ಸಿದ್ಧಾರ್ಥ ಕನಸಿನ ಕೂಸು ಕೆಫೆ ಕಾಫಿ ಡೇ ಮುಂದುವರೆಸಲು ನಿರ್ದೇಶಕರ ತೀರ್ಮಾನ
ಬೆಂಗಳೂರು, ಜುಲೈ 31: ವಿಜಿ ಸಿದ್ಧಾರ್ಥ ಅವರ ಕನಸಿನ ಕೂಸಾಗಿದ್ದ ಕಾಫಿ ಕೆಫೆ ಡೇ ಮುಚ್ಚದಿರಲು ಸಿಸಿಡಿ ನಿರ್ದೇಶಕರು ತೀರ್ಮಾನ ತೆಗೆದುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಸಿದ್ಧಾರ್ಥ ಅವರು ಕಾಣೆಯಾಗಿದ್ದ ದಿನದಿಂದ ಕಾಫಿ ಡೇ ಷೇರು ಕೂಡ ಕುಸಿದು ಒಂದೇ ದಿನದಲ್ಲಿ 800 ಕೋಟಿಗೂ ಅಧಿಕ ನಷ್ಟ ಅನುಭವಿಸಿತ್ತು. ಹೀಗಾಗಿ ಸಿಸಿಡಿಯ ಮುಂದಿನ ಭವಿಷ್ಯದ ಕುರಿತು ಬೆಂಗಳೂರಿನಲ್ಲಿರುವ ಕೇಂದ್ರ ಕಚೇರಿಯಲ್ಲಿ ನಿರ್ದೇಶಕರು ಸಭೆ ಕರೆದಿದ್ದರು.
ಸಿದ್ದಾರ್ಥ ಸಾವಿನ ನಂತರ ನೆಲಕಚ್ಚಿದ ಕಾಫಿ ಡೇ ಷೇರುಗಳು
ಸಭೆಯಲ್ಲಿ ಸಿದ್ಧಾರ್ಥ ಅವರ ಕನಸಿನ ಕೂಸಾದ ಕೆಫೆ ಕಾಫಿ ಡೇಯನ್ನು ಯಾವುದೇ ಕಾರಣಕ್ಕು ಮುಚ್ಚಬಾರದು ಎಂಬ ತೀರ್ಮಾನ ವನ್ನು ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಕಾಫಿ ಡೇ ಷೇರು ಶೇ. 20 ರಷ್ಟು ಕುಸಿತ, ಮಂಗಳವಾರ ಶೇ. 18 ರಷ್ಟು ಕುಸಿತ ಕಂಡಿತ್ತು, ಒಟ್ಟು 800 ಕೋಟಿಗೂ ಅಧಿಕ ನಷ್ಟವಾಗಿತ್ತು.
ದೇಶದ ಸಾಲ ವ್ಯವಸ್ಥೆಯ ದುಸ್ಥಿತಿಗೆ ಬಲಿಪಶುವಾದರೇ ಸಿದ್ಧಾರ್ಥ?
ವಿಜಿ ಸಿದ್ಧಾರ್ಥ ಅವರು ಸೋಮವಾರ ಸಂಜೆಯಿಂದ ನಾಪತ್ತೆಯಾಗಿದ್ದರು. ಒಂದು ದಿನ ಪೂರ್ತಿ ಕಾರ್ಯಾಚರಣೆ ನಡೆಸಿದ್ದರೂ ಅವರು ಪತ್ತೆಯಾಗಿರಲಿಲ್ಲ. ಬಳಿಕ ಇಂದು ಬುಧವಾರ ಮೀನುಗಾರರು ನೇತ್ರಾವತಿ ನದಿಯಲ್ಲಿ ಹೋಗುತ್ತಿರುವಾಗ ನದಿ ಮಧ್ಯದಲ್ಲಿ ಮೃತದೇಹ ಪತ್ತೆಯಾಗಿತ್ತು. ಬಳಿಕ ದಡಕ್ಕೆ ತಂದು ಪೊಲೀಸರಿಗೆ ಮಾಹಿತಿ ನೀಡಿದ್ದರು.