ಆದಿತ್ಯ ಆಳ್ವಾ, ಶಿವಪ್ರಕಾಶ್ ಬಂಧನಕ್ಕಾಗಿ ಲುಕ್ ಔಟ್ ನೋಟಿಸ್
ಬೆಂಗಳೂರು, ಸೆಪ್ಟೆಂಬರ್ 22 : ಬೆಂಗಳೂರಿನ ಮಾದಕ ದ್ರವ್ಯ ಪೂರೈಕೆ ಜಾಲದ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ಎಫ್ಐಆರ್ನಲ್ಲಿ ದಾಖಲಾಗಿರುವ ಇಬ್ಬರು ಆರೋಪಿಗಳ ಬಂಧನಕ್ಕೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ. ಸೆಪ್ಟೆಂಬರ್ 4ರ ಬಳಿಕ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.
ಮಂಗಳವಾರ ಸಿಸಿಬಿ ಪೊಲೀಸರು ಆದಿತ್ಯ ಆಳ್ವಾ ಮತ್ತು ಶಿವಪ್ರಕಾಶ್ ಚಿಪ್ಪಿ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿದ್ದಾರೆ. ನಟಿ ರಾಗಿಣಿ ಮಾಜಿ ಗೆಳೆಯ ಶಿವಪ್ರಕಾಶ್ ಚಿಪ್ಪಿ ಪ್ರಕರಣದಲ್ಲಿ ಎ1 ಆರೋಪಿ. ಆದಿತ್ಯ ಆಳ್ವಾ ಎ6 ಆರೋಪಿ.
ಸೆಪ್ಟೆಂಬರ್ 15ರಂದು ಸಿಸಿಬಿ ಪೊಲೀಸರು ಆದಿತ್ಯ ಆಳ್ವಾ ಒಡೆತನದ 'ಹೌಸ್ ಆಫ್ ಲೈಫ್' ರೆಸಾರ್ಟ್ ಮೇಲೆ ದಾಳಿ ನಡೆಸಿದ್ದರು. ಸೆಪ್ಟೆಂಬರ್ 4ರಿಂದಲೇ ಆದಿತ್ಯ ಆಳ್ವಾ ನಾಪತ್ತೆಯಾಗಿದ್ದಾರೆ. ಈಗ ಲುಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿದೆ.
ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಅವರು ಈ ಕುರಿತು ಮಾತನಾಡಿದ್ದಾರೆ. "ವಿವಿಧ ತನಿಖಾ ಸಂಸ್ಥೆಗಳ ಮಾಹಿತಿಯಂತೆ ಇಬ್ಬರೂ ದೇಶ ಬಿಟ್ಟು ಪರಾರಿಯಾಗಿಲ್ಲ. ನಾವು ಅವರ ಹುಡುಕಾಟಕ್ಕೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದೇವೆ" ಎಂದು ಹೇಳಿದ್ದಾರೆ.
ಆರೋಪಿಗಳ ಪತ್ತೆಗೆ ಪ್ರಯತ್ನ
ಪೊಲೀಸರು ದಾಖಲು ಮಾಡಿರುವ ಎಫ್ಐಆರ್ನಲ್ಲಿ ಶಿವಪ್ರಕಾಶ್ ಚಿಪ್ಪ ಆರೋಪಿ ನಂಬರ್ 1, ಆದಿತ್ಯ ಆಳ್ವಾ ಆರೋಪಿ ನಂಬರ್ 6. ಸಿಸಿಬಿ ಪೊಲೀಸರು ಪ್ರಕರಣದ ತನಿಖೆ ಚುರುಕುಗೊಳಿಸುತ್ತಿದ್ದಂತೆ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಈಗ ಅವರ ಪತ್ತೆಯಾಗಿ ಲುಕ್ ಔಟ್ ನೋಟಿಸ್ ಜಾರಿಯಾಗಿದೆ.
ಶಿವಪ್ರಕಾಶ್ ಚಿಪ್ಪಿ
ಚಿತ್ರ ನಿರ್ಮಾಪಕ ಶಿವಪ್ರಕಾಶ್ ಚಿಪ್ಪಿ ನ್ಯಾಯಾಂಗ ಬಂಧನದಲ್ಲಿರುವ ನಟಿ ರಾಗಿಣಿ ದ್ವಿವೇದಿ ಆಪ್ತ ಗೆಳೆಯ. ಆದರೆ, ಈಗ ಅವರ ಜೊತೆ ಸಂಪರ್ಕದಲ್ಲಿ ಇಲ್ಲ ಎಂದು ರಾಗಿಣಿ ಸಿಸಿಬಿ ಪೊಲೀಸರಿಗೆ ಹೇಳಿದ್ದರು. ಆರೋಪಿ ದೇಶಬಿಟ್ಟು ಹೋಗಿಲ್ಲ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿದೆ. ಹುಡುಕಾಟ ನಡೆಸಲು ಲುಕ್ ಔಟ್ ನೋಟಿಸ್ ನೀಡಲಾಗಿದೆ.
ಆದಿತ್ಯ ಆಳ್ವಾ ಎಲ್ಲಿದ್ದಾರೆ?
ಮಾಜಿ ಸಚಿವ ಜೀವರಾಜ್ ಆಳ್ವಾ ಪುತ್ರ ಆದಿತ್ಯ ಆಳ್ವಾ ಸೆ.4ರಿಂದ ನಾಪತ್ತೆಯಾಗಿದ್ದಾರೆ. ಈ ಪ್ರಕರಣದಿಂದ ತಮ್ಮನ್ನು ಕೈಬಿಡಬೇಕು ಎಂದು ಅವರು ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಆದಿತ್ಯ ಆಳ್ವಾ ಒಡೆತನದ ರೆಸಾರ್ಟ್ ಮೇಲೆ ಪೊಲೀಸರು ದಾಳಿ ಮಾಡಿದ್ದರು. ಈ ಕುರಿತು ಸಹ ವಿಚಾರಣೆ ನಡೆಸಲು ಅವರನ್ನು ಹುಡುಕಬೇಕಿದೆ.
Recommended Video
ಹಲವಾರ ವಿಚಾರಣೆ
ಮಾದಕ ದ್ರವ್ಯ ಪೂರೈಕೆ ಜಾಲದ ಬಗ್ಗೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು ನಟಿ ರಾಗಿಣಿ, ಸಂಜನಾ ಗಲ್ರಾನಿ ಬಂಧಿಸಿ ವಿಚಾರಣೆ ನಡೆಸಿದ್ದರು. ದಿಗಂತ್ ಮತ್ತು ಐಂದ್ರತಾ ದಂಪತಿ, ಅಕುಲ್ ಬಾಲಾಜಿ, ಸಂತೋಷ್ ಸೇರಿದಂತೆ ಹಲವರ ವಿಚಾರಣೆ ನಡೆಸಿದ್ದಾರೆ.