ನಾಲ್ಕು ದಿನ ಬಿಟ್ಟು ವಿಚಾರಣೆಗೆ ಬರ್ತೀನಿ ಅಂತ ಜಾರಕಿಹೊಳಿ ಹೇಳಿದ್ದು ಯಾಕೆ ?
ಬೆಂಗಳೂರು, ಮಾರ್ಚ್ 29: ಅಶ್ಲೀಲ ಸಿಡಿ ಸ್ಫೋಟ ಪ್ರಕರಣ ಸಂಬಂಧ ವಿಚಾರಣೆಗೆ ಒಳಗಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಸ್ಐಟಿ ಅಧಿಕಾರಿಗಳು ಮುಂದಿಟ್ಟ ಸಾಕ್ಷಿಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ ಎನ್ನಲಾಗಿದೆ. ಎಸ್ಐಟಿ ಅಧಿಕಾರಿಗಳ ಪ್ರಶ್ನೆಗಳಿಗೆ ಉತ್ತರಿಸಲಾಗದೇ ನಾಲ್ಕು ದಿನಗಳ ಕಾಲಾವಕಾಶ ಪಡೆದು ಹೊರ ನಡೆದಿದ್ದಾರೆ.
Recommended Video
ಅಶ್ಲೀಲ ಸಿಡಿ ಸ್ಫೋಟ ಪ್ರಕರಣ ಸಂಬಂಧ ವಾಸ್ತವ ಸಂಗತಿಯನ್ನು ಮರೆಮಾಚುತ್ತಿರುವ ರಮೇಶ್ ಜಾರಕಿಹೊಳಿ " ಈ ಸಿಡಿ ನನ್ನದಲ್ಲ ಅದು ನಕಲಿ ವಿಡಿಯೋ, ಅದರಲ್ಲಿ ನಾನು ಇಲ್ಲ" ಎಂಬ ವಾದವನ್ನೇ ಮುಂದಿಟ್ಟಿದ್ದಾರೆ. ಎಲ್ಲಾ ಪ್ರಶ್ನೆ ವಿಧಿಯಿಲ್ಲದೇ ಸಾಕ್ಷಿಗಳನ್ನು ಮುಂದಿಟ್ಟು ಪ್ರಶ್ನೆ ಮಾಡಿದಾಗ ಉತ್ತರ ನೀಡಲಾಗದೇ ವಕೀಲರೊಂದಿಗೆ ಚರ್ಚಿಸಿ ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಯುವತಿ ಸ್ವ ಇಚ್ಛಾ ಹೇಳಿಕೆ ಬಳಿಕ ಜಾರಕಿಹೊಳಿಗೆ ಎದುರಾಲಿದೆ ಮಹಾ ಕಂಟಕ
ಮಾ. 2 ರಂದು ಅಶ್ಲೀಲ ಸಿಡಿ ಹೊರ ಬಿದ್ದ ಕ್ಷಣದಿಂದಲೂ ಇದೊಂದು ನಕಲಿ ಸಿಡಿ ನನ್ನ ವಿರುದ್ಧ ಷಡ್ಯಂತ್ರ ನಡೆದಿದೆ. ಅದೊಂದು ನಕಲಿ ಸಿಡಿ, ಇದರಲ್ಲಿ ರಾಜಕೀಯ ಷಡ್ಯಂತ್ರ ಅಡಗಿದೆ. ಬ್ಲಾಕ್ ಮೇಲ್ ಮಾಡಿದ್ದಾರೆ ಎಂಬ ವಾದಕ್ಕೆ ಅಂಟಿಕೊಂಡಿದ್ದಾರೆ. ಈಗಾಗಲೇ ಎರಡು ಬಾರಿ ವಿಚಾರಣೆ ನಡೆಸಿದಾಗಲೂ ರಮೇಶ್ ಜಾರಕಿಹೊಳಿ ಇದೇ ಮಾತನ್ನು ಹೇಳಿದ್ದರು. ಸಂತ್ರಸ್ತೆ ಯುವತಿ ಮಾತನಾಡಿದ್ದಾಳೆ ಎನ್ನಲಾದ ಅಡಿಯೋಗಳು ಸ್ಫೋಟಗೊಂಡ ಬಳಿಕ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಎಳೆದು ತಂದಿದ್ದರು. ನನ್ನ ಬಳಿ ಹದಿಮೂರು ಸಾಕ್ಷಿಗಳಿವೆ. ಎಲ್ಲವನ್ನು ಎಸ್ಐಟಿ ಅಧಿಕಾರಿಗಳಿಗೆ ನೀಡುತ್ತೇನೆ ಎಂದು ಮಾಧ್ಯಮಗಳ ಎದುರು ಹೇಳಿಕೆ ನೀಡಿದ್ದರು.
