ಲಾಲ್ಬಾಗ್, ಕಬ್ಬನ್ಪಾರ್ಕ್ ಗಳಲ್ಲಿ ನೇತಾಡಲಿವೆ ಸಿಸಿಟಿವಿ
ಬೆಂಗಳೂರು, ಸೆ.17: ರಾಜಧಾನಿಯ ಹೆಗ್ಗುರುತುಗಳಾದ ಲಾಲ್ ಬಾಗ್ ಮತ್ತು ಕಬ್ಬನ್ ಪಾರ್ಕ್ ನಲ್ಲಿಯೂ ಇನ್ನು ಮುಂದೆ ಸಿಸಿಟಿವಿ ಕ್ಯಾಮರಾಗಳು ನೇತಾಡಲಿವೆ. ಸೋ, ಸಿಸಿಟಿವಿ ಕಣ್ಗಾವಲು ಇರುವುದರಿಂದ ದುಷ್ಕರ್ಮಿಗಳು ಅಂದರೆ ಸುವಿಶಾಲ ಪಾರ್ಕುಗಳ ಆಶಯಕ್ಕೆ ಧಕ್ಕೆ ತರುವಂತೆ ನಡೆದುಕೊಳ್ಳುವ ದುಷ್ ಕರ್ಮಿಗಳು ಅದರಲ್ಲೂ ಲೈಲಾ-ಮಜ್ನೂಗಳು, ಹೂ ಗಿಡಗಳನ್ನು ಕೀಳುವ ಕಡಿಗೇಡಿಗಳು ಇನ್ಮುಂದೆ ವಸಿ ಜಾಗ್ರತೆ ವಹಿಸುವುದು ಒಳಿತು.
ಪ್ರಾಯೋಗಿಕವಾಗಿ ಉದ್ಯಾನವನದ ಡಬ್ಬಲ್ ರೋಡ್ ಗೇಟ್ ಬಳಿ ಒಂದು ಕ್ಯಾಮೆರಾ ಅಳವಡಿಸಲಾಗುತ್ತಿದೆ. ಮುಂದಿನ ಒಂದು ತಿಂಗಳೊಳಗೆ ಉದ್ಯಾನದ ನಾಲ್ಕೂ ಪ್ರವೇಶ ದ್ವಾರಗಳು ಹಾಗೂ ಗಾಜಿನ ಮನೆ ಬಳಿ ಹೀಗೆ ಒಟ್ಟು 5 ಕಡೆ ಹೈ ರೆಸೆಲ್ಯೂಷನ್/ 360 ಡಿಗ್ರಿಯಲ್ಲಿ ತಿರುಗುವ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ.
ಈ ಮಧ್ಯೆ, ಕಬ್ಬನ್ ಪಾರ್ಕ್ ಅಭಿವೃದ್ಧಿಯ ಹೆಸರಿನಲ್ಲಿ ಪಾರ್ಕ್ನ ಮೂಲ ಹೆಸರನ್ನು 'ಶ್ರೀ ಚಾಮರಾಜೇಂದ್ರ ಉದ್ಯಾನವನ' ಎಂದು ಮರುನಾಮಕರ ಮಾಡಲು ಮುಂದಾಗಿದ್ದ ಕಬ್ಬನ್ಪಾರ್ಕ್ ಉಪ ನಿರ್ದೇಶಕ ಮಹಾಂತೇಶ್ ಮುರುಗಾಡು ಅವರ ಪ್ರಯತ್ನಕ್ಕೆ ಹಿನ್ನಡೆಯಾಗಿದ್ದು, ಜನ ನಮಗೆ ಕಬ್ಬನ್ ಅವರ ಪಾರ್ಕೇ ಇರಲಿ ಎಂದು ಪಟ್ಟುಹಿಡಿದಿದ್ದಾರೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತದ ಬೆಳ್ಳಿ ಮಹೋತ್ಸವದ ಪ್ರಯುಕ್ತ 1948 ರಲ್ಲಿಯೇ ಕಬ್ಬನ್ ಪಾರ್ಕ್ಗೆ ಶ್ರೀ ಚಾಮರಾಜೇಂದ್ರ ಉದ್ಯಾನವನ ಎಂದು ಮರು ನಾಮಕರಣ ಮಾಡಲಾಗಿತ್ತು. ಆದರೆ, ಮಾಹಿತಿ ಕೊರತೆಯಿಂದ ಜನರು ಈಗಲೂ 'ಕಬ್ಬನ್ ಪಾರ್ಕ್' ಎಂದೇ ಕರೆಯುತ್ತಾರೆ. ಹೀಗಾಗಿ, ಪ್ರವೇಶ ದ್ವಾರದಲ್ಲಿ ಈ ಕುರಿತು ಬೃಹತ್ ಫಲಕ ಅಳವಡಿಸಲಾಗುವುದು ಎಂದು ಸಾಹೇಬರು ತಿಳಿಸಿದ್ದರು.
ಇದರ ಹಿರತಾಗಿ ಮುಂದಿನ ಒಂದು ವರ್ಷದಲ್ಲಿ ಕಬ್ಬನ್ ಪಾರ್ಕ್ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಬ್ಬನ್ ಪಾರ್ಕ್ನಲ್ಲಿ ಮೂಲಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ. ಹೊಸದಾಗಿ ಮೂರು ಶೌಚಾಲಯ, 92 ಎಕರೆ ವಿಸ್ತಾರವುಳ್ಳ ಈ ಉದ್ಯಾನದ ಮಾರ್ಗವನ್ನು ಸೂಚಿಸಲು ಎರಡು ಕಡೆ ನಕ್ಷೆಯನ್ನು ಹಾಕಲಾಗುವುದು.
7 ಕಡೆ ಪ್ರವೇಶ ದ್ವಾರ ನಿರ್ಮಿಸಲಾವುದು. ಆ ಪೈಕಿ ಮೂರು ಕಡೆ ಲಾಲ್ ಬಾಗ್ ಮಾದರಿಯಲ್ಲಿ ದೊಡ್ಡದಾದ ಪ್ರವೇಶದ್ವಾರ ನಿರ್ಮಿಸಲು ಮತ್ತು ಭದ್ರತಾ ದೃಷ್ಟಿಯಿಂದ ಎಲ್ಲಾ ಪ್ರವೇಶ ದ್ವಾರಗಳಲ್ಲಿ ಸೈರನ್ ಹಾಗೂ ಸಿಸಿಟಿವಿ ಅಳವಡಿಸಲು ಉದ್ದೇಶಿಸಲಾಗಿದೆ.
ಮಳೆ ಬಂದಾಗ ಆಶ್ರಯ ಪಡೆಯಲು ಎರಡು ಸುಸಜ್ಜಿತ ಚಾವಣಿಗಳು, ಎರಡು ಕುಡಿಯುವ ನೀರಿನ ಟ್ಯಾಂಕ್, 35-40 ನೂತನ ಆಸನಗಳು, ಅಲಂಕಾರಿಕ ಡಸ್ಟ್ ಬಿನ್ ಗಳನ್ನು ಹಾಕುವುದು, ಉದ್ಯಾನದಲ್ಲಿರುವ ಐದು ಪ್ರತಿಮೆಗಳ ಮುಂಭಾಗದಲ್ಲಿ ಆಯಾ ಪ್ರತಿಮೆಗಳ ಮಾಹಿತಿ ಫಲಕಗಳನ್ನು ಹಾಕುವುದು, ಮತ್ತಷ್ಟು ಹುಲ್ಲುಹಾಸು ಹಾಕುವುದು, 35 ಬಗೆಯ 100 ವಿಶೇಷ ಸಸಿಗಳನ್ನು ನೆಡುವುದರ ಬಗ್ಗೆ ಇಲಾಖೆ ತೀರ್ಮಾನಿಸಿದೆ. ಅದರಂತೆ
ಹೂ ಗಿಡಗಳೊಂದಿಗೆ ಔಷಧೀಯ ಸಸ್ಯಗಳನ್ನು ಬೆಳೆಸಲು ಸಹ ಉದ್ದೇಶಿಸಿಸಲಾಗಿದೆ. ಮ್ಯಾಗ್ನೋಲಿಯಂ ಸಸಿಗಳ ಜೀನ್ ಬ್ಯಾಂಕ್ ಅಭಿವೃದ್ಧಿ. ಹಾಪ್ ಕಾಮ್ಸ್ ಮಳಿಗೆಗೆ ಅವಕಾಶ ನೀಡಲಾಗುತ್ತದೆ. ಕೇಂದ್ರ ಗ್ರಂಥಾಲಯ, ವೆಂಕಟಪ್ಪ ಆರ್ಟ್ ಗ್ಯಾಲರಿ ಹಾಗೂ ಬಾಲ ಭವನದ ಬಳಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು.