ಕೊಡದಿದ್ರೆ ಕೋರ್ಟ್ ಮೊರೆ?
ಚಾಮರಾಜಪೇಟೆ ಮೈದಾನದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಆಚರಣೆಗೆ ಅವಕಾಶ ನೀಡಬೇಕು ಅಂತ ಹಿಂದೂ ಸನಾತನ ಪರಿಷತ್ ಬಿಬಿಎಂಪಿಗೆ ಮನವಿ ನೀಡಿತ್ತು. ಅದೇ ರೀತಿ ಶ್ರೀರಾಮ ಸೇನೆ ಕೂಡಾ ಹಿಂದೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಕಾರ್ಯಕ್ರಮ ಗಳ ಜೊತೆ ಗಣೇಶೋತ್ಸವಕ್ಕೂ ಅವಕಾಶ ನೀಡಿ ಅದರ ಜೊತೆ ಯೋಗದಿನಾಚರಣೆಗೂ ಅವಕಾಶ ನೀಡಬೇಕು ಅಂತ ಜೂನ್ 14ರ ಮಧ್ಯಾಹ್ನ 3 ಗಂಟೆಯ ಒಳಗೆ ನಿಲುವು ತಿಳಿಸಬೇಕೆಂದು ಕೋರಿ ಹಿಂದೂಪರ ಸಂಘಟನೆಗಳು ಬಿಬಿಎಂಪಿಗೆ ಡೆಡ್ಲೈನ್ ಕೊಟ್ಟಿದ್ದವು. ಆದರೆ ಅಂತಿಮ ತೀರ್ಮಾನ ತೆಗೆದು ಕೊಳ್ಳಬೇಕಿದ್ದ ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರು, ಕಂದಾಯ ಇಲಾಖೆಯಲ್ಲಿ ದಾಖಲೆಗಳನ್ನ ಪರಿಶೀಲನೆಗೆ ಕಳಿಸಿದ್ದೀವಿ, ಅದೇ ರೀತಿ ಕಾನೂ ಕೋಶದ ಅಭಿಪ್ರಾಯ ಕೂಡಾ ಕೇಳಿದ್ದೀವಿ. ಅದರ ಜೊತೆ ವಕ್ಫ್ ಬೋರ್ಡ್ಗೆ ದಾಖಲೆಗಳನ್ನು ಸಲ್ಲಿಸಲು ನೋಟಿಸ್ ನೀಡಲಾಗಿದೆ ಒಂದುವಾರಗಳ ಕಾಲ ಸಮಯಾವಕಾಶ ಬೇಕಿದೆ ಅಂತ ಕುಂಟು ನೆಪ ಹೇಳುತ್ತಿದ್ದಾರೆ.
ಬಿಬಿಎಂಪಿಗೆ ಎರಡುದಿನಗಳ ಕಾಲಾವಕಾಶ
ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆಗೆ ಅವಕಾಶ ಕೋಡಬೇಕು ಎಂದು ಬಿಬಿಎಂಪಿ ಪಶ್ಚಿಮ ವಲಯದ ಜಂಟಿ ಆಯುಕ್ತರಿಗೆ ಮನವಿ ಮಾಡಲಾಗಿದೆ. ಈ ಸಂಬಂಧ ಜೂನ್ 7ರಂದು ಮನವಿ ಸಲ್ಲಿಸಿದ್ದರೂ ಈವರೆಗೆ ಪ್ರತಿಕ್ರಿಯೆ ನೀಡಿಲ್ಲ. ಅನುಮತಿ ಕೊಡುವುದು ಅಥವಾ ಇಲ್ಲ ಎನ್ನುವ ಬಗ್ಗೆ ಲಿಖಿತ ರೂಪದಲ್ಲಿ ಮಾಹಿತಿ ನೀಡಬೇಕು. ಸ್ವಾತಂತ್ರ್ಯ ದಿನಾಚರಣೆಗೆ ಅವಕಾಶ ಕೊಡದಿದ್ದರೆ, ನ್ಯಾಯಾಲಯದ ಮೊರೆ ಹೋಗುವುದಾಗಿ ವಿಶ್ವ ಸನಾತನ ಪರಿಷತ್ ಹಾಗೂ ಶ್ರೀರಾಮ ಸೇನೆ ಬಿಬಿಎಂಪಿಗೆ ಎರಡು ದಿನಗಳ ಕಾಲ ಮತ್ತೊಮ್ಮೆ ಡೆಡ್ ಲೈನ್ ನೀಡಿದೆ.
ಆಟದ ಮೈದಾನದ ಬಗ್ಗೆ ಸಿಗುತ್ತಿಲ್ಲ ಕ್ಲಾರಿಟಿ
ಚಾಮರಾಜಪೇಟೆ ಮೈದಾನ ದಿನದಿಂದ ದಿನಕ್ಕೆ ಯುದ್ಧಭೂಮಿಯ ರೀತಿ ಮಾರ್ಪಡುತ್ತಿದೆ. ಅತ್ತ ವಕ್ಫ್ ಬೋರ್ಡ್ ನಮಗೆ ಸೇರುತ್ತದೆ ಅಂತಿದ್ದರೇ ಇತ್ತ ಪಾಲಿಕೆ ಆಟದ ಮೈದಾನ ಎನ್ನುತ್ತಿದೆ. ಇದೆಲ್ಲದರ ನಡುವೆ ಹಿಂದೂಪರ ಸಂಘಟನೆಗಳು ಬಿಬಿಎಂಪಿಗೆ ಮತ್ತೊಂದು ಡೆಡ್ ಲೈನ್ ಕೊಟ್ಟಿದ್ದು, ಅನುಮತಿ ಸಿಗದಿದ್ದರೆ ಕೋರ್ಟ್ ಮೊರೆ ಹೋಗುವ ಲೆಕ್ಕಾಚಾರಗಳು ನಡೆಯುತ್ತಿದೆ.
ಮೈದಾನದ ಪತ್ರಕ್ಕಾಗಿ ತಡಕಾಡುತ್ತಿರುವ ಬಿಬಿಎಂಪಿ
ಬಿಬಿಎಂಪಿ ಚಾಮರಾಜಪೇಟೆಯ ಮೈದಾನವನ್ನು ತನ್ನದೆನ್ನುತ್ತಿದೆ. ತನ್ನ ಸುಪರ್ದಿಯಲ್ಲಿದೆ ಎನ್ನುತ್ತಿದೆ. ಆದರೆ ಬಿಬಿಎಂಪಿ ಬಳಿಯಲ್ಲಿ ಇರಬೇಕಿದ್ದ ಅಗತ್ಯ ದಾಖಲೆಪತ್ರಗಳು ಸಿಗುತ್ತಿಲ್ಲ. ಬಿಬಿಎಂಪಿ ತನ್ನ ಬಳಿಯಲ್ಲಿರಬೇಕಿದ್ದ ದಾಖಲೆಗಳನ್ನು ಹುಡುಕಾಡುತ್ತಿದೆ. ಇದರಿಂದ ಚಾಮರಾಜಪೇಟೆಯ ನಿಜವಾದ ಮಾಲೀಕರು ಯಾರು? ಎಂಬುದರ ಬಗ್ಗೆ ಅನುಮಾನಗಳು ಮೂಡುತ್ತಿದೆ.
Recommended Video