ಬನಶಂಕರಿಯಲ್ಲಿ ಬೈಕ್ ಕದ್ದು ಪರಾರಿಯಾದ ಅಂಗವಿಕಲ!
ಬೆಂಗಳೂರು, ಅಕ್ಟೋಬರ್, 20: ಬೆಂಗಳೂರಿನ ಬನಶಂಕರಿಯಲ್ಲಿ ಮನೆಮುಂದೆ ನಿಲ್ಲಿಸಿದ್ದ ದ್ವಿಚಕ್ರ ವಾಹನವನ್ನು ಹಾಡಹಗಲೇ ಅಂಗವಿಕಲನೊಬ್ಬ ಕದ್ದು ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಇಲ್ಲಿಯ ಬನಶಂಕರಿ ಎರಡನೇ ಹಂತದಲ್ಲಿರುವ ಕೆ.ಆರ್. ರಸ್ತೆಯ ರಾಜಣ್ಣ ಎಂಬುವವರ ಮನೆ ಮುಂದೆ ನಿಲ್ಲಿಸಿದ್ದ ದ್ವಿಚಕ್ರವಾಹನವನ್ನು ನಕಲೀ ಕೀ ಬಳಸಿ ಅಂಗವಿಕಲನೊಬ್ಬ ಕದ್ದಿರುವ ಘಟನೆ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಅಕ್ಟೋಬರ್ 14ರಂದು ಸಂಜೆ 4 ಗಂಟೆ ಸುಮಾರಿಗೆ ವಾಹನವನ್ನು ಪಾರ್ಕಿಂಗ್ ಮಾಡಿದ್ದ ಸ್ಥಳಕ್ಕೆ ಬಂದ ಅಂಗವಿಕಲ ತನ್ನ ಬಳಿಯಿದ್ದ ನಕಲಿ ಕೀ ಬಳಸಿ ದ್ವಿಚಾಕ್ರ ವಾಹನವನ್ನು ಚಾಲನೆ ಮಾಡಲು ಪ್ರಯತ್ನಿಸಿದ್ದಾನೆ.
ಕಳ್ಳನ ಪ್ರಯತ್ನ ಫಲ ನೀಡಿ ರಾಜಣ್ಣ ಅವರ ವಾಹನ ಸ್ಟಾರ್ಟ್ ಆಗಿದೆ. ಗಾಡಿ ಸ್ಟಾರ್ಟ್ ಆದ ಕೂಡಲೇ ಅಂಗವಿಕಲ ಕಳ್ಳ ಕೂಡಲೇ ಅಲ್ಲಿಂದ ಪರಾರಿಯಾಗಿದ್ದಾನೆ.
ಕಳ್ಳ ಬೈಕ್ ಕಳವು ಮಾಡುತ್ತಿರುವ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಳ್ಳನ ಎಡಗಾಲು ಊನವಾಗಿದ್ದು, ಪಾರ್ಕಿಂಗ್ ಸ್ಥಳಕ್ಕೆ ಕುಂಟುತ್ತಾ ಬಂದಿರುವುದು ಸ್ಪಷ್ಟವಾಗಿ ಗೋಚರವಾಗಿದೆ.
ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತಿಳಿಸಿದ್ದಾರೆ.