ಈ ಎಲ್ಲಾ ಬೆಳವಣಿಗೆ ನಡುವೆ ಸಿಡಿ ಗ್ಯಾಂಗ್ ಆರೋಪಿತರ ಮನೆ ಕಚೇರಿ ಮೇಲೆ ದಾಳಿ ನಡೆಸಿ ಕೆಲವು ಮಹತ್ವದ ಸಾಕ್ಷಾಧಾರಗಳನ್ನು ಸಂಗ್ರಹಿಸಿದ್ದರು. ಅಶ್ಲೀಲ ಸಿಡಿಯ ಅನ್ ಎಡಿಟೆಡ್ ವಿಡಿಯೋವನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದರು. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಪ್ರಕಾರ ಸಂತ್ರಸ್ತೆ ಎನ್ನಲಾದ ಯುವತಿ ಜತೆ ಜಾರಕಿಹೊಳಿ ಏಕಾಂತವಾಗಿ ಕಾಲ ಕಳೆದಿದ್ದಾರೆ ಎನ್ನಲಾಗಿದೆ. ಇದು ಮೇಲ್ನೋಟಕ್ಕೆ ಹನಿ ಟ್ರ್ಯಾಪ್ ಎಂಬುದಕ್ಕೆ ಮಹತ್ವದ ಸಾಕ್ಷಾಧಾರಗಳು ಎಸ್ಐಟಿಗೆ ಲಭ್ಯವಾಗಿವೆ. ಈ ಎಲ್ಲಾ ಸಾಕ್ಷಾಧಾರಗಳನ್ನು ಎಸ್ಐಟಿ ಅಧಿಕಾರಿಗಳು ರಮೇಶ್ ಜಾರಕಿಹೊಳಿ ಮುಂದಿಟ್ಟು ಪ್ರಶ್ನೆ ಮಾಡಿದಾಗ, ನಮ್ಮ ವಕೀಲರ ಜತೆ ಚರ್ಚಿಸಿ ಬರುವುದಾಗಿ ಹೇಳಿ ನಾಲ್ಕು ದಿನ ಕಾಲಾವಕಾಶ ಪಡೆದಿದ್ದಾರೆ. ಸಾಕ್ಷಾಧಾರಗಳನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ ಎನ್ನಲಾಗಿದೆ.
ವಾಸ್ತವ ಒಪ್ಪಿಕೊಳ್ಳದ ಕಾಳಗ: ನನಗೆ ಕೆಲಸದ ಅಮಿಷೆ ಒಡ್ಡಿ ನನ್ನನ್ನು ಬಳಸಿಕೊಂಡರು ಎಂಬುದು ಸಿಡಿಲೇಡಿಯ ಆರೋಪ. ಇದೊಂದು ನಕಲಿ ಸಿಡಿ. ನನ್ನ ವಿರುದ್ಧ ರಾಜಕೀಯ ಷಡ್ಯಂತ್ರ ಮಾಡಿ ತಯಾರಿಸಲಾಗಿದೆ. ನನ್ನನ್ನು ಬ್ಲಾಕ್ ಮೇಲ್ ಮಾಡಿದರು ಎಂಬುದು ಜಾರಕಿಹೊಳಿ ಅವರ ನಿಲುವು. ಆದರೆ ಎಸ್ಐಟಿ ತನಿಖೆಯಲ್ಲಿ ಈ ಎರಡೂ ಸಂಗತಿಗಳು ವಾಸ್ತವಕ್ಕೆ ದೂರ ಎಂಬುದು ಗೊತ್ತಾಗಿದೆ. ಇದೊಂದು ಹನಿಟ್ರ್ಯಾಪ್ ಸ್ವರೂಪದ ಪ್ರಕರಣ ಎಂಬುದು ಕಂಡು ಬಂದಿದೆ. ಈ ಆಯಾಮದಲ್ಲಿ ತನಿಖೆ ಕೂಡ ನಡೆಸಿದ್ದಾರೆ. ಸಂತ್ರಸ್ತೆಯೂ ಸತ್ಯ ಮರೆಮಾಚುತ್ತಿದ್ದಾಳಾ ? ಅದೇ ರೀತಿ ಜಾರಕಿಹೊಳಿಯೂ ಸತ್ಯ ಮರೆಮಾಚುತ್ತಿದ್ದಾರಾ ಎಂಬ ಪ್ರಶ್ನೆ ಉದ್ಭವಿಸಿವೆ. ಪ್ರಕರಣದ ತನಿಖೆ ನಡೆಸುತ್ತಿರುವ ಎಸ್ಐಟಿ ಅಧಿಕಾರಿಗಳ ಪಾಲಿಗೆ ಇದು ಬಹುದೊಡ್ಡ ತಲೆನೋವು ತಂದಿಟ್ಟಿದೆ.