ಬೆಂಗಳೂರು: ಬಿಲ್ ಕಟ್ಟದಕ್ಕೆ ಸಿಸಿಟಿವಿ ಕ್ಯಾಮೆರಾಗಳ ವಿದ್ಯುತ್ ಸಂಪರ್ಕ ಕಟ್!
ಬೆಂಗಳೂರು, ಏಪ್ರಿಲ್ 20 : ಬೆಂಗಳೂರಿನ ಹಲವೆಡೆ ಸಿಸಿಟಿವಿ ಕ್ಯಾಮೆರಾಗಳು ಸರಿಯಾಗಿ ಕೆಲಸ ಮಾಡದೆ ಇರುವುದರಿಂದ ಹಲವು ಅಪರಾಧಗಳಿಗೆ ಸಿಗುವ ಪ್ರಮುಖ ಸಾಕ್ಷಿ ನಾಶವಾಗುತ್ತಿದೆ ಎಂದು ಸಾರ್ವಜನಿಕರಿಂದ ದೂರು ಕೇಳಿ ಬರುತ್ತಿದೆ. ಬೆಂಗಳೂರಿನ ಇಂದಿರಾನಗರದಲ್ಲೂ ಸಹ ಇದೇ ಸಮಸ್ಯೆ ಎದುರಾಗಿದ್ದು, ಸಿಸಿಟಿವಿಗೆ ಸಂಬಂಧಿಸಿದ ವಿದ್ಯುತ್ ಬಿಲ್ ಪಾವತಿ ಮಾಡದ ಕಾರಣ ಸಿಸಿಟಿವಿಯ ವಿದ್ಯುತ್ ಸಂರ್ಪಕವನ್ನು ಕಡಿತಗೊಳಿಸಲಾಗಿದೆ. ಇದರಿಂದಾಗಿ ನಗರದಲ್ಲಿ ಸಿಸಿಟಿವಿ ಹಾಕಿದ್ದರೂ ಸಹ ನಿರ್ವಹಣೆಯಾಗುತ್ತಿಲ್ಲ ಎಂದು ಇಂದಿರಾನಗರದ ನಿವಾಸಿಗಳು ದೂರಿದ್ದಾರೆ.
ನಗರದಲ್ಲಿ ಹಾಕಿರುವ ಎಷ್ಟೋ ಸಿಸಿಟಿವಿ ಕ್ಯಾಮರಗಳ ಪರಿಸ್ಥಿತಿ ಹೀಗೆ ಇದೆ ಅಂತ ಇಂದಿರಾನಗರದ ನಿವಾಸಿಗಳು ಹೇಳಿದ್ದಾರೆ. ಅಲ್ಲದೆ ನಿಮ್ಮ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನ ಒಮ್ಮೆ ಪರಿಶೀಲಿಸಿ ನೋಡಿ ವಿದ್ಯುತ್ ಸಂಪರ್ಕವಿಲ್ಲದೆ ಸಿಸಿಟಿವಿ ಕ್ಯಾಮರಗಳು ನಿಷ್ಕ್ರಿಯಯವಾಗಿರುತ್ತವೆ.
''ನಾವು ಸಹ ಇತ್ತೀಚಿಗೆ ನಮ್ಮ ನಗರದಲ್ಲಿ ಉಂಟಾದ ಅಪರಾಧಕ್ಕೆ ಸಂಬಂಧಿಸಿದ ಸಾಕ್ಷಿ ಹುಡುಕಲು ಸಿಸಿಟಿವಿಯನ್ನ ಪರೀಕ್ಷಿಸಿದೆವು. ಆದರೆ ಅಪರಾಧ ನಡೆದ ಸ್ಥಳದಲ್ಲಿ ಸಿಸಿಟಿವಿ ಇದ್ದರೂ ಸಹ ಅದು ನಿರ್ವಹಣೆಯಾಗುತ್ತಿರಲಿಲ್ಲ. ಅಲ್ಲದೆ ಈ ಸಿಸಿಟಿವಿಯನ್ನು ಅಳವಡಿಸಿ ವರ್ಷಗಳೇ ಕಳೆದಿದ್ದರೂ ಅದರಲ್ಲಿ ಯಾವುದೇ ದೃಶ್ಯ ಸೆರೆಯಾಗದಿರುವುದನ್ನ ಕಂಡು ಆಶ್ಚರ್ಯವಾಯಿತು. ಇದಕ್ಕೆ ಕಾರಣ ಏನು ಎಂದು ಹುಡುಕಿದಾಗ ಸಿಸಿಟಿವಿಯ ಬಿಲ್ ಪಾವತಿ ಮಾಡದೇ ಇರುವುದರಿಂದ ವಿದ್ಯುತ್ ಸಂಪರ್ಕವನ್ನ ಕಡಿತಗೊಳಿಸಲಾಗಿದೆ ಅಂತ ಗೊತ್ತಾಯಿತು,'' ಎಂದು ಸ್ಥಳೀಯ ನಿವಾಸಿಗಳು ಹೇಳಿದ್ದಾರೆ.
ವಿದ್ಯುತ್ ಬಿಲ್ ಪಾವತಿ ಮಾಡದ ಕಾರಣ ಬೆಸ್ಕಾಂ ಸಿಸಿಟಿವಿ ಕ್ಯಾಮೆರಾಗಳ ವಿದ್ಯುತ್ ಸಂಪರ್ಕವನ್ನು ಕಟ್ ಮಾಡಿದೆ. ಪರಿಣಾಮ ನಗರದಲ್ಲಿರುವ 24 ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕವೂ ಕಟ್ ಆಗಿದ್ದು, ಯಾವ ಕ್ಯಾಮೆರಾಗಳು ಸಹ ನಿರ್ವಹಣೆಯಾಗುತ್ತಿಲ್ಲ. ಇನ್ನು ಸಿಸಿಟಿವಿಗೆ ಸಂಬಂಧಿಸಿದ ವಿದ್ಯುತ್ ಬಿಲ್ ಪಾವತಿ ಮಾಡುವ ಕೆಲಸ ಬಿಬಿಎಂಪಿ ಹಾಗೂ ಎಇಇಗೆ ಇದೆ. ಹಾಗಿದ್ದರೂ ವಿದ್ಯುತ್ ಸಂಪರ್ಕ ಕಡಿತವಾದರೂ ಸಮಸ್ಯೆಯನ್ನ ಬಗೆಹರಿಸಲು ಬಿಬಿಎಂಪಿ ಮುಂದಾಗದೇ ನಿರ್ಲಕ್ಷ್ಯ ಧೋರಣೆ ವಹಿಸಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಐ ಚೇಂಜ್ ಇಂದಿರಾನಗರದ ಸದಸ್ಯೆಯಾಗಿರುವ ಸ್ನೇಹಾ ನಂದಿಹಾಳ್ ಸಿಸಿಟಿವಿ ಕ್ಯಾಮರಗಳ ಸಮಸ್ಯೆ ಕುರಿತು ಮಾತನಾಡಿದ್ದು, "ನಗರದಲ್ಲಿ ಸಿಸಿಟಿವಿ ಅಳವಡಿಸಿ ವರ್ಷಗಳೆ ಕಳೆದರೂ ಸಹ ಇನ್ನು ಸರಿಯಾದ ನಿರ್ವಹಣೆಯಾಗುತ್ತಿಲ್ಲ. ಸಿಸಿಟಿವಿಗಳನ್ನ ನಿರ್ವಹಿಸಲು ಮತ್ತು ನಿಯಂತ್ರಿಸಲು ಯಾವುದೇ ಸಮರ್ಪಕ ವ್ಯವಸ್ಥೆ ಇಲ್ಲ. ಅಲ್ಲದೆ ಸಿಸಿಟಿವಿ ನಿರ್ವಹಣೆ ಮಾಡಲು ಯಾವುದೇ ಇಲಾಖೆಯ ಬಳಿ ಹಣವಿಲ್ಲ. ಇದರಿಂದಾಗಿ ನಾಗರಿಕರಿಗೆ ಹೆಚ್ಚು ಸಮಸ್ಯೆಗಳಾಗುತ್ತಿದೆ. ಇನ್ನು ಪೊಲೀಸ್ ಅಧಿಕಾರಿಗಳು ಸಹ ಮನೆಗಳ ಮುಂದೆ ಅಳವಡಿಸಿರುವ ಖಾಸಗಿ ಸಿಸಿಟಿವಿ ಕ್ಯಾಮೆರಾಗಳನ್ನೇ ರಸ್ತೆಗೆ ಕಾಣುವ ಹಾಗೇ ಅಳವಡಿಸಿ ಅಂತ ಕೇಳುತ್ತಾರೆ. ಇದಿಷ್ಟೇ ಅಲ್ಲದೆ ಹೆಚ್ಚಿನ ಪೊಲೀಸ್ ಠಾಣೆಗಳಲ್ಲಿ ಲೈವ್ ಸ್ಟ್ರೀಮ್ ಮಾಡಲು ಸಹ ಠಾಣೆಗಳಲ್ಲಿ ಇಂಟರ್ನೆಟ್ ಸಂಪರ್ಕ ಕೂಡ ಇಲ್ಲ. ಇಷ್ಟೆಲ್ಲಾ ಸಮಸ್ಯೆ ಇದ್ದರೂ ಸಹ ಬಿಬಿಎಂಪಿ, ಬೆಸ್ಕಾಂ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೇ ಕೈ ಕಟ್ಟಿ ಕುಳಿತಿದೆ," ಅಂತ ನಂದಿಹಾಳ್ ಬೇಸರ ವ್ಯಕ್ತಪಡಿಸಿದ್ದಾರೆ.
ಇದು ಕೇವಲ ಇಂದಿರಾನಗರದ ಸಮಸ್ಯೆ ಮಾತ್ರವಲ್ಲ. ನಗರದ ಎಷ್ಟೋ ಭಾಗಗಳಲ್ಲಿ ಇದೇ ರೀತಿಯ ಸಮಸ್ಯೆ ಇದೆ. ಸರ್ಕಾರ ಅಪರಾಧ ತಡೆಗಟ್ಟುವ ಸಲುವಾಗಿ ನಗರದಲ್ಲಿ ಸಿಸಿಟಿವಿ ಕಣ್ಗಾವಲನ್ನು ಇರಿಸಿದ್ದೇವೆ ಅಂತ ಹೇಳುತ್ತದೆ. ಆದರೆ ಅಳವಡಿಸಿರುವ ಎಷ್ಟೋ ಸಿಸಿಟಿವಿಗಳು ವರ್ಷಗಳೂ ಕಳೆದರೂ ಸರಿಯಾಗಿ ನಿರ್ವಹಣೆಯಾಗದೆ ನಿಷ್ಕ್ರಿಯಗೊಂಡಿದೆ. ಆದರೆ ಇದರ ಹೊಣೆ ಹೊತ್ತಿರುವ ಬಿಬಿಎಂಪಿ ಮಾತ್ರ ಸಮಸ್ಯೆ ಬಗ್ಗೆ ಗಮನ ಹರಿಸದೇ ಕಣ್ಣು ಮುಚ್ಚಿ ಕುಳಿತಿದೆ. ಇದರಿಂದಾಗಿ ನಗರದಲ್ಲಿ ಮತ್ತಷ್ಟು ಅಪರಾಧಗಳು ಹೆಚ್ಚಾಗುವ ಸಾಧ್ಯತೆ ಇದೆ. ನಗರದ ಎಲ್ಲಾ ಕಡೆ ಈ ಪ್ರದೇಶ ಸಿಸಿಟಿವಿ ಕಣ್ಗಾವಲಿನಲ್ಲಿರಲಿದೆ ಅಂತ ಬೋರ್ಡ್ ಮಾತ್ರ ಹಾಕಲಾಗಿದೆ.
ಆದರೆ ಇದರಲ್ಲಿ ಎಷ್ಟೋ ಕ್ಯಾಮೆರಾಗಳು ವರ್ಕ್ ಆಗುತ್ತಿದೆಯೋ ಇಲ್ಲವೂ ಎಂಬುದನ್ನ ಮಾತ್ರ ಪರಿಶೀಲಿಸಿಲ್ಲ. ಈ ಸಮಸ್ಯೆಯಿಂದಾಗಿ ಅಪರಾಧಿಗಳನ್ನ ಹಿಡಿಯಲು ಸಹಾಯಕವಾಗಿರುವ ಪ್ರಮುಖ ಅಸ್ತ್ರವೇ ಇಲ್ಲದಂತೆ ಆಗುತ್ತದೆ. ಹೀಗಾಗಿ ಸರ್ಕಾರ ಕೂಡ ಈ ಬಗ್ಗೆ ಕೂಡಲೇ ಎಚ್ಚೆತ್ತು ಸಂಬಂಧ ಪಟ್ಟ ಅಧಿಕಾರಿಗಳ ಕೈಯಲ್ಲಿ ಕೆಲಸ ಮಾಡಿಸಬೇಕಿದೆ.
Recommended Video