ಸಂಜನಾ, ರಾಗಿಣಿಗೆ ಜಾಮೀನು ನೀಡದಿದ್ದರೆ ಸ್ಫೋಟ: ತುಮಕೂರಿಂದ ಬಂದ ಬೆದರಿಕೆ ಪತ್ರ
ಬೆಂಗಳೂರು, ಅಕ್ಟೋಬರ್ 20: ಡ್ರಗ್ಸ್ ಪ್ರಕರಣದಲ್ಲಿ ಬಂಧನದಲ್ಲಿರುವ ನಟಿಯರಾ ಸಂಜನಾ ಗಲ್ರಾನಿ ಮತ್ತು ರಾಗಿಣಿ ದ್ವಿವೇದಿ ಅವರಿಗೆ ಜಾಮೀನು ನೀಡಿ ಬಿಡುಗಡೆ ಮಾಡುವಂತೆ ನ್ಯಾಯಾಲಯಕ್ಕೆ ಬೆದರಿಕೆ ಪತ್ರ ರವಾನಿಸಲಾಗಿದೆ.
ಪರಪ್ಪನ ಅಗ್ರಹಾರದಲ್ಲಿರುವ ನಟಿಯರಿಗೆ ಜಾಮೀನು ನೀಡುವಂತೆ ಮತ್ತು ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣದಿಂದ ಹಿಂದೆ ಸರಿಯುವಂತೆ ಪತ್ರದಲ್ಲಿ ಬೆದರಿಸಲಾಗಿದೆ. ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ತುಮಕೂರು ವಿಳಾಸದಿಂದ ಈ ಪತ್ರ ಬಂದಿದೆ.
ಆದಿತ್ಯ ಆಳ್ವ ನಿವಾಸದಲ್ಲಿ ಮಾದಕ ವಸ್ತು ಪತ್ತೆ; ಸಿಸಿಬಿ ಪೊಲೀಸ್
ಸಿಸಿಎಚ್ 36 ನ್ಯಾಯಾಲಯಕ್ಕೆ ಪತ್ರ ಬಂದಿದ್ದು, ಕವರ್ನ ಒಳಗೆ ಬಾಂಬ್ ಇಟ್ಟಿದ್ದೇವೆ ಎಂದು ಬರೆದಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಶ್ವಾನದಳ ಮತ್ತು ಬಾಂಬ್ ಪತ್ತೆ ತಂಡ ಪರಿಶೀಲನೆ ನಡೆಸಿದಾಗ ಕವರ್ನಲ್ಲಿ ಬಂಡೆ ಒಡೆಯಲು ಬಳಸುವ ಡಿಟೋನೇಟರ್ ಪತ್ತೆಯಾಗಿದೆ.
ಎನ್ಡಿಪಿಎಸ್ ಕೋರ್ಟ್ಗೆ 3 ಅರ್ಜಿ ಸಲ್ಲಿಸಿದ ನಟಿ ರಾಗಿಣಿ
ಎರಡೂ ಪ್ರಕರಣಗಳ ಆರೋಪಿಗಳು ಅಮಾಯಕರಾಗಿದ್ದು, ಯಾವುದೇ ತಪ್ಪುಗಳನ್ನು ಮಾಡಿಲ್ಲ. ಹೀಗಾಗಿ ಬಂಧಿಸಿದ ಪ್ರತಿಯೊಬ್ಬರಿಗೂ ಜಾಮೀನು ನೀಡಬೇಕು. ಎಲ್ಲ ಆರೋಪಿಗಳಿಗೆ ಜಾಮೀನು ಸಿಗಲು ಸಹಕರಿಸಬೇಕು ಎಂದು ನ್ಯಾಯಾಧೀಶ ಸೀನಪ್ಪ ಅವರಿಗೆ ಡಿನೋನೇಟರ್ ಇರುವ ಪತ್ರ ಕಳುಹಿಸಲಾಗಿದೆ. ಮುಂದೆ ಓದಿ.
ಪೊಲೀಸರಿಗೂ ಬೆದರಿಕೆ
ಹಾಗೆಯೇ ಸಂಜನಾ ಮತ್ತು ರಾಗಿಣಿ ಅವರ ಡ್ರಗ್ಸ್ ಪ್ರಕರಣ ಹಾಗೂ ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣದ ತನಿಖೆಯಿಂದ ಹಿಂದೆ ಸರಿಯಬೇಕು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್, ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಉಪ ಪೊಲೀಸ್ ಆಯುಕ್ತ ಕೆ.ಪಿ. ರವಿಕುಮಾರ್ ಅವರಿಗೂ ಪತ್ರ ಬರೆಯಲಾಗಿದೆ. ಜಾಮೀನು ನೀಡದೆ ಹೋದರೆ ಹಾಗೂ ತನಿಖೆಯಿಂದ ಹಿಂದೆ ಸರಿಯದಿದ್ದರೆ ನ್ಯಾಯಾಧೀಶರು ಮತ್ತು ಪೊಲೀಸ್ ಅಧಿಕಾರಿಗಳ ಕಾರು, ಕಚೇರಿಗಳನ್ನು ಸ್ಫೋಟಿಸುವ ಎಚ್ಚರಿಕೆ ನೀಡಲಾಗಿದೆ.
ಗಾಬರಿಗೊಂಡ ನ್ಯಾಯಾಧೀಶ
ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿರುವ 36ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶ ಸೀನಪ್ಪ ಅವರ ಕಚೇರಿಗೆ ಪಾರ್ಸೆಲ್ ಬಂದಿತ್ತು. ಅದರಲ್ಲಿ ಪತ್ರದ ಜತೆಗೆ ಡಿಟೋನೇಟರ್ ಇರಿಸಲಾಗಿತ್ತು. ಇದರಿಂದ ಆತಂಕಗೊಂಡ ನ್ಯಾಯಾಧೀಶರು ಮತ್ತು ವಕೀಲರು ಅಲ್ಲಿಂದ ಸುರಕ್ಷಿತ ಸ್ಥಳಕ್ಕೆ ತೆರಳಿದ್ದರು.
ಡಿಟೋನೇಟರ್ ನಿಷ್ಕ್ರಿಯ
ಸ್ಥಳಕ್ಕೆ ಬಂದ ಸಿಸಿಬಿ ಡಿಸಿಪಿ ಕೆ.ಪಿ. ರವಿಕುಮಾರ್, ಪಾರ್ಸೆಲ್ ತೆರೆದು ನೋಡಿದಾಗ ಡಿಟೋನೇಟರ್ಗೆ ಸಂಪರ್ಕಿಸಿದ ವೈರ್ಗಳು ಕಂಡುಬಂದವು. ಅವುಗಳನ್ನು ಟೈಮ್ ಬ್ಯಾಟರಿಗೆ ಸಂಪರ್ಕಿಸಲಾಗಿತ್ತು. ವೈರ್ಗಳನ್ನು ಕತ್ತರಿಸಿ ಸ್ಫೋಟಕವನ್ನು ನಿಷ್ಕ್ರಿಯಗೊಳಿಸಲಾಯಿತು. ಕೂಡಲೇ ಅಲ್ಲಿಗೆ ತೆರಳಿದ ಅಗ್ನಿಶಾಮಕ ದಳ, ಶ್ವಾನದಳ ಕೋರ್ಟ್ ಆವರಣ ಮತ್ತು ಕಾರುಗಳಲ್ಲಿ ಪರಿಶೀಲನೆ ನಡೆಸಿತು.
Recommended Video
ಚೇಳೂರು ಅಂಚೆ ಕಚೇರಿ
ಪೊಲೀಸ್ ಅಧಿಕಾರಿಗಳಿಗೆ ಬಂದ ಪಾರ್ಸೆಲ್ನಲ್ಲಿ ಯಾವುದೇ ಸ್ಫೋಟಕ ಇರಲಿಲ್ಲ. ಎರಡೂ ಪ್ರಕರಣಗಳ ಆರೋಪಿಗಳಿಗೆ ಜಾಮೀನು ನೀಡಬೇಕು. ಇಲ್ಲವಾದರೆ ಸ್ಫೋಟ ನಡೆಸಿ ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ. ಈ ಪಾರ್ಸೆಲ್ ಬಾಕ್ಸ್ ಮತ್ತು ಪತ್ರಗಳನ್ನು ತುಮಕೂರು ಜಿಲ್ಲೆ ಗುಬ್ಬಿ ತಾಲೂಕಿನ ಚೇಳೂರು ಅಂಚೆ ಕಚೇರಿಯಿಂದ ರವಾನಿಸಲಾಗಿದೆ. ಸಿಸಿಬಿಯ ಒಂದು ತಂಡ ಚೇಳೂರಿಗೆ ತೆರಳಿದೆ. ಹಲಸೂರು ಗೇಟ್ ಠಾಣೆಯಲ್ಲಿ ಎರಡು ಪ್ರತ್ಯೇಕ ಎಫ್ಐಆರ್ ದಾಖಲಿಸಲಾಗಿದೆ